ಸಿಎಂ ಡಿಕೆ ಶಿವಕುಮಾರ್
Image Credit source: Tv9 Kannada
ಬೆಳಗಾವಿ, ಜುಲೈ 09: ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಕರ್ನಾಟಕದ ಜನರು ಅದರಲ್ಲೂ ವಿಶೇಷವಾಗಿ ರೈತರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ನಡುವೆ ರಾಜ್ಯದ ನೀರಾವರಿ ಯೋಜನೆಗಳ ಕುರಿತಾಗಿ ಸಿಎಂ ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ ನೀಡಿದ್ದಾರೆ. ಕೃಷ್ಣಾ, ಕಾವೇರಿ, ಗೋದಾವರಿ ಜೋಡಣೆ ವಿಚಾರದಲ್ಲಿ 1 ಲಕ್ಷ ಕೋಟಿ ವೆಚ್ಚದ ಯೋಜನೆ ಮಾಡಲು ಮುಂದಾಗಿದ್ದೇವೆ. ಕೇಂದ್ರಕ್ಕೆ ಈ ಪ್ರಾಜೆಕ್ಟ್ ಮಾಡಲು ಕೇಳಿದ್ದೇವೆ ಎಂದು ಬೆಳಗಾವಿ ಸುವರ್ಣಸೌಧದಲ್ಲಿ ಅವರು ಮಾಹಿತಿ ನೀಡಿದ್ದಾರೆ.
ಮಹದಾಯಿ ಯೋಜನೆ ಜಾರಿಗೂ ಪ್ರಯತ್ನ
ಇನ್ನು ಮಹದಾಯಿ ಯೋಜನೆ ಜಾರಿಗೂ ಪ್ರಯತ್ನ ಮಾಡಲಾಗುತ್ತಿದೆ. ಈ ಸಂಬಂಧ 5 ಬಾರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನ ಭೇಟಿಯಾಗಿದ್ದೇನೆ. ಕೇಂದ್ರ ಪರಿಸರ ಇಲಾಖೆ ಸಚಿವರ ಜೊತೆಗೂ ಮಾತುಕತೆ ನಡೆಸಿದ್ದು, ಅವರು ಇನ್ನೂ ತಲೆ ಅಲ್ಲಾಡಿಸುತ್ತಿದ್ದಾರೆ. ಆದರೂ ಯೋಜನೆ ಜಾರಿಗೆ ಪ್ರಯತ್ನಿಸಲಾಗುತ್ತಿದೆ. ಮಹಾರಾಷ್ಟ್ರ, ಗೋವಾ ಸಿಎಂ ಜೊತೆಗೆ ಈ ಸಂಬಂಧ ಚರ್ಚಿಸುತ್ತೇನೆ ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ಮತ್ತೊಂದು ಸಾಹಸಕ್ಕೆ ಕೈಹಾಕಿದ ಸರ್ಕಾರ; ಬಿಡದಿ ರೀತಿಯಲ್ಲೇ ಮತ್ತೊಂದು ಟೌನ್ಶಿಪ್, ಎಲ್ಲಿ?
ಬಹಳ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ತುಂಗಭದ್ರಾದಲ್ಲಿ ಭೀಕರವಾದ ಸಮಸ್ಯೆ ನೋಡ್ತಿದ್ದೇವೆ. ಸರ್ಕಾರದ ಮೊದಲ ಕರ್ತವ್ಯ ರೈತರನ್ನ ಬದುಕಿಸೋದು. 50 ವರ್ಷ ತುಂಬಿದ ಎಲ್ಲ ಡ್ಯಾಂಗಳ ಗೇಟ್ ಬದಲಾವಣೆ ಜೊತೆಗೆ ತುಂಗಭದ್ರಾ ಡ್ಯಾಂನಲ್ಲಿ ಹೂಳು ತೆಗೆಸಲಾಗುತ್ತದೆ. 3 ರಾಜ್ಯಗಳ ಮುಖ್ಯಮಂತ್ರಿಗಳು ಒಟ್ಟಿಗೆ ಸಭೆ ನಡೆಸಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ. ಬಹಳ ಜನ ಶಾಸಕರು ಮೋಡ ಬಿತ್ತನೆ ಬಗ್ಗೆ ಸಲಹೆ ನೀಡಿದ್ದಾರೆ. ಅದರ ಬಗ್ಗೆಯೂ ಒಂದು ರಿಪೋರ್ಟ್ ಪಡೆದುಕೊಂಡು ಪರಿಶೀಲಿಸುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ಅನುದಾನ
ನೀರಿನ ಸಮಸ್ಯೆ ಬಹಳ ಇರುವ ಕಾರಣ ಸುವರ್ಣಸೌಧದಲ್ಲಿ ಹೊಸ ತೀರ್ಮಾನ ಕೈಗೊಂಡಿದ್ದು, ಗ್ರಾಮೀಣ ಕ್ಷೇತ್ರದ ಎಲ್ಲ ಶಾಸಕರಿಗೆ 1 ಕೋಟಿ ಅನುದಾನ ನೀಡುತ್ತೇವೆ. ಕುಡಿಯುವ ನೀರಿಗೆ ಕೊರತೆ ಆಗಬಾರದೆಂದು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕುಡಿಯುವ ನೀರಿಗೆ ಡ್ಯಾಂ, ಕೆರೆಗಳಲ್ಲಿ ನೀರು ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.