ಬೆಂಗಳೂರು, (ಆಗಸ್ಟ್ 09): ಬಸವರಾಜ ಹೊರಟ್ಟಿ (basavaraj horatti) ಅವರು ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ದಿಢೀರ್ ರಾಜೀನಾಮೆ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಒತ್ತಡ ಹೇರಿ ರಾಜೀನಾಮೆ ಪಡೆಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದರ ಮಧ್ಯೆ ಇದೀಗ ಸ್ವತಃ ಬಸವರಾಜ ಹೊರಟ್ಟಿ ಅವರೇ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿದ್ದು, ತಮ್ಮ ಮೇಲೆ ಒತ್ತಡ ಹೇರಿ ರಾಜೀನಾಮೆ ಪಡೆಯಲಾಗಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ. ಇದರ ಜೊತೆಗೆ ಆಗಸ್ಟ್ 7ರಂದು ತಮ್ಮ ಅಧಿಕೃತ ಕೊಠಡಿಯಲ್ಲಿ ನಡೆದ ಬೆಳವಣಿಗೆಗಳನ್ನು ಹೊರಟ್ಟಿ ಅವರು ಪತ್ರದಲ್ಲಿ ವಿವರಿಸಿದ್ದು, ತಮ್ಮ ರಾಜೀನಾಮೆಗೆ ಕಾರಣವಾದ ಸಂದರ್ಭಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಹೊರಟ್ಟಿ ಬರೆದ ಪತ್ರದಲ್ಲೇನಿದೆ?
ಆಗಸ್ಟ್ 14ರಂದು ವಿಧಾನ ಪರಿಷತ್ ಅಧಿವೇಶನವನ್ನು ಕರೆದು, ಸದನದ ಸದಸ್ಯರಿಗೆ ಕೃತಜ್ಞತೆ ಹಾಗೂ ಧನ್ಯವಾದ ಅರ್ಪಿಸಿದ ಬಳಿಕವೇ ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ, ಆಗಸ್ಟ್ 7ರಂದೇ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ನೂತನ ಎಂಎಲ್ಸಿ ಪ್ರಮಾಣವಚನದ ಬಳಿಕ ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು, ಹಲವು ಎಂಎಲ್ಸಿಗಳ ಬಂದು ಇಂದೇ ರಾಜೀನಾಮೆ ನೀಡಿ ಎಂದು ಸೂಚಿಸಿದ್ದರು. ಈ ಬೆಳವಣಿಗೆ ಅನಿರೀಕ್ಷಿತವಾಗಿತ್ತು. ತಮ್ಮ ಅಧಿಕೃತ ಕೊಠಡಿಯಲ್ಲಿ ನಡೆದ ಬೆಳವಣಿಗೆಯಿಂದ ತಮಗೆ ಆಶ್ಚರ್ಯವಾಯಿತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಸಿಎಂ ಮನವಿಯಂತೆ ರಾಜೀನಾಮೆ ನೀಡಿದ್ದೇನೆ ಎಂದು ಹೊರಟ್ಟಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿ: ಕಾಂಗ್ರೆಸಿಗರ ಮನವೊಲಿಕೆಗೆ ಮಣಿದ ಬಸವರಾಜ ಹೊರಟ್ಟಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ
ಬಿಜೆಪಿಯಿಂದ ರಾಜ್ಯಪಾಲರಿಗೆ ದೂರು
ಇನ್ನೊಂದೆಡೆ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಿಯೋಗ (BJP Delegation) ರಾಜ್ಯಪಾಲರನ್ನು ಭೇಟಿ ಮಾಡಿದ್ದು, ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ (Basavaraj Horatti) ಅವರಿಂದ ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ. ಸದನ ನಡಾವಳಿ ಪ್ರಕಾರ ರಾಜೀನಾಮೆ ಸಲ್ಲಿಕೆ ಆಗಿಲ್ಲ. ಹೀಗಾಗಿ ಹೊರಟ್ಟಿ ರಾಜೀನಾಮೆಯನ್ನು ಅಂಗೀಕರಸಬಾರದು ಎಂದು ದೂರು ಸಲ್ಲಿಸಿದೆ.ಅಲ್ಲದೇ ಕಾಂಗ್ರೆಸ್ ಲೆಟರ್ಹೆಡ್ನಲ್ಲಿ ಸಭಾಧ್ಯಕ್ಷ, ಸಭಾಪತಿಗಳ ಹೆಸರುಗಳ ಆಯ್ಕೆ ಬಗ್ಗೆಯೂ ರಾಜ್ಯಪಾಲರಿ ಗಮನಕ್ಕೆ ತಂದಿದೆ.
75 ಸದಸ್ಯ ಬಲದ ವಿಧಾನ ಪರಿಷತ್ತಿನಲ್ಲಿ ಆಡಳಿತಾರೂಢ ಕಾಂಗ್ರೆಸ್ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ, ಸಭಾಪತಿ ಸ್ಥಾನಕ್ಕೆ ಹಕ್ಕು ಮಂಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿರುವ ಸಂದರ್ಭದಲ್ಲೇ ರಾಜ್ಯಪಾಲರಿಗೆ ಹೊರಟ್ಟಿ ಹಾಗೂ ಬಿಜೆಪಿ ಹಾಗೂ ಜೆಡಿಎಸ್ ನಿಯೋಗ ಬರೆದಿರುವ ಪತ್ರ ಮಹತ್ವ ಪಡೆದುಕೊಂಡಿದ್ದು, ರಾಜ್ಯಪಾಲರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.