ಬೆಂಗಳೂರು, ಜೂನ್ 26: ಚುನಾವಣೆಗಳಲ್ಲಿ ಮತದಾರರನ್ನು ಸೆಳೆಯಲು ಈಗ ಜನಪ್ರಿಯ ಘೋಷಣೆಗಳನ್ನು ಹೊರಡಿಸುವ, ಮತ್ತು ಜನಪ್ರಿಯ ಸ್ಕೀಮ್ಗಳನ್ನು ನಡೆಸುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳಿಗೆ ಎಚ್ಚರಿಕೆ ನೀಡುವ ವರದಿ ಇದು. 2022-23ರ ಆರ್ಥಿಕ ವರ್ಷದಲ್ಲಿ ಆದಾಯ ಮಿಗುತೆ (Revenue Surplus) ಹೊಂದಿದ್ದ ಕರ್ನಾಟಕ, ತೆಲಂಗಾಣ, ಛತ್ತೀಸ್ಗಢ ಮತ್ತು ಬಿಹಾರ ರಾಜ್ಯಗಳು, ಕೇವಲ ಎರಡೇ ವರ್ಷಗಳಲ್ಲಿ ಅಂದರೆ 2024-25ರ ವೇಳೆಗೆ ತೀವ್ರ ಆದಾಯ ಕೊರತೆ (Revenue Deficit) ಅನುಭವಿಸುತ್ತಿವೆ ಎಂದು ಸಿಎಜಿ ವರದಿ ತಿಳಿಸಿದೆ. ಈ ನಾಲ್ಕು ರಾಜ್ಯಗಳ ಒಟ್ಟು ಆದಾಯ ಕೊರತೆ ₹35,710 ಕೋಟಿಗೆ ತಲುಪಿದೆ.
ವಿಪರ್ಯಾಸವೆಂದರೆ, 15ನೇ ಹಣಕಾಸು ಆಯೋಗವು ಈ ರಾಜ್ಯಗಳು 2024-25ರಲ್ಲಿ ಒಟ್ಟಾರೆ ₹1.14 ಲಕ್ಷ ಕೋಟಿ ಲಾಭದಲ್ಲಿರಲಿವೆ ಎಂದು ಅಂದಾಜಿಸಿತ್ತು. ಆದರೆ, ಗ್ಯಾರಂಟಿ ಯೋಜನೆಗಳು ಮತ್ತು ಸಬ್ಸಿಡಿಗಳ ಅತಿಯಾದ ವೆಚ್ಚದಿಂದಾಗಿ ಲೆಕ್ಕಾಚಾರ ಉಲ್ಟಾ ಆಗಿದೆ. ಸಬ್ಸಿಡಿಗಳಿಂದ ಅತಿಹೆಚ್ಚು ಆದಾಯ ನಷ್ಟ ಕಂಡಿರುವ ರಾಜ್ಯಗಳಲ್ಲಿ ಕರ್ನಾಟಕವೇ ಅಗ್ರಗಣ್ಯ ಎನ್ನಲಾಗಿದೆ.
ಕರ್ನಾಟಕದಲ್ಲಿ ಸಬ್ಸಿಡಿಗಾಗೇ ಶೇ. 14 ಹಣ ವೆಚ್ಚ
ಆದಾಯ ಮತ್ತು ವೆಚ್ಚದ ಅನುಪಾತ ತೆಗೆದುಕೊಂಡರೆ ಅತಿಹೆಚ್ಚು ಪ್ರಮಾಣದ ಸಬ್ಸಿಡಿ ನೀಡುತ್ತಿರುವ ರಾಜ್ಯ ಕರ್ನಾಟಕ ಎಂದು ಸಿಎಜಿ ವರದಿ ಹೇಳಿದೆ. ಕರ್ನಾಟಕದ ಆದಾಯವು ಶೇ. 10.6 ರಷ್ಟು ಬೆಳೆದು ₹2.58 ಲಕ್ಷ ಕೋಟಿಗೆ ತಲುಪಿದ್ದರೂ, ರಾಜ್ಯದ ವೆಚ್ಚಗಳು ಶೇ. 15 ರಷ್ಟು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ. ಇದರಿಂದಾಗಿ ರಾಜ್ಯವು ₹20,834 ಕೋಟಿ ಆದಾಯ ಕೊರತೆ ಎದುರಿಸುತ್ತಿದೆ ಎಂಬುದನ್ನು ಮಹಾಲೇಖಪಾಲರ ವರದಿ ಎತ್ತಿ ತೋರಿಸಿದೆ.
