ರಾಗಿಣಿ ದ್ವಿವೇದಿ, ವರಲಕ್ಷ್ಮೀ ನಟನೆಯ ‘ಪೊಲೀಸ್ ಕಂಪ್ಲೈಂಟ್’ ಜೂನ್ 12ಕ್ಕೆ ಬಿಡುಗಡೆ – Kannada News

ಮಹಿಳಾ ಪ್ರಧಾನ ಕಥಾಹಂದರ ಇರುವ ಸಿನಿಮಾಗಳಿಗೆ ಅದರದ್ದೇ ಆದ ಪ್ರೇಕ್ಷಕರ ವರ್ಗವಿದೆ. ಆದರೆ ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಅಂಥ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಈಗ ರಾಗಿಣಿ ದ್ವಿವೇದಿ (Ragini Dwivedi) ಮತ್ತು ವರಲಕ್ಷ್ಮೀ ಶರತ್ ಕುಮಾರ್ ಅಭಿನಯಿಸಿರುವ ಮಹಿಳಾ ಪ್ರಧಾನ ಸಿನಿಮಾ ‘ಪೊಲೀಸ್ ಕಂಪ್ಲೈಂಟ್’ ಬಿಡುಗಡೆಗೆ ಸಜ್ಜಾಗಿದೆ. ಜೂನ್ 12ರಂದು ಈ ಚಿತ್ರ ರಿಲೀಸ್ ಆಗಲಿದೆ. ನವೀನ್ ಚಂದ್ರ, ಕೃಷ್ಣ ಸಾಯಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ರವಿಶಂಕರ್, ಶರತ್ ಲೋಹಿತಾಶ್ವ, ಅನಿಲ್ ರಾಜ್, ಸಪ್ತಗಿರಿ, ಪೃಥ್ವಿರಾಜ್, ಜೆಮಿನಿ ಸುರೇಶ್ ಮುಂತಾದವರು ‘ಪೊಲೀಸ್ ಕಂಪ್ಲೈಂಟ್’ (Police Complaint) ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಸಂಜೀವ ಮೆಗೋಟಿ ಅವರು ‘ಪೊಲೀಸ್ ಕಂಪ್ಲೈಂಟ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅವರು ಪೂಜಾ ಗಾಂಧಿ ನಟನೆಯ ‘ಅನು’, ‘ದಂಡು’, ‘ಆಪ್ತ’, ‘ಆದಿ ಪರ್ವ’ ಮುಂತಾದ ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದರು. ‘ಎಂ.ಎಸ್.ಕೆ. ಪ್ರಮೀದಾಶ್ರೀ ಫಿಲ್ಮ್ಸ್’ ಮೂಲಕ ‘ಪೊಲೀಸ್ ಕಂಪ್ಲೈಂಟ್’ ಸಿನಿಮಾ ನಿರ್ಮಾಣ ಆಗಿದೆ. ತೆಲುಗಿನಲ್ಲಿ ಹಲವು ಸಿನಿಮಾ ಮಾಡಿರುವ ನಟ ಕೃಷ್ಣಸಾಯಿ ಅವರಿಗೆ ಕನ್ನಡದಲ್ಲಿ ನಾಯಕ ನಟನಾಗಿ ಇದು ಮೊದಲ ಸಿನಿಮಾ.

‘ಪೊಲೀಸ್ ಕಂಪ್ಲೈಂಟ್’ ಸಿನಿಮಾದ ಬಗ್ಗೆ ನಿರ್ದೇಶಕ ಸಂಜೀವ ಮೆಗೋಟಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಸುಮಾರು 10 ವರ್ಷದ ನಂತರ ಕನ್ನಡದಲ್ಲಿ ಸಿನಿಮಾ ನಿರ್ದೇಶಿಸಿ ಪ್ರೇಕ್ಷಕರ ಮುಂದೆ ತರುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇದೊಂದು ಆ್ಯಕ್ಷನ್, ಹಾರರ್-ಥ್ರಿಲ್ಲರ್ ಕಥಾಹಂದರ ಇರುವ ಸಿನಿಮಾ. ನಾವು ಮಾಡಿದ ಕರ್ಮ ಹೇಗೆ ನಮ್ಮನ್ನು ಕಾಡುತ್ತದೆ ಎಂಬ ಒಂದು ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಕನ್ನಡ ಮತ್ತು ತೆಲುಗಿನ ಸುಮಾರು 50ಕ್ಕೂ ಹೆಚ್ಚಿನ ಕಲಾವಿದರು ಈ ಸಿನಿಮಾದ ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ’ ಎಂದು ಅವರು ಹೇಳಿದರು.

ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರು ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅವರು, ‘ಇದು ಹೊಸ ತಲೆಮಾರಿನ ಪ್ರೇಕ್ಷಕರಿಗೆ ಬಹುಬೇಗ ಕನೆಕ್ಟ್ ಆಗುವ ಸಿನಿಮಾ. ಇದರಲ್ಲಿ ಮನಮುಟ್ಟುವ ಕಥೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ಕೂಡ ಇದೆ. ಆ್ಯಕ್ಷನ್, ಥ್ರಿಲ್ಲರ್, ಸಸ್ಪೆನ್ಸ್ ಹೀಗೆ ಎಲ್ಲ ರೀತಿಯ ಮನರಂಜನೆ ಇದೆ’ ಎಂದಿದ್ದಾರೆ.

ಇದನ್ನೂ ಓದಿ: ರಾಗಿಣಿ ದ್ವಿವೇದಿ ಹೊಸ ಸಿನಿಮಾಗೆ ಜಗ್ಗೇಶ್ ಮಕ್ಕಳ ನಿರ್ದೇಶನ; ಕೆ. ಮಂಜು ನಿರ್ಮಾಣ

ನಟಿ ರಾಗಿಣಿ ದ್ವಿವೇದಿ ಕೂಡ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ‘ನನ್ನ ವೃತ್ತಿಜೀವನದಲ್ಲಿ ಪೊಲೀಸ್ ಕಂಪ್ಲೈಂಟ್ ಒಂದು ವಿಭಿನ್ನ ಸಿನಿಮಾ. ಇದರಲ್ಲಿ ತಾಯಿ ಹಾಗೂ ಮಗುವಿನ ಸಂಬಂಧದ ಸುತ್ತ ನನ್ನ ಪಾತ್ರ ಸಾಗುತ್ತದೆ. ಆ್ಯಕ್ಷನ್, ಹಾರರ್ ಜೊತೆಗೆ ಎಮೋಶನ್ಸ್ ಸಹ ಸಿನಿಮಾದಲ್ಲಿದೆ. ಎಲ್ಲಾ ರೀತಿಯ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಲಿದೆ’ ಎಂದು ರಾಗಿಣಿ ದ್ವಿವೇದಿ ಅವರು ಹೇಳಿದರು. ಆರೋಹಣ ಸುಧೀಂದ್ರ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಹರೀಶ್ ಸೊಂಡೇಕೊಪ್ಪ ಅವರು ಛಾಯಾಗ್ರಹಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *