
ಹೊಸ ವರ್ಷದ ಆರಂಭದಲ್ಲಿ ಅಂದರೆ ಸೂರ್ಯೋದಯದ ಕಾಲದಲ್ಲಿ ಗ್ರಹಗತಿಗಳು ಹೇಗಿರುತ್ತವೋ ಹಾಗೆ ವರ್ಷಪೂರ್ತಿ ಅದರ ಪ್ರಭಾವ ಇರುತ್ತದೆ. ಇಂದು ಮುಖ್ಯವಾಗಿ ಮೀನ ರಾಶಿಯಲ್ಲಿ ಸೂರ್ಯ, ಚಂದ್ರ, ಶುಕ್ರ ಮತ್ತು ಶನಿ ಸೇರಿರುವ ಅಸಾಧಾರಣ ಗ್ರಹಗತಿಗಳನ್ನು ಆಧರಿಸಿದೆ. ಗುರುವಾರವಾದ ಕಾರಣ ಗುರುವು ಲಗ್ನದಿಂದ ಚತುರ್ಥ ಸ್ಥಾನದಲ್ಲಿ ಇದ್ದಾನೆ.
ಈ ವರ್ಷವು ನಿಮ್ಮ ಜೀವನದಲ್ಲಿ ಪ್ರಮುಖ ಬದಲಾವಣೆಗಳನ್ನು ಮತ್ತು ಹೊಸ ಆರಂಭಗಳನ್ನು ತರುವ ಸೂಚನೆ ನೀಡುತ್ತಿದೆ. ಲಗ್ನ ಮತ್ತು ರಾಶಿ ಎರಡೂ ಮೀನವಾಗಿರುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ದೈವಿಕ ಚಿಂತನೆ ಮತ್ತು ತಾಳ್ಮೆ ಹೆಚ್ಚಾಗಿ ಕಂಡುಬರುತ್ತದೆ.
ವೃತ್ತಿ ಮತ್ತು ಆರ್ಥಿಕ ಸ್ಥಿತಿ :
ದಶಮ ಸ್ಥಾನದ ಅಧಿಪತಿ ಗುರುವು ಮಿಥುನ ರಾಶಿಯಲ್ಲಿದ್ದು, ಚತುರ್ಥ ಸ್ಥಾನದಲ್ಲಿರುವುದರಿಂದ ವೃತ್ತಿ ಜೀವನದಲ್ಲಿ ಸ್ಥಿರತೆ ಇರುತ್ತದೆ.
ಜ್ಞಾನಕ್ಕೆ ಸಂಬಂಧಿಸಿದ ಕೆಲಸಗಳು ಅಂದರೆ ಬೋಧನೆ, ಸಲಹೆಗಾರಿಕೆ ಅಥವಾ ಬರವಣಿಗೆ ಕ್ಷೇತ್ರಗಳಲ್ಲಿರುವವರಿಗೆ ಉತ್ತಮ ಪ್ರಗತಿ ಇದೆ. ಕುಂಭ ರಾಶಿಯಲ್ಲಿ ಬುಧ, ರಾಹು ಮತ್ತು ಮಂಗಳ ಇರುವುದರಿಂದ ಆರ್ಥಿಕ ವಿಷಯದಲ್ಲಿ ಮಿಶ್ರ ಫಲಗಳಿವೆ. ಅನಿರೀಕ್ಷಿತ ಖರ್ಚುಗಳು ಬರಬಹುದು, ಆದ್ದರಿಂದ ಹೂಡಿಕೆ ಮಾಡುವಾಗ ಎಚ್ಚರಿಕೆ ಅಗತ್ಯ.
