Headlines

ರಾಜಾ ರಘುವಂಶಿ ಕೊಲೆ ಪ್ರಕರಣ: ಪತ್ನಿ ಸೋನಮ್ ಜಾಮೀನಿಗೆ ತಡೆ ನೀಡಲು ಸುಪ್ರೀಂ ನಕಾರ – Kannada News | Supreme Court Refuses to Stay Sonam Raghuvanshi’s Bail in Raja Raghuvanshi death case

ನವದೆಹಲಿ, ಜುಲೈ 03: ಕಳೆದ ವರ್ಷ ಮೇಘಾಲಯದ ಪ್ರವಾಸಿ ತಾಣ ಸೊಹ್ರಾದಲ್ಲಿ ನಡೆದ ಇಂದೋರ್ ಮೂಲದ ರಾಜಾ ರಘುವಂಶಿ(Raja Raghuvanshi) ಕೊಲೆ ಪ್ರಕರಣದ ಪ್ರಮುಖ ಆರೋಪಿ, ಅವರ ಪತ್ನಿ ಸೋನಮ್​ಗೆ ಸಿಕ್ಕಿರುವ ಜಾಮೀನಿಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮೇಘಾಲಯ ಹೈಕೋರ್ಟ್ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರ ಪೀಠವು ಈ ಆದೇಶ ನೀಡಿದೆ.

ಆರೋಪಿ ಈಗಾಗಲೇ ಜೈಲಿನಿಂದ ಬಿಡುಗಡೆಯಾಗಿರುವುದರಿಂದ ಈ ಹಂತದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ಕೋರ್ಟ್ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?
ಕಳೆದ ವರ್ಷ ಮೇ ತಿಂಗಳಲ್ಲಿ ಮಧ್ಯಪ್ರದೇಶದ ಇಂದೋರ್ ನಿವಾಸಿಗಳಾದ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಮೇಘಾಲಯಕ್ಕೆ ಹನಿಮೂನ್‌ಗೆ ಹೋಗಿದ್ದಾಗ ನಾಪತ್ತೆಯಾಗಿದ್ದರು. 9 ದಿನಗಳ ನಂತರ ರಾಜಾ ಅವರ ಮೃತದೇಹ ಆಳವಾದ ಕಂದಕದಲ್ಲಿ ಪತ್ತೆಯಾಗಿತ್ತು. ಇದು ಪೂರ್ವನಿಯೋಜಿತ ಕೊಲೆ ಎಂದು ಆರೋಪಿಸಿ, ಕಳೆದ ವರ್ಷ ಜೂನ್‌ನಲ್ಲಿ ಪತ್ನಿ ಸೋನಮ್‌ರನ್ನು ಪೊಲೀಸರು ಬಂಧಿಸಿದ್ದರು.

ಜಾಮೀನು ಸಿಗಲು ಕಾರಣವಾದ ‘ಪೊಲೀಸರ ತಪ್ಪು’
ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಸೋನಮ್‌ಗೆ ಜಾಮೀನು ನೀಡಲು ಪೊಲೀಸರ ಬೇಜವಾಬ್ದಾರಿತನವೇ ಪ್ರಮುಖ ಕಾರಣವಾಗಿದೆ,

ಮತ್ತಷ್ಟು ಓದಿ: ಮೇಘಾಲಯ ಹನಿಮೂನ್ ಕೊಲೆ ಪ್ರಕರಣ; ಸೋನಂ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ ಮೊರೆಹೋದ ಮೃತನ ಕುಟುಂಬಸ್ಥರು!

ತಪ್ಪು ಸೆಕ್ಷನ್ ದಾಖಲು: ಪೊಲೀಸರು ಬಂಧನದ ದಾಖಲೆಗಳಲ್ಲಿ ಕೊಲೆ ಅಪರಾಧಕ್ಕೆ ಸಂಬಂಧಿಸಿದ ಸೆಕ್ಷನ್ 103(1) ಬದಲಿಗೆ, ತಪ್ಪು ಸೆಕ್ಷನ್ ಆದ 403(1) ಅನ್ನು ಉಲ್ಲೇಖಿಸಿದ್ದರು. ಬಂಧನಕ್ಕೆ ನಿಖರ ಕಾರಣ ಏನೆಂಬುದನ್ನು ಆರೋಪಿಗೆ ಸರಿಯಾಗಿ ತಿಳಿಸಿಲ್ಲ. ಪೊಲೀಸರು ಯಾವುದೇ ಯೋಚನೆ ಮಾಡದೆ ಕೇವಲ ರೆಡಿಮೇಡ್ ಟೆಂಪ್ಲೇಟ್‌ಗಳನ್ನು ಕಾಪಿ-ಪೇಸ್ಟ್ ಮಾಡಿ ದಾಖಲೆ ಸೃಷ್ಟಿಸಿದ್ದಾರೆ ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ನಡೆದ ವಾದ-ವಿವಾದ
ಮೇಘಾಲಯ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದೊಂದು ಗಂಭೀರ ಕೊಲೆ ಪ್ರಕರಣ. ಕೇವಲ ಟೈಪಿಂಗ್ ದೋಷದಿಂದಾಗಿ ಆರೋಪಿಗೆ ಜಾಮೀನು ನೀಡಿರುವುದು ಆಘಾತಕಾರಿ. ಪ್ರಕರಣದಲ್ಲಿ ಇನ್ನೂ 94 ಸಾಕ್ಷಿಗಳ ವಿಚಾರಣೆ ಬಾಕಿ ಇದೆ ಎಂದು ವಾದಿಸಿದರು.

ವಾದದ ವೇಳೆ ತುಷಾರ್ ಮೆಹ್ತಾ ಅವರು, ಇತ್ತೀಚೆಗೆ ಪತಿಯ ವಿಗ್ ವಿಷಯಕ್ಕಾಗಿ ಪತ್ನಿಯೇ ಕೊಲೆ ಮಾಡಿದ ಮತ್ತೊಂದು ವಿಚಿತ್ರ ಪ್ರಕರಣವನ್ನು ಉದಾಹರಣೆಯಾಗಿ ಕೋರ್ಟ್ ಗಮನಕ್ಕೆ ತಂದರು. ಹೈಕೋರ್ಟ್ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಪ್ರಾಥಮಿಕ ಆಕ್ಷೇಪ ವ್ಯಕ್ತಪಡಿಸಿದ್ದು, ಸದ್ಯ ಜಾಮೀನಿಗೆ ತಡೆ ನೀಡದಿದ್ದರೂ, ತನಿಖೆಯ ಪ್ರಗತಿಯನ್ನು ಗಮನಿಸುವುದಾಗಿ ಹೇಳಿದೆ. ಜೊತೆಗೆ ಆರೋಪಿ ಸೋನಮ್‌ಗೆ ನೋಟಿಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಯನ್ನು ಜುಲೈ 10 ಕ್ಕೆ ಮುಂದೂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *