ನವದೆಹಲಿ, (ಜುಲೈ 30): ಬಿಜೆಪಿ ಸಂಸದ ಅನುರಾಗ್ ಠಾಕೂರ್ (Anurag Thakur )ಅವರು ಇಂದು (ಜುಲೈ 30) ಗುರುವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಖಂಡನಾ ನಿರ್ಣಯ ಮಂಡಿಸಿದ್ದಾರೆ. ರಾಹುಲ್ ಗಾಂಧಿ ಅವರು ಮುಂಗಾರು ಅಧಿವೇಶನದಲ್ಲಿ ಸಂಸದೀಯವಲ್ಲದ ಮತ್ತು ಅತ್ಯಂತ ಕೀಳು ಮಟ್ಟದ ಪದಗಳನ್ನು ಬಳಸಿದ್ದಾರೆ. ಹಾಗೂ ಸದನದ ನಡವಳಿಕೆ ಮತ್ತು ಕಾರ್ಯವಿಧಾನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದಾರೆ. ಅಲ್ಲದೇ ಠಾಕೂರ್ ಅವರು ಈ ವಿಷಯವನ್ನು ವಿವರವಾದ ತನಿಖೆ ಮತ್ತು ಸೂಕ್ತ ಕ್ರಮಕ್ಕಾಗಿ ಹಕ್ಕುಬಾಧ್ಯತೆಗಳ ಸಮಿತಿಗೆ ಒಪ್ಪಿಸುವಂತೆ ಸ್ಪೀಕರ್ ಬಿರ್ಲಾ ಅವರಿಗೆ ವಿನಂತಿಸಿದ್ದಾರೆ.
ಕಾರ್ಯವಿಧಾನದ ನಿಯಮ 352 ಅನ್ನು ಉಲ್ಲಂಘಿಸಲಾಗಿದೆ. ಈ ನಿಯಮವು ಆಕ್ಷೇಪಾರ್ಹ ಮತ್ತು ಮಾನಹಾನಿಕರ ಅಭಿವ್ಯಕ್ತಿಗಳನ್ನು, ವ್ಯಕ್ತಿಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ವೈಯಕ್ತಿಕ ಹೇಳಿಕೆಗಳನ್ನ ಮತ್ತು ಯಾವುದೇ ವ್ಯಕ್ತಿ ಅಥವಾ ಸಮುದಾಯವನ್ನು ಕೀಳಾಗಿಸುವ ಹೇಳಿಕೆಗಳನ್ನು ನಿಷೇಧಿಸುತ್ತದೆ. ರಾಹುಲ್ ಗಾಂಧಿಯವರ ನಡವಳಿಕೆಯು ಸದನದ ಕಾರ್ಯಕಲಾಪಗಳಿಗೆ ಅಡ್ಡಿಪಡಿಸಿದೆ. ಮತ್ತು ಸ್ಪೀಕರ್ ನಿರ್ದೇಶನಗಳನ್ನು ನಿರ್ಲಕ್ಷಿಸಿದೆ ಎಂದು ಠಾಕೂರ್ ಆರೋಪಿಸಿದ್ದಾರೆ.
ಇದನ್ನೂ ನೋಡಿ: ‘ಪೆಲೆಟ್ ಗನ್ ದಾಳಿ ನಡೆದೇ ಇಲ್ಲ’; ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಸಂಸದ ಬ್ರಿಜ್ ಲಾಲ್ ತಿರುಗೇಟು
ಗಾಂಧಿಯವರು ತಮ್ಮ ಭಾಷಣದ ಸಮಯದಲ್ಲಿ “ಅಸಂಸದೀಯ ಮತ್ತು ಅವಹೇಳನಕಾರಿ ಭಾಷೆ” ಬಳಸಿದ್ದಾರೆ. “ಮೂರ್ಖ” ಮತ್ತು “ಅಂಧಭಕ್ತ” ಎಂಬ ಪದಗಳನ್ನು ಉಲ್ಲೇಖಿಸಿದ್ದಾರೆ. ನಿಯಮ 222 ರ ಅಡಿಯಲ್ಲಿ ಹಕ್ಕುಬಾಧ್ಯತೆ ನೋಟಿಸ್ ಅನ್ನು ಅಂಗೀಕರಿಸಲು, ನಿಯಮಗಳು 380 ಮತ್ತು 381 ರ ಅಡಿಯಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನಡಾವಳಿಗಳಿಂದ ತೆಗೆದುಹಾಕಲು ಮತ್ತು ಸೂಕ್ತ ಕ್ರಮಕ್ಕಾಗಿ ನಿಯಮ 227 ರ ಅಡಿಯಲ್ಲಿ ಈ ವಿಷಯವನ್ನು ಹಕ್ಕುಬಾಧ್ಯತೆಗಳ ಸಮಿತಿಗೆ ಒಪ್ಪಿಸುವಂತೆ ಸಭಾಪತಿಯವರಲ್ಲಿ ವಿನಂತಿಸಿದ್ದಾರೆ.
ರಾಹುಲ್ ಗಾಂಧಿ ಬೇಷರತ್ ಕ್ಷಮೆಗೆ ಆಗ್ರಹ
ಹಾಗೇ ರಾಹುಲ್ ಗಾಂಧಿ ಅವರು ಸದನ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಬ್ಬರಲ್ಲೂ ಬೇಷರತ್ ಕ್ಷಮೆಯಾಚಿಸುವಂತೆ ನಿರ್ದೇಶನ ನೀಡಲು ಕೋರಿದ್ದು, ಸಭಾಪತಿಗಳು ಅಥವಾ ಸಮಿತಿಗೆ ಅಗತ್ಯವಿದ್ದರೆ, ಜುಲೈ 29 ರ ಕಲಾಪದ ಅಧಿಕೃತ ನಡಾವಳಿಗಳು ಮತ್ತು ವಿಡಿಯೋ ರೆಕಾರ್ಡ್ ಸೇರಿದಂತೆ ಯಾವುದೇ ಹೆಚ್ಚುವರಿ ದಾಖಲೆಗಳನ್ನು ಒದಗಿಸಲು ತಾವು ಸಿದ್ಧರಿರುವುದಾಗಿ ಠಾಕೂರ್ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