Headlines

ರಾಜ್ಯ ರಾಜಕಾರಣದಲ್ಲಿ ಫೋನ್​​ ಟ್ಯಾಪಿಂಗ್​​ ಬಿರುಗಾಳಿ: ವಿಪಕ್ಷಗಳ ಮೇಲೆ ಮುಗಿಬಿದ್ದ ಕಾಂಗ್ರೆಸ್​​ – Kannada News | Karnataka Phone Tapping Row: Congress Vs Opposition on Intelligence Misuse Claims

ರಾಜ್ಯ ರಾಜಕಾರಣದಲ್ಲಿ ಫೋನ್​​ ಟ್ಯಾಪಿಂಗ್​​ ಬಿರುಗಾಳಿImage Credit source: Google

ಬೆಂಗಳೂರು, ಮಾರ್ಚ್​​ 03: ಕಳೆದ ಕೆಲ ತಿಂಗಳುಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿದ್ದ ಕುರ್ಚಿ ಕಾಳಗದ ಮಧ್ಯೆ ಇದೀಗ ಫೋನ್​​ ಟ್ಯಾಪಿಂಗ್​​ ಆರೋಪ ವಿಚಾರ ಬಿರುಗಾಳಿ ಎಬ್ಬಿಸಿದೆ. ಗುಪ್ತಚರ ಇಲಾಖೆಯನ್ನು ಸರ್ಕಾರವು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರಾಜ್ಯದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಇಲಾಖೆ ಮೂಲಕ ಪಕ್ಷದ ಶಾಸಕರುಗಳು ಮತ್ತು ನಾಯಕರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಡಿಸಿಎಂ ಪರವಾದ ಶಾಸಕರನ್ನು ಗಮನಿಸಲು ಸಿಎಂರಿಂದ ಗುಪ್ತಚರ ಇಲಾಖೆ ಬಳಕೆ ಆಗ್ತಿದೆ. ಯಾರ್ಯಾರು ಡಿಕೆಶಿ ಪರವಾಗಿದ್ದಾರೋ ಅವರ ಚಲನವಲನ ನೋಡಲು ಎಸ್ಪಿ ನೇತೃತ್ವದ ತಂಡವನ್ನೇ ಮಾಡಿದ್ದಾರೆಂದು ವಿಪಕ್ಷಗಳು ಆರೋಪಿಸಿರೋದು ಈಗ ಚರ್ಚೆಗೆ ಗ್ರಾಸವಾಗಿದೆ.

ಗಾದೆ ಮಾತು ಹೇಳಿ ಸಿಎಂ ಕೌಂಟರ್​

ಈ ಬೆನ್ನಲ್ಲೇ ವಿಪಕ್ಷಗಳ ಆರೋಪದ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಕೌಂಟರ್​​ ಕೊಟ್ಟಿರುವ ಸಿಎಂ, ಇದು ತಾ ಕಳ್ಳ ಇತರರ ನಂಬ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ ಎಂದು ಕುಟುಕಿದ್ದಾರೆ. ವಿಪಕ್ಷ ನಾಯಕರು ನನ್ನ, ಡಿಕೆ ನಡುವೆ ಹುಳಿ ಹಿಂಡಲು ಪ್ರಯತ್ನಿಸ್ತಿದ್ದಾರೆ. ನಮ್ಮ ಹಾಗೂ ಡಿಕೆಶಿ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸಿ ಅವರೊಳಗಿನ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧ ಮೇಲೆ ಯಾವ ಪರಿಣಾಮ ಆಗಲ್ಲ. ಆರೋಪ ಮಾಡಿರುವ ಒಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ಇನ್ನೊಬ್ಬರು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದವರು. ಅವರ ಕಾಲದಲ್ಲೂ ಗುಪ್ತಚರ ವಿಭಾಗ ಮುಖ್ಯಮಂತ್ರಿ ಬಳಿ ಇತ್ತು. ಹೀಗಾಗಿ ತಮ್ಮ ಅನುಭವದ ಬಲದಿಂದಲೇ ಈ ಆರೋಪ ಮಾಡಿದಂತೆ ಕಾಣ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ; ಹೆಚ್​​.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ

ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಏಕ ಕುಟುಂಬದ ಅಧಿಪತ್ಯ ಇರುವ ಜೆಡಿಎಸ್ ಅಲ್ಲ. ನಮ್ಮ ಶಾಸಕರಲ್ಲಿ ಯಾರೂ ನನ್ನ, ಇಲ್ಲವೇ ಡಿಕೆಶಿ ಬೆಂಬಲಿಗರಲ್ಲ. ಎಲ್ಲರೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಪಕ್ಷದ ಶಿಸ್ತಿನ ಚೌಕಟ್ಟಿನೊಳಗೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸುವ ಜೊತೆಯಲ್ಲಿ ಊಟ-ತಿಂಡಿ ಮಾಡುವ ಎಲ್ಲ ಸ್ವಾತಂತ್ರ್ಯ ಅವರಿಗೆ ಇದೆ. ಶಾಸಕರು ಏನೇ ಹೇಳಿದರೂ ಹೈಕಮಾಂಡ್ ಆದೇಶಕ್ಕೆ ತಲೆಬಾಗ್ತೇವೆ. ಶಾಸಕರೂ ಸೇರಿ ನಾನು, ಶಿವಕುಮಾರ್​​ ಹೈಕಮಾಂಡ್ ಆದೇಶಕ್ಕೆ ತಲೆಬಾಗ್ತೇವೆ ಎಂದು ತಿಳಿಸಿದ್ದಾರೆ.

ಸರ್ಕಾರ ನಡೆಸೋದು ನಾವು. ನಮಗೆ ಹೆಚ್ಚಿನ ಮಾಹಿತಿ ಇರುತ್ತೆ, ಅವರಿಗಲ್ಲ ಅಂತ ವಿಪಕ್ಷ ನಾಯಕರ ಹೇಳಿಕೆಗೆ ಗೃಹ ಸಚಿವ ಪರಮೇಶ್ವರ್ ಕೂಡ ತಿರುಗೇಟು ಕೊಟ್ಟಿದ್ದಾರೆ. ವಿಪಕ್ಷದವರಿಗೆ ಯಾರು ಹೇಳಿದ್ದು ಗೂಢಚಾರಿಕೆ, ಫೋನ್ ಟ್ಯಾಪಿಂಗ್‌ ಮಾಡ್ತಿದ್ದಾರೆ ಎಂದು? ಅಂತಹ ಬೆಳವಣಿಗೆ ಯಾವುದೂ ನಡೆಯುತ್ತಿಲ್ಲ. ನಮ್ಮ ಗಮನಕ್ಕೆ ಅಧಿಕೃತವಾಗಿ ಆತರಹದ್ದು ಯಾವುದೂ ಇಲ್ಲ. ಪೊಲಿಟಿಕಲ್ ಇಂಟಲಿಜೆನ್ಸ್ ಅನ್ನೋ ಪ್ರತ್ಯೇಕ ವಿಭಾಗವೇ ಇದೆ. ಅದರ ಮೂಲಕ ಸಿಎಂಗೆ ಮಾಹಿತಿ ಸಹಜವಾಗಿ ನಿತ್ಯ ಹೋಗುತ್ತೆ. ನಿರ್ದಿಷ್ಟವಾಗಿ ಯಾವ ಮಾಹಿತಿ ಬೇಕು ಅನ್ನೋದು ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಹೀಗಿದ್ದರೂ ಈ ವಿಚಾರ ರಾಜಕೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂದೆ ಇದು ಯಾವ ಸ್ವರೂಪ ಪಡೆಯುತ್ತೆ ಎಂದು ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *