Headlines

ರಾಮ ಮಂದಿರ ದೇಣಿಗೆ ಹಗರಣ: ಜುಲೈ 20 ರಂದು ಸುಪ್ರೀಂಗೆ ಮಧ್ಯಂತರ ವರದಿ ಸಿಲ್ಲಿಸಲಿದೆ ಎಸ್​ಐಟಿ – Kannada News | Ayodhya Ram Mandir Fraud: SIT to Submit Interim Report to Supreme Court on July 20

ಅಯೋಧ್ಯೆ, ಜುಲೈ 17: ಅಯೋಧ್ಯೆಯ ರಾಮ ಮಂದಿರ(Ram Mandir)ದ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಬಂದಿರುವ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಆರ್ಥಿಕ ಅಕ್ರಮಗಳ ತನಿಖೆ ಈಗ ಅಂತಿಮ ಹಂತ ತಲುಪಿದೆ. ಈ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಜುಲೈ 20ರಂದು ಸುಪ್ರೀಂ ಕೋರ್ಟ್‌ಗೆ ತನ್ನ ಮೊದಲ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ. ನ್ಯಾಯಾಲಯದ ಆದೇಶದಂತೆ ಎಸ್‌ಐಟಿ ತನ್ನ ಶೋಧನೆಗಳನ್ನು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಒಪ್ಪಿಸಲಿದ್ದು, ಈ ವರದಿಯ ಆಧಾರದ ಮೇಲೆ ರಾಮ ಮಂದಿರದ ಆಡಳಿತ ಮತ್ತು ದೇಣಿಗೆ ಎಣಿಕೆ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಅಂತಿಮ ವರದಿಗಾಗಿ ಹೆಚ್ಚಿನ ಸಮಯ ಕೋರಿದ ಎಸ್‌ಐಟಿ
ರಾಮ ಮಂದಿರ ಟ್ರಸ್ಟ್‌ನ ಮನವಿಯ ಮೇರೆಗೆ ಜೂನ್ 13 ರಂದು ಉತ್ತರ ಪ್ರದೇಶ ಸರ್ಕಾರವು ಈ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.  ಆರಂಭದಲ್ಲಿ ತನಿಖೆಗೆ ಕೇವಲ 15 ದಿನಗಳ ಕಾಲಾವಕಾಶ ನೀಡಲಾಗಿತ್ತಾದರೂ, ತನಿಖೆಯ ವ್ಯಾಪ್ತಿ ದೊಡ್ಡದಾಗಿದ್ದರಿಂದ ಜುಲೈ 1 ರಂದು ಅವಧಿಯನ್ನು ಮತ್ತೆ 15 ದಿನ ವಿಸ್ತರಿಸಲಾಗಿತ್ತು.

ಪ್ರಕರಣದ ಆಳವಾದ ಆರ್ಥಿಕ ವಹಿವಾಟುಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಾಗಿರುವುದರಿಂದ, ಅಂತಿಮ ವರದಿ ಸಿದ್ಧಪಡಿಸಲು ತನಗೆ ಇನ್ನಷ್ಟು ಹೆಚ್ಚಿನ ಸಮಯ ನೀಡಬೇಕೆಂದು ಎಸ್‌ಐಟಿ ಈಗ ಉತ್ತರ ಪ್ರದೇಶ ಸರ್ಕಾರಕ್ಕೆ ಮನವಿ ಮಾಡಿದೆ. ಜುಲೈ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಟ್ರಸ್ಟ್‌ನ ಪ್ರಮುಖ ಸಭೆ ನಡೆಯಲಿದ್ದು, ಅಲ್ಲಿ ಈ ತನಿಖೆಯ ಬೆಳವಣಿಗೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.

ರಾಮ ಮಂದಿರದ ಹಣದಲ್ಲಿ ವಂಚನೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉತ್ತರ ಪ್ರದೇಶ ಸರ್ಕಾರ ಭರವಸೆ ನೀಡಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, “ನಾವೆಲ್ಲರೂ ಎಸ್‌ಐಟಿ ವರದಿಗಾಗಿ ಕಾಯುತ್ತಿದ್ದೇವೆ. ದೇಶದ ಜನತೆ ತಾಳ್ಮೆಯಿಂದಿರಲಿ, ರಾಮನ ಹಣವನ್ನು ಲೂಟಿ ಮಾಡಿದ ಯಾರನ್ನೂ ಸರ್ಕಾರ ಬಿಡುವುದಿಲ್ಲ. ಈ ಪವಿತ್ರ ಕಾರ್ಯದಲ್ಲಿ ತಪ್ಪು ಮಾಡಿದವರೆಲ್ಲರೂ ಭಗವಾನ್ ಹನುಮಂತನ ಗದೆಯ ಏಟನ್ನು ಎದುರಿಸಬೇಕಾಗುತ್ತದೆ” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಟ್ರಸ್ಟ್‌ನ ಹಿರಿಯ ಅಧಿಕಾರಿಗಳು ಕೂಡ ಸದ್ಯಕ್ಕೆ ವರದಿಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಮತ್ತಷ್ಟು ಓದಿ:ರಾಮ ಮಂದಿರ ಹಗರಣ: ಸಂತೋಷ್ ದುಬೆ ವಿಚಾರಣೆ, ಮಹತ್ವದ ಸಾಕ್ಷಿ ಸಲ್ಲಿಕೆಗೆ ಇಂದೇ ಗಡುವು

ಏನಿದು ರಾಮ ಮಂದಿರ ದೇಣಿಗೆ ಪ್ರಕರಣ?
ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರು ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ನಗದು, ಆನ್‌ಲೈನ್ ಹಾಗೂ ಚೆಕ್‌ಗಳ ಮೂಲಕ ಭಾರಿ ಪ್ರಮಾಣದ ದೇಣಿಗೆ ನೀಡಿದ್ದಾರೆ. ಆದರೆ, ಈ ದೇಣಿಗೆ ಸಂಗ್ರಹ, ಬ್ಯಾಂಕ್ ಖಾತೆಗಳ ನಿರ್ವಹಣೆ ಮತ್ತು ನಗದು ಎಣಿಕೆ ಪ್ರಕ್ರಿಯೆಯಲ್ಲಿ ದೊಡ್ಡ ಮಟ್ಟದ ಆರ್ಥಿಕ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಸದ್ಯಕ್ಕೆ ತನಿಖೆ ಮುಂದುವರೆದಿದ್ದು, ಇಡೀ ದೇಶದ ಕಣ್ಣು ಜುಲೈ 20 ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಲಿರುವ ಎಸ್‌ಐಟಿ ವರದಿಯ ಮೇಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *