Headlines

ಮೊದಲು ಆಯ್ಕೆ ಮಾಡಲಿ, ನಾನಂತು ರೆಡಿ ಇದ್ದೇನೆ: ಭುವನೇಶ್ವರ್ ಕುಮಾರ್ – Kannada News | If I get a call, I’m absolutely ready: Bhuvneshwar Kumar on India comeback.

ಭಾರತ ತಂಡದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಸಿದ್ಧ ಎಂದು ಹೇಳಿದ್ದಾರೆ. ಯುಪಿ ಟಿ20 (UP T20) ಲೀಗ್‌ಗೂ ಮುನ್ನ ಲಕ್ನೋ ಫಾಲ್ಕನ್ಸ್ ತಂಡದ ತರಬೇತಿ ಶಿಬಿರದಲ್ಲಿ ಮಾತನಾಡಿದ 36 ವರ್ಷದ ಈ ಸ್ವಿಂಗ್ ಮಾಂತ್ರಿಕ, ರಾಷ್ಟ್ರೀಯ ತಂಡಕ್ಕೆ ಮರಳುವ ತಮ್ಮ ಇಂಗಿತವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಆಯ್ಕೆಗಾರರ ನಿರ್ಧಾರಕ್ಕೆ ಕಾಯುತ್ತಿರುವ ‘ಭುವಿ’:

ರಾಷ್ಟ್ರೀಯ ತಂಡಕ್ಕೆ ಮರಳಿ ಆಯ್ಕೆಯಾಗುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಭುವನೇಶ್ವರ್, “ನನಗೆ ಮತ್ತೆ ಕರೆ ಬಂದರೆ ನಾನು ಬೇಡ ಎನ್ನಲು ಹೇಗೆ ಸಾಧ್ಯ? ನಾನು ಆಡಲು ಸಂಪೂರ್ಣವಾಗಿ ಸಿದ್ಧನಾಗಿದ್ದೇನೆ” ಎಂದು ಹೇಳಿದ್ದಾರೆ. ಆದರೆ, ತಂಡದಲ್ಲಿ ಸ್ಥಾನ ಸಿಗುತ್ತದೆಯೇ ಇಲ್ಲವೇ ಎಂಬುದು ಸಂಪೂರ್ಣವಾಗಿ ಆಯ್ಕೆಗಾರರ ಕೈಯಲ್ಲಿದೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

“ಆಯ್ಕೆ ಮಾಡುವುದಾದರೆ, ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ನಾನಂತು ರೆಡಿ ಇದ್ದೇನೆ. ಮೊದಲು ಆಯ್ಕೆ ಮಾಡಲಿ, ಆಯ್ಕೆ ಮಾಡಬೇಡಿ ಎಂದು ನಾನಂತು ಹೇಳಿಲ್ಲ. ಹಾಗೆ ಹೇಳಲು ಹೇಗೆ ಸಾಧ್ಯ. ಹೀಗಾಗಿ ನಾನು ಸಹ ಕಂಬ್ಯಾಕ್ ಅನ್ನು ಎದುರು ನೋಡುತ್ತಿದ್ದೇನೆ” ಎಂದು ಭುವನೇಶ್ವರ್ ಕುಮಾರ್ ಹೇಳಿದ್ದಾರೆ.

ಐಪಿಎಲ್ 2026ರ ಭರ್ಜರಿ ಪ್ರದರ್ಶನವೇ ಪ್ರೇರಣೆ:

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪರ ಆಡಿದ್ದ ಭುವನೇಶ್ವರ್ ಕುಮಾರ್, ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಹೊಸ ಚೆಂಡಿನಲ್ಲಿ ಅವರು ತೋರಿದ ಸ್ವಿಂಗ್ ಜಾದೂ, ಅವರು ಇಂದಿಗೂ ವಿಶ್ವದರ್ಜೆಯ ಬೌಲರ್ ಎಂಬುದನ್ನು ಸಾಬೀತುಪಡಿಸಿದೆ. ಇದೇ ಕಾರಣಕ್ಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಅವರ ಕಂಬ್ಯಾಕ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ಒತ್ತಡವಿಲ್ಲದ ಆಟ, ಮನಸ್ಸಿಗೆ ನೆಮ್ಮದಿ:

ಭಾರತ ತಂಡಕ್ಕೆ ಮರಳುವ ಆಸೆ ಇದ್ದರೂ, ಅದನ್ನೇ ಯೋಚಿಸುತ್ತಾ ತಮಗೆ ತಾವೇ ಒತ್ತಡ ಹೇರಿಕೊಳ್ಳುತ್ತಿಲ್ಲ ಎಂದು ಭುವಿ ಹೇಳಿದ್ದಾರೆ. “ನಾನು ಈಗಾಗಲೇ ಭಾರತದ ಪರ ಆಡುವ ನನ್ನ ಕನಸನ್ನು ನನಸು ಮಾಡಿಕೊಂಡಿದ್ದೇನೆ. ಈಗ ನಾನು ಕೇವಲ ಕ್ರಿಕೆಟ್ ಮೇಲಿನ ಪ್ರೀತಿಗಾಗಿ ಆಡುತ್ತಿದ್ದೇನೆ. ಸದ್ಯ ನನ್ನ ವೃತ್ತಿಜೀವನ ಇರುವ ಸ್ಥಿತಿಯ ಬಗ್ಗೆ ನನಗೆ ತೃಪ್ತಿ ಮತ್ತು ನೆಮ್ಮದಿಯಿದೆ” ಎಂದು ಅವರು ತಮ್ಮ ಬದಲಾದ ಮನಸ್ಥಿತಿಯನ್ನು ಹಂಚಿಕೊಂಡಿದ್ದಾರೆ.

ಅಶ್ವಿನ್ ಹಾಗೂ ಕೈಫ್ ಬೆಂಬಲ!

ಭುವನೇಶ್ವರ್ ಕುಮಾರ್ ಅವರ ಈ ಫಾರ್ಮ್ ನೋಡಿ ಮಾಜಿ ಆಟಗಾರರಾದ ರವಿಚಂದ್ರನ್ ಅಶ್ವಿನ್ ಮತ್ತು ಮೊಹಮ್ಮದ್ ಕೈಫ್ ಕೂಡ ಭುವಿ ಪರ ಧ್ವನಿ ಎತ್ತಿದ್ದಾರೆ. ಮುಂಬರುವ 2027ರ ಏಕದಿನ ವಿಶ್ವಕಪ್‌ ಯೋಜನೆಗೆ ಭುವನೇಶ್ವರ್ ಅವರಂತಹ ಅನುಭವಿ ಬೌಲರ್ ತಂಡಕ್ಕೆ ಅಗತ್ಯವಿದ್ದು, ವಿಶೇಷವಾಗಿ ಸೌತ್ ಆಫ್ರಿಕಾದಂತಹ ಪಿಚ್‌ಗಳಲ್ಲಿ ಅವರ ಸ್ವಿಂಗ್ ಭಾರತಕ್ಕೆ ನೆರವಾಗಲಿದೆ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: RCB ಮಾಸ್ಟರ್​ಮೈಂಡ್​ಗಳ ರಣತಂತ್ರ ಉಲ್ಟಾ ಪಲ್ಟಾ!

ಮುಂದಿನ ನಡೆ ಏನು?

ಸದ್ಯ ತಮ್ಮ ಫಿಟ್‌ನೆಸ್ ಕಾಯ್ದುಕೊಳ್ಳುವತ್ತ ಗಮನ ಹರಿಸಿರುವ ಭುವನೇಶ್ವರ್ ಕುಮಾರ್, ಯುಪಿ ಟಿ20 ಲೀಗ್‌ನಲ್ಲಿ ಲಕ್ನೋ ಫಾಲ್ಕನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇದಾದ ನಂತರ ಉತ್ತರ ಪ್ರದೇಶ ತಂಡದ ಪರವಾಗಿ ದೇಶಿ ಕ್ರಿಕೆಟ್‌ನ ರೆಡ್-ಬಾಲ್ ಮತ್ತು ವೈಟ್-ಬಾಲ್ ಪಂದ್ಯಾವಳಿಗಳಲ್ಲೂ ಅವರು ಕಣಕ್ಕಿಳಿಯಲಿದ್ದಾರೆ. ಇದರ ನಡುವೆ ಆಯ್ಕೆಗಾರರು ಭುವಿಯನ್ನು ಮತ್ತೆ ಟೀಮ್ ಇಂಡಿಯಾಗೆ ಕರೆತರಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.

Source link

Leave a Reply

Your email address will not be published. Required fields are marked *