ಅಯೋಧ್ಯೆಯ ರಾಮ್ ಮಂದಿರದ ದೇಣಿಗೆ ದುರುಪಯೋಗದ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅನುಪಮ್ ಖೇರ್ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ದೇಣಿಗೆ ಪೆಟ್ಟಿಗೆಯ ಹಣ ಎಣಿಕೆಯಲ್ಲಿ ನಡೆದಿರುವ ಅಕ್ರಮವನ್ನು ಅವರು ಬಹಳ ಸಣ್ಣ ವಿಷಯ ಎಂದು ಕರೆದಿದ್ದರು. ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದ್ದರೂ ಸಹ, ಅನುಪಮ್ ಖೇರ್ ತಮ್ಮ ನಿಲುವನ್ನು ಬದಲಿಸಲು ನಿರಾಕರಿಸಿದ್ದಾರೆ.
ಅನುಪಮ್ ಖೇರ್ ನೀಡಿದ ಸ್ಪಷ್ಟನೆ:
ತಮ್ಮ ಮೇಲಿನ ಟೀಕೆಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಮೂಲಕ ಅನುಪಮ್ ಖೇರ್ ತಿರುಗೇಟು ನೀಡಿದ್ದಾರೆ. ‘ಕೆಲವು ದಿನಗಳ ಹಿಂದೆ ನಾನು ರಾಮ್ ಮಂದಿರಕ್ಕೆ ಭೇಟಿ ನೀಡಿದ್ದೆ. ಅಲ್ಲಿ ನನ್ನ ಮನಸ್ಸಿನಲ್ಲಿದ್ದ ನಿಜವಾದ ಅನಿಸಿಕೆಯನ್ನು ಹಂಚಿಕೊಂಡಿದ್ದೆ. ಆದರೆ ಅದು ಕೆಲವು ಜನರ ಅಜೆಂಡಾಕ್ಕೆ ವಿರುದ್ಧವಾಗಿತ್ತು. ಹಾಗಾಗಿ ಒಂದು ಇಡೀ ವ್ಯವಸ್ಥೆಯೇ ನನ್ನನ್ನು ಗುರಿಯಾಗಿಸಿ ಟ್ರೋಲ್ ಮಾಡಲು ಶುರು ಮಾಡಿದೆ’ ಎಂದು ಅವರು ಹೇಳಿದ್ದಾರೆ.
ತಾವು ಸ್ವಾವಲಂಬಿಯಾಗಿ ಬೆಳೆದ ಮನುಷ್ಯ ಎಂದಿರುವ ಅವರು, ಯಾರದೇ ಕೂಗಾಟಕ್ಕೆ ತಮ್ಮ ನಿಲುವು ಬದಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ‘ಜನರು ಸತ್ಯಕ್ಕೆ ಹೆದರುತ್ತಾರೆ. ನಾನು ಹೇಳಿದ ಪ್ರತಿಯೊಂದು ಮಾತಿಗೂ ಇಂದಿಗೂ ಬದ್ಧನಾಗಿದ್ದೇನೆ. ನನಗೆ ಯಾವುದೇ ಭಯವಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.
ವಿವಾದಕ್ಕೆ ಕಾರಣವಾದ ಹೇಳಿಕೆ ಏನು?
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಅನುಪಮ್ ಖೇರ್ ಈ ವಿವಾದದ ಬಗ್ಗೆ ಮಾತನಾಡಿದ್ದರು. ರಾಮ್ ಮಂದಿರದ ದೇಣಿಗೆ ಕಳ್ಳತನವನ್ನು ಮೊಘಲರ ಕಾಲದ ದೌರ್ಜನ್ಯಗಳಿಗೆ ಹೋಲಿಸಿದ್ದರು. ‘ಮೊಘಲರ ಕಾಲದಲ್ಲಿ ನಮ್ಮ ದೇವಸ್ಥಾನಗಳನ್ನು ಧ್ವಂಸ ಮಾಡಿ ಲೂಟಿ ಮಾಡಲಾಗಿತ್ತು. ಬ್ರಾಹ್ಮಣರನ್ನು ಕಟುವಾಗಿ ಕೊಲೆ ಮಾಡಲಾಗಿತ್ತು. ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ಆ ಭೀಕರ ಇತಿಹಾಸಕ್ಕೆ ಹೋಲಿಸಿದರೆ, ಪ್ರಸ್ತುತ ನಡೆದಿರುವ ಹಣದ ಕಳ್ಳತನವು ತುಂಬಾ ಸಣ್ಣ ವಿಷಯವಾಗಿದೆ. ಇದು ಕೇವಲ ಕೆಲವು ವ್ಯಕ್ತಿಗಳ ದುರಾಸೆಯಷ್ಟೇ’ ಎಂದು ಅವರು ಹೇಳಿದ್ದರು.
ಈ ಹೇಳಿಕೆಯು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ತಾವು ಬಯಸುವುದಾಗಿ ಅವರು ಮತ್ತೊಂದು ಸಂದರ್ಶನದಲ್ಲಿ ಹೇಳಿದ್ದಾರೆ. ಸದ್ಯ ಅನುಪಮ್ ಖೇರ್ ಅವರು ಅಯೋಧ್ಯೆಯಲ್ಲಿ ತಮ್ಮ ಮುಂದಿನ ಚಿತ್ರ ‘ಶ್ರೀ ರಾಮ್ ಭೂಮಿ’ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On – 7:45 am, Wed, 15 July 26