ರಾಯಚೂರಲ್ಲಿ ಆರ್‌ಟಿಒ ಸಿಬ್ಬಂದಿ ಗೂಂಡಾಗಿರಿ: 500 ರೂ. ಲಂಚ ಪಡೆಯುತ್ತಿದ್ದ ವಿಡಿಯೋ ಮಾಡಿದ್ದಕ್ಕೆ ಚಾಲಕನಿಗೆ ಧರ್ಮದೇಟು – Kannada News

ರಾಯಚೂರು, ಜೂ.10: ಗಡಿ ಜಿಲ್ಲೆ ರಾಯಚೂರಿನಲ್ಲಿ ಆರ್‌ಟಿಒ (RTO) ಅಧಿಕಾರಿಗಳು ಹಾಗೂ ಸಿಬ್ಬಂದಿಯ ಲಂಚಾವತಾರ ಮತ್ತು ದಬ್ಬಾಳಿಕೆ ಮಿತಿಮೀರಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಆರ್‌ಟಿಒ ಸಿಬ್ಬಂದಿ ಬೇಕಾಬಿಟ್ಟಿ ಲಂಚ ವಸೂಲಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ನಿನ್ನೆ ರಾತ್ರಿ ಭಾರಿ ಹೈಡ್ರಾಮಾವೊಂದು ನಡೆದಿದೆ. ಸಿಬ್ಬಂದಿಯ ಬೇಜವಾಬ್ದಾರಿತನದಿಂದಾಗಿ ಹೆದ್ದಾರಿಯಲ್ಲಿ ಬರೋಬ್ಬರಿ 3 ಗಂಟೆಗಳ ಕಾಲ ಭಾರಿ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಮತ್ತು ಸವಾರರು ಪರದಾಡುವಂತಾಗಿದೆ.

ನಿನ್ನೆ ಸಂಜೆ ಅಂದಾಜು 6.30 ರ ಸಮಯಕ್ಕೆ ಆಂಧ್ರಪ್ರದೇಶದಿಂದ ಬಾಗಲಕೋಟೆ ಜಿಲ್ಲೆಯ ಇಳಕಲ್‌ಗೆ ತೆರಳುತ್ತಿದ್ದ ಲಾರಿಯೊಂದನ್ನು ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದ ಬಳಿ ರೌಂಡ್ಸ್‌ನಲ್ಲಿದ್ದ ಆರ್‌ಟಿಒ ಸಿಬ್ಬಂದಿ ತಡೆದಿದ್ದಾರೆ. ಲಾರಿ ಚಾಲಕ ಮೋಸಮ್ ತಕ್ಷಣವೇ ಗಾಡಿಯ ಎಲ್ಲಾ ಅಧಿಕೃತ ದಾಖಲೆಗಳನ್ನು ತೋರಿಸಿದ್ದಾನೆ. ಆದರೆ, ಎಲ್ಲಾ ದಾಖಲೆಗಳು ಸರಿಯಾಗಿದ್ದರೂ ಸಹ ಆರ್‌ಟಿಒ ಸಿಬ್ಬಂದಿ 500 ರೂಪಾಯಿ ಲಂಚ ನೀಡುವಂತೆ ಒತ್ತಾಯಿಸಿದ್ದಾರೆ.

ಆರಂಭದಲ್ಲಿ ಚಾಲಕ ಮೋಸಮ್ ಲಂಚ ಕೊಡಲು ನಿರಾಕರಿಸಿದರೂ, ಸಿಬ್ಬಂದಿಯ ಕಿರುಕುಳ ತಾಳಲಾರದೆ ಕೊನೆಗೆ ಹಣ ಕೊಡಲು ಮುಂದಾಗಿದ್ದಾನೆ. ಈ ವೇಳೆ ಆರ್‌ಟಿಒ ಸಿಬ್ಬಂದಿ ಲಂಚ ಪಡೆಯುವುದನ್ನು ಚಾಲಕ ತನ್ನ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿದ್ದಾನೆ. ಇದರಿಂದ ಕೆರಳಿದ ಸಿಬ್ಬಂದಿ, ಚಾಲಕನ ಟಿ-ಶರ್ಟ್ ಹಿಡಿದು ಮನಬಂದಂತೆ ಥಳಿಸಿದ್ದಾರೆ. ಅಷ್ಟಕ್ಕೇ ನಿಲ್ಲಿಸದೆ ಆತನ ಫೋನ್, ಪರ್ಸ್ ಹಾಗೂ ಲಾರಿಯ ಕೀಯನ್ನು ಬಲವಂತವಾಗಿ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಪ್ರಸ್ತುತ ಆಧುನಿಕ ಲಾರಿಗಳು ಸೆನ್ಸರ್ ವ್ಯವಸ್ಥೆಯನ್ನು ಹೊಂದಿರುವುದರಿಂದ, ಕೀ ಕಸಿದುಕೊಳ್ಳುತ್ತಿದ್ದಂತೆ ಏಕಾಏಕಿ ಸ್ಟೇರಿಂಗ್ ಲಾಕ್ ಆಗಿದೆ. ಇಳಿಜಾರಿನ ರಸ್ತೆಯಾಗಿದ್ದರಿಂದ ಲಾರಿ ನಿಯಂತ್ರಣ ತಪ್ಪಿ ಇಳಿಜಾರಿಗೆ ಚಲಿಸಿದೆ. ಈ ವೇಳೆ ಚಾಲಕ ಮೋಸಮ್ ತಕ್ಷಣವೇ ಸಮಯಪ್ರಜ್ಞೆ ಮೆರೆದು ಲಾರಿಯನ್ನು ಕಷ್ಟಪಟ್ಟು ನಿಯಂತ್ರಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಇಲ್ಲದಿದ್ದರೆ ಲಾರಿ ಪಕ್ಕದಲ್ಲೇ ಇದ್ದ ಹಳಕ್ಕೆ ಉರುಳಿ ಬೀಳುವ ಸಾಧ್ಯತೆಯಿತ್ತು ಎಂದು ಚಾಲಕ ಅಳಲು ತೋಡಿಕೊಂಡಿದ್ದಾನೆ.