ಕೌಟುಂಬಿಕ ಮತ್ತು ಸಾಮಾಜಿಕ ಜೀವನ :
ಗುರುವು ಸುಖ ಸ್ಥಾನದಲ್ಲಿ ಇರುವುದು ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿಯನ್ನು ತರುತ್ತದೆ. ಹೊಸ ಮನೆ ಖರೀದಿಸುವ ಅಥವಾ ಮನೆಯನ್ನು ನವೀಕರಿಸುವ ಯೋಗವಿದೆ. ಸಪ್ತಮ ಸ್ಥಾನದಲ್ಲಿ ಕೇತು ಇರುವುದರಿಂದ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಅನಗತ್ಯ ವಾದಗಳನ್ನು ತಪ್ಪಿಸುವುದು ಒಳಿತು.
ಆರೋಗ್ಯ ಮತ್ತು ಮಾನಸಿಕ ಸ್ಥಿತಿ :
ಲಗ್ನದಲ್ಲೇ ಶನಿ ಮತ್ತು ಚಂದ್ರನ ಯುತಿ ವಿಷ ಯೋಗದ ಪ್ರಭಾವ ಇರುವುದರಿಂದ ಮಾನಸಿಕವಾಗಿ ಸ್ವಲ್ಪ ಒತ್ತಡ ಅಥವಾ ಆತಂಕ ಕಾಡಬಹುದು. ಕಾಲು ನೋವು ಅಥವಾ ನಿದ್ರಾಹೀನತೆಯಂತಹ ಸಮಸ್ಯೆಗಳ ಬಗ್ಗೆ ಗಮನವಿರಲಿ.
ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ :
ವಿದ್ಯಾಭ್ಯಾಸಕ್ಕೆ ಈ ವರ್ಷ ಬಹಳ ಪೂರಕವಾಗಿದೆ. ಬುಧನ ಸ್ಥಾನವು ತಾರ್ಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಹೆಚ್ಚಿನ ಶ್ರಮ ಬೇಕಾಗುತ್ತದೆ.
ಗುರು ಬಲವು ನಿಮಗೆ ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಯಾವುದೇ ದೊಡ್ಡ ಸಂಕಷ್ಟ ಬಂದರೂ ಅದರಿಂದ ಪಾರಾಗುವ ಹಾದಿ ಸಿಗುತ್ತದೆ. ಲಗ್ನದಲ್ಲಿ ಸೂರ್ಯ ಮತ್ತು ಶನಿ ಒಟ್ಟಿಗೆ ಇರುವುದರಿಂದ ಸರ್ಕಾರಿ ಕೆಲಸಗಳಲ್ಲಿ ಅಥವಾ ಮೇಲಾಧಿಕಾರಿಗಳೊಂದಿಗೆ ವ್ಯವಹರಿಸುವಾಗ ತಾಳ್ಮೆಯಿಂದಿರಿ.
ಹನುಮಾನ್ ಚಾಲೀಸಾ ಪಠಿಸುವುದು ಮತ್ತು ಗುರುವಾರ ದಕ್ಷಿಣಾಮೂರ್ತಿಯ ಆರಾಧನೆ ಮಾಡುವುದು, ಗುರು ಚರಿತ್ರೆಯ ಪಠಣ, ಗುರುಸನ್ನಿಧಿ, ಗುರುದರ್ಶನ ಇವೆನ್ನಲ್ಲ ಆರಂಭದಿಂದಲೇ ಮಾಡಿ. ನಿಮಗೆ ಹೆಚ್ಚಿನ ಯಶಸ್ಸನ್ನು ನೀಡುತ್ತದೆ. ನಿಮ್ಮ ಸಮಸ್ಯೆಗಳಿಗೆ ಗುರುಮುಖೇನ ಪರಿಹಾರ ಸಿಗಲಿದೆ. ಮಹಾವಿಷ್ಣುವಿನ ಆರಾಧನೆಯಿಂದ ಶ್ರೇಯಸ್ಸು.
ಒಟ್ಟಿನಲ್ಲಿ ಎಲ್ಲರೂ ಸಂರತೋಷದಿಂದ ಪರರಿಗೂ ಸಂತೋಷವನ್ನು ನೀಡುತ್ತ ಕಳೆಯಿರಿ. ಶುಭಂ ಭವತು ಸರ್ವದಾ.
– ಲೋಹಿತ ಹೆಬ್ಬಾರ್