ಸಬ್ಸಿಡಿ ಹೊರೆ: ಒಟ್ಟು ಬಜೆಟ್ ವೆಚ್ಚದಲ್ಲಿ ಸಬ್ಸಿಡಿಗಳಿಗಾಗಿಯೇ ಅತಿ ಹೆಚ್ಚು (ಶೇ. 14 ರಷ್ಟು) ಹಣ ಖರ್ಚು ಮಾಡುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕ ಎಂದು ಸಿಎಜಿ ಗುರುತಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದ ಸಬ್ಸಿಡಿ ಬಿಲ್ ಶೇ. 49 ರಷ್ಟು ಜಿಗಿದಿದೆ.
ಉಚಿತ ವಿದ್ಯುತ್ ಯೋಜನೆಗೆ (Energy Subsidies) ಹೆಚ್ಚುವರಿಯಾಗಿ ₹8,086 ಕೋಟಿ ಖರ್ಚಾಗಿದೆ. ಸಾರಿಗೆ ಸಬ್ಸಿಡಿ (ಉಚಿತ ಬಸ್ ಪ್ರಯಾಣ) ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. ಸಾಮಾಜಿಕ ಕಲ್ಯಾಣ ಮತ್ತು ಪೌಷ್ಟಿಕಾಂಶ ಯೋಜನೆಗಳ ವೆಚ್ಚ ₹32,677 ಕೋಟಿಯಿಂದ ₹49,592 ಕೋಟಿಗೆ ಏರಿದೆ.
ಇದನ್ನೂ ಓದಿ: ಎಐ ‘ಕಿಲ್ ಸ್ವಿಚ್’ ಕಡ್ಡಾಯ: ಬ್ಯಾಂಕುಗಳಿಗೆ ಆರ್ಬಿಐ ಹೊಸ ಪ್ರಸ್ತಾಪಿತ ನಿಯಮ
ತೆಲಂಗಾಣಕ್ಕೆ ಸಬ್ಸಿಡಿ ಬರೆ; ಭಾರೀ ನಷ್ಟದ ಹೊರೆ
ತೆಲಂಗಾಣದ ಸ್ವಂತ ತೆರಿಗೆ ಆದಾಯವು ₹1.11 ಲಕ್ಷ ಕೋಟಿಯಿಂದ ₹1.09 ಲಕ್ಷ ಕೋಟಿಗೆ ಕುಸಿದಿದೆ. ಇಲ್ಲಿ ಸಾಮಾಜಿಕ ಕಲ್ಯಾಣ ಸಬ್ಸಿಡಿಗಳು ನಾಲ್ಕು ಪಟ್ಟು ಹೆಚ್ಚಾಗಿದ್ದು, ಒಟ್ಟು ಸಬ್ಸಿಡಿ ವೆಚ್ಚ ಶೇ. 65 ರಷ್ಟು ಏರಿಕೆಯಾಗಿ ₹15,553 ಕೋಟಿಗೆ ತಲುಪಿದೆ. ಕಳೆದ ವರ್ಷದಲ್ಲಿ ಕೇವಲ 2 ದಿನಗಳನ್ನು ಹೊರತುಪಡಿಸಿ ಇಡೀ ವರ್ಷ ಆರ್ಬಿಐನಿಂದ ಸಾಲ ಪಡೆಯುವ ಪರಿಸ್ಥಿತಿ ತೆಲಂಗಾಣಕ್ಕೆ ಬಂದಿತ್ತು. ಇದರಿಂದಾಗಿ ₹779 ಕೋಟಿ ಲಾಭದಲ್ಲಿದ್ದ ರಾಜ್ಯ ₹9,420 ಕೋಟಿ ನಷ್ಟಕ್ಕೆ ಸಿಲುಕಿದೆ.
ಛತ್ತೀಸ್ಗಢ ಸಬ್ಸಿಡಿ ವೆಚ್ಚ ಶೇ. 53 ಏರಿಕೆ
2022-23ರಲ್ಲಿ ₹8,592 ಕೋಟಿ ಲಾಭದಲ್ಲಿದ್ದ ಛತ್ತೀಸ್ಗಡ ರಾಜ್ಯದ ಸಬ್ಸಿಡಿ ವೆಚ್ಚಗಳು ಕಳೆದ ವರ್ಷ (2024-25) ಶೇ. 53 ರಷ್ಟು ಹೆಚ್ಚಾಗಿ ₹16,539 ಕೋಟಿಗೆ ತಲುಪಿವೆ. ವಿಶೇಷವಾಗಿ ಕೃಷಿ ವಲಯದ ಸಬ್ಸಿಡಿಗಳು ದುಪ್ಪಟ್ಟಾಗಿದ್ದು, ₹7,905 ಕೋಟಿಗೆ ಏರಿದೆ.
ಬಿಹಾರದ ಅರ್ಧ ಆದಾಯ ಸಂಬಳ, ಪಿಂಚಣಿ, ಬಡ್ಡಿಗೇ ಸಂದಾಯ
ಬಿಹಾರದಲ್ಲಿ ಸಾಮಾಜಿಕ ಸೇವೆಗಳ ವೆಚ್ಚ ಶೇ. 21 ರಷ್ಟು ಹೆಚ್ಚಾಗಿದೆ (ಶಿಕ್ಷಣ ವಲಯದಲ್ಲಿ ಶೇ. 33 ಮತ್ತು ಸಮಾಜ ಕಲ್ಯಾಣದಲ್ಲಿ ಶೇ. 64 ರಷ್ಟು ಏರಿಕೆ). ರಾಜ್ಯದ ಒಟ್ಟು ಆದಾಯ ವೆಚ್ಚದ ಶೇ. 52 ರಷ್ಟು ಭಾಗ ಕೇವಲ ಸರ್ಕಾರಿ ನೌಕರರ ಸಂಬಳ, ಪೆನ್ಷನ್ ಮತ್ತು ಸಾಲದ ಬಡ್ಡಿ ಪಾವತಿಸುವುದಕ್ಕೇ ಖರ್ಚಾಗುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ ಅಮೆಜಾನ್ ಬಿಗ್ ಪ್ಲಾನ್; ಸಿಇಒ ಆಂಡಿ ಜಸ್ಸಿ-ಮೋದಿ ಭೇಟಿ; ಐದು ವರ್ಷದಲ್ಲಿ 4.5 ಲಕ್ಷ ಕೋಟಿ ರೂ ಹೂಡಿಕೆ ಘೋಷಣೆ
ಆರ್ಥಿಕ ತಜ್ಞರು ಏನು ಹೇಳುತ್ತಾರೆ?
ಕೆನರಾ ಬ್ಯಾಂಕ್ನ ಮುಖ್ಯ ಆರ್ಥಿಕ ತಜ್ಞ ಮಾಧವನ್ಕುಟ್ಟಿ ಜಿ ಅವರು ಈ ಆರ್ಥಿಕ ಕುಸಿತಕ್ಕೆ ಕೆಲ ಕಾರಣಗಳನ್ನು ಗುರುತಿಸಿದ್ದಾರೆ. ಪ್ರಮುಖ ಮೂರು ಕಾರಣಗಳು ಹೀಗಿವೆ:
- ಜಿಎಸ್ಟಿ ಪರಿಹಾರ ಸ್ಥಗಿತ: ಕೇಂದ್ರ ಸರ್ಕಾರ ನೀಡುತ್ತಿದ್ದ ಜಿಎಸ್ಟಿ ಪರಿಹಾರದ ಅವಧಿ ಮುಗಿದಿರುವುದು (Phasing out of GST Compensation Cess) ಕರ್ನಾಟಕ ಮತ್ತು ತೆಲಂಗಾಣಕ್ಕೆ ದೊಡ್ಡ ಹೊಡೆತ ನೀಡಿದೆ.
- ಕೇಂದ್ರದ ಅನುದಾನ ಕೊರತೆ: ದಕ್ಷಿಣದ ರಾಜ್ಯಗಳಿಗೆ ಕೇಂದ್ರದಿಂದ ಬರುವ ತೆರಿಗೆ ಹಂಚಿಕೆ (Devolution) ಪ್ರಮಾಣ ಕಡಿಮೆಯಾಗಿದೆ. ರಾಜಕೀಯ ಸಿದ್ಧಾಂತಗಳ ಭಿನ್ನಾಭಿಪ್ರಾಯದಿಂದಾಗಿ ಹಲವು ಕೇಂದ್ರ ಪುರಸ್ಕೃತ ಯೋಜನೆಗಳನ್ನು ಜಾರಿಗೊಳಿಸದ ಕಾರಣ ಆ ಅನುದಾನಗಳೂ ಕೈತಪ್ಪಿವೆ.
- ಚುನಾವಣಾ ಉಚಿತ ಕೊಡುಗೆಗಳು: ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಘೋಷಿಸಿದ ಜನಪ್ರಿಯ ಉಚಿತ ಯೋಜನೆಗಳು ಮತ್ತು ಗ್ಯಾರಂಟಿಗಳು ರಾಜ್ಯಗಳ ಖಜಾನೆಯನ್ನು ಖಾಲಿ ಮಾಡುತ್ತಿವೆ. ಆದಾಯಕ್ಕಿಂತ ವೆಚ್ಚವೇ ವೇಗವಾಗಿ ಬೆಳೆಯುತ್ತಿರುವುದು ಈ ಆರ್ಥಿಕ ಕೊರತೆಗೆ ಮುಖ್ಯ ಕಾರಣವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