ಆರ್‌ಟಿಒ ಸಿಬ್ಬಂದಿ ಕೀ ಕಸಿದುಕೊಂಡು ಹೋದ ಕಾರಣ ಲಾರಿ ಹಳ್ಳದ ಕಿರಿದಾದ ಸೇತುವೆಯ ಮೇಲೆಯೇ ಅಡ್ಡಲಾಗಿ ಬಂದ್ ಆಗಿ ನಿಂತುಬಿಟ್ಟಿತ್ತು. ಪರಿಣಾಮವಾಗಿ ಲಿಂಗಸುಗೂರು ಮತ್ತು ರಾಯಚೂರು ಮಾರ್ಗವಾಗಿ ಸಂಚರಿಸುವ ನೂರಾರು ವಾಹನಗಳು ಸಂಪೂರ್ಣವಾಗಿ ಲಾಕ್ ಆದವು. ಬರೋಬ್ಬರಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ, ಬಸ್ ಪ್ರಯಾಣಿಕರು, ಮಹಿಳೆಯರು ಮತ್ತು ಮಕ್ಕಳು ತೀವ್ರ ಹೈರಾಣಾದರು.

ಇದನ್ನೂ ಓದಿ: ಮದುವೆ ಹೆಸರಲ್ಲಿ ಯುವತಿಗೆ ವಂಚನೆ ಕೇಸ್​​: ಆರೋಪಿ ಕೃಷ್ಣ ಜೆ. ರಾವ್​​ಗೆ ಹೈಕೋರ್ಟ್​​ ತೀವ್ರ ತರಾಟೆ

ಘಟನಾ ಸ್ಥಳಕ್ಕೆ ಸಿರವಾರ ಪೊಲೀಸರು ಧಾವಿಸಿದರೂ ಟ್ರಾಫಿಕ್ ನಿಯಂತ್ರಣ ಮಾಡುವುದು ಕೈಮೀರಿ ಹೋಗಿತ್ತು. ಈ ಸಂದರ್ಭದಲ್ಲಿ ಅಲ್ಲೇ ಸಿಲುಕಿಕೊಂಡಿದ್ದ ಸರ್ಕಾರಿ ಸಾರಿಗೆ ಬಸ್ ಚಾಲಕರು ಹಾಗೂ ಸ್ಥಳೀಯ ಲಾರಿ ಚಾಲಕರು ತಮ್ಮ ತಾಂತ್ರಿಕ ಜಾಣ್ಮೆ ಮೆರೆದರು. ಸ್ಟೇರಿಂಗ್ ಲಾಕ್ ಆಗಿದ್ದರೂ ಸಹ ಅದನ್ನೇನೋ ತಾಂತ್ರಿಕವಾಗಿ ಮ್ಯಾನೇಜ್ ಮಾಡಿ, ಲಾರಿಯನ್ನು ರಿಸ್ಟಾರ್ಟ್ ಮಾಡಿ ರಸ್ತೆಯ ಪಕ್ಕಕ್ಕೆ ತಳ್ಳುವಲ್ಲಿ ಯಶಸ್ವಿಯಾದರು. ಲಂಚದಾಸೆಗೆ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದ ಆರ್‌ಟಿಒ ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಯಚೂರು ಜನತೆ ಮತ್ತು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *