Headlines

ರಾಜ್ಯದ ಜನತೆಗೆ ಶೀಘ್ರವೇ ಮತ್ತೊಂದು ದರ ಏರಿಕೆ ಬಿಸಿ: ಬೇಕರಿ ಉತ್ಪನ್ನಗಳ ಬೆಲೆ 3-5 ರೂ. ಹೆಚ್ಚಳ? – Kannada News | Price Hike Alert: Bakery Products and Sweets to Get Costlier by 3 to 5 Rupees in Karnataka

ಬೆಂಗಳೂರು, ಜುಲೈ 26: ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವುದು ಬೇಕರಿ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ಕಳೆದ ಕೆಲವು ತಿಂಗಳುಗಳಿಂದ ತುಪ್ಪ, ಬೆಣ್ಣೆ, ಹಾಲಿನ ಉತ್ಪನ್ನಗಳು, ಅಡುಗೆ ಎಣ್ಣೆ, ಮೈದಾ, ಸಕ್ಕರೆ ಸೇರಿದಂತೆ ಬಹುತೇಕ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರ ಜೊತೆಗೆ ವಿದ್ಯುತ್ ದರ, ವಾಣಿಜ್ಯ ಗ್ಯಾಸ್ ಸಿಲಿಂಡರ್ ವೆಚ್ಚ, ಕಾರ್ಮಿಕರ ವೇತನ, ಸಾರಿಗೆ ವೆಚ್ಚ ಹಾಗೂ ಅಂಗಡಿಗಳ ನಿರ್ವಹಣಾ ವೆಚ್ಚವೂ ಹೆಚ್ಚಾಗಿರುವುದರಿಂದ ಬೇಕರಿ ಉದ್ಯಮಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಳೆಯ ದರದಲ್ಲೇ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಲಾಭದ ಮಾತು ಬಿಡಿ, ಮೂಲ ವೆಚ್ಚವನ್ನೇ ಭರಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಬೆಲೆ ಏರಿಕೆ ಬಗ್ಗೆ ಚಿಂತನೆ ನಡೆದಿದೆ.

ಶೀಘ್ರದಲ್ಲೇ ಮಹತ್ವದ ಸಭೆ

ವಿಶೇಷವಾಗಿ ತುಪ್ಪ ಬಳಸಿ ತಯಾರಿಸುವ ಮೈಸೂರು ಪಾಕ್, ತುಪ್ಪದ ಲಡ್ಡು, ಬಾದೂಷಾ, ಕಾಜು ಸ್ವೀಟ್ಸ್, ಡ್ರೈಫ್ರೂಟ್ ಐಟಂಗಳು, ಪ್ರೀಮಿಯಂ ಕೇಕ್‌ಗಳು ಹಾಗೂ ವಿವಿಧ ಬೇಕರಿ ಸಿಹಿತಿಂಡಿಗಳ ಉತ್ಪಾದನಾ ವೆಚ್ಚ ಹೆಚ್ಚು ಏರಿಕೆಯಾಗಿದೆ. ಉತ್ತಮ ಗುಣಮಟ್ಟದ ತುಪ್ಪವನ್ನು ಬಳಸುವ ಬೇಕರಿಗಳಿಗೆ ಈ ಹೊರೆ ಇನ್ನಷ್ಟು ಹೆಚ್ಚಾಗಿದೆ. ಹೀಗಾಗಿ ಗುಣಮಟ್ಟವನ್ನು ಉಳಿಸಿಕೊಳ್ಳಲು ಬೆಲೆ ಹೆಚ್ಚಳ ಅನಿವಾರ್ಯ ಎಂದು ಬೇಕರಿ ಮಾಲೀಕರು ಹೇಳ್ತಿದ್ದಾರೆ . ಬೇಕರಿ ಉದ್ಯಮ ಈಗಾಗಲೇ ಹಲವು ಸವಾಲುಗಳನ್ನು ಎದುರಿಸುತ್ತಿದ್ದು, ಕೋವಿಡ್ ನಂತರ ನಿಧಾನವಾಗಿ ಚೇತರಿಸಿಕೊಂಡಿದ್ದ ಉದ್ಯಮಕ್ಕೆ ಇದೀಗ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ. ಗ್ರಾಹಕರನ್ನು ಕಳೆದುಕೊಳ್ಳುವ ಭಯದಿಂದ ಹಲವು ಬೇಕರಿಗಳು ಇದುವರೆಗೆ ಬೆಲೆ ಏರಿಕೆ ಮಾಡದೆ ನಷ್ಟದಲ್ಲೇ ವ್ಯಾಪಾರ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಬೇಕರಿ ಅಸೋಸಿಯೇಷನ್ ಶೀಘ್ರದಲ್ಲೇ ಮಹತ್ವದ ಸಭೆ ನಡೆಸಲಿದ್ದು, ರಾಜ್ಯಾದ್ಯಂತ ಬೇಕರಿ ಉತ್ಪನ್ನಗಳ ದರ ಪರಿಷ್ಕರಣೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತಷ್ಟು ಉಲ್ಬಣಿಸಿದ ಟ್ರಾಫಿಕ್​​ ಸಮಸ್ಯೆ; 1.47 ಕೋಟಿ ಗಡಿ ದಾಟಿದ ವಾಹನಗಳ ಸಂಖ್ಯೆ

3 ರಿಂದ 5 ರೂಪಾಯಿ ಹೆಚ್ಚಳ ಸಾಧ್ಯತೆ

ಸಭೆಯಲ್ಲಿ ಜಿಲ್ಲೆಯ ಬೇಕರಿ ಸಂಘಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳೊಂದಿಗೆ ಚರ್ಚಿಸಿ ಹೊಸ ದರ ನಿಗದಿಪಡಿಸುವ ನಿರೀಕ್ಷೆಯಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ ಪ್ರತಿ ಬೇಕರಿ ಉತ್ಪನ್ನದ ಮೇಲೆ 3 ರಿಂದ 5 ರೂಪಾಯಿ ವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಪೈಕಿ ಕೆಲವು ಪ್ರೀಮಿಯಂ ಸ್ವೀಟ್ಸ್ ಹಾಗೂ ತುಪ್ಪ ಆಧಾರಿತ ಉತ್ಪನ್ನಗಳ ಬೆಲೆ ಹೆಚ್ಚು ಏರಿಕೆಯಾಗುವ ಸಾಧ್ಯತೆ ಇದ್ದು, ದರ ಏರಿಕೆ ಜಾರಿಯಾದರೆ ದಿನನಿತ್ಯ ಬೇಕರಿ ಉತ್ಪನ್ನಗಳನ್ನು ಖರೀದಿಸುವ ಸಾಮಾನ್ಯ ಗ್ರಾಹಕರ ಜೇಬಿಗೂ ಹೆಚ್ಚುವರಿ ಹೊರೆ ಬೀಳಲಿದೆ.

ನಟರಾಜ್, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *