ಬಿಗ್ಬಾಸ್ ಮಾಜಿ ಸ್ಪರ್ಧಿ, ನಟ ರಜತ್ (Rajath) ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಹಿಂದೆ ಒಮ್ಮೆ ಮಚ್ಚು ಹಿಡಿದು ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ರಜತ್ ವಿರುದ್ಧ ಈಗ ಮತ್ತೊಮ್ಮೆ ಅದೇ ರೀತಿಯ ಕೇಸು ದಾಖಲಾಗಿದೆ. ಈ ಬಾರಿಯೂ ಸಹ ರಜತ್ ಅವರು ರೀಲ್ಸ್ ಕಾರಣದಿಂದಾಗಿಯೇ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಲ ದಿನಗಳ ಹಿಂದಷ್ಟೆ ರಜತ್ ಅವರು ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಒಂದನ್ನು ಅಪ್ಲೋಡ್ ಮಾಡಿದ್ದರು. ಬೈಕ್ನಲ್ಲಿ ಸ್ಟೈಲ್ ಆಗಿ ಬರುವ ರಜತ್ ಹಿಂದೆ ಪೆಟ್ರೋಲ್ ಬಾಂಬ್ ಬ್ಲಾಸ್ಟ್ ಆಗುವ ದೃಶ್ಯ ಆ ರೀಲ್ಸ್ನಲ್ಲಿತ್ತು. ಆ ರೀಲ್ಗೆ ಹಲವು ಆಕ್ಷೇಪ ವ್ಯಕ್ತಪಡಿಸಿದ್ದರು. ತಮ್ಮ ತಪ್ಪು ಅರಿತು ರಜತ್ ಸಹ ಕ್ಷಮೆ ಕೇಳಿದ್ದರಾದರೂ, ಇದೀಗ ರಜತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು, ಕನಕಪುರ ರಸ್ತೆಯ ವಡೇರಹಳ್ಳಿಯ ಸಾರ್ವಜನಿಕ ರಸ್ತೆಯಲ್ಲಿ ರಜತ್ ಹಾಗೂ ತಂಡ ರೀಲ್ಸ್ ಶೂಟ್ ಮಾಡಿದ್ದರು. ರೀಲ್ಸ್ ಆಕರ್ಷಕವಾಗಿ ಮೂಡಿ ಬರಲೆಂದು ಪೆಟ್ರೋಲ್ ಬಾಂಬ್ ಬಳಸಿ ಬ್ಲಾಸ್ಟ್ ಸಹ ಮಾಡಲಾಗಿತ್ತು. ಬುಧವಾರದಂದು ಕಗ್ಗಲಿಪುರ ಪೊಲೀಸರು ಈ ಘಟನೆಗೆ ಸಂಬಂಧಿಸದಂತೆ ರಜತ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ಇದೇ ದಿನ ರಜತ್, ರೀಲ್ಸ್ ಶೂಟಿಂಗ್ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ತನಿಖೆಯನ್ನು ಸಹ ನಡೆಸಿದ್ದಾರೆ. ರಜತ್ಗೆ ನೊಟೀಸ್ ಜಾರಿ ಮಾಡಿ, ವಿಚಾರಣೆಗೆ ಸಹ ಕರೆಯಲಿದ್ದಾರೆ.
ಇದನ್ನೂ ಓದಿ:ಬೇಸಗೆಯನ್ನು ಬಳಸಿಕೊಳ್ಳಿ, ದೇಹತೂಕ ಇಳಿಸಿ ಎಂದ ಬಿಗ್ಬಾಸ್ ರಘು
ಘಟನೆ ಕುರಿತು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಸ್ಥಳೀಯ ಡಿವೈಎಸ್ಪಿ ಶ್ರೀನಿವಾಸ್, ‘ರಜತ್ ಅವರು ಸಾರ್ವಜನಿಕ ಶಾಂತಿಗೆ ಭಂಗ, ಅನುಚಿತ ವರ್ತನೆ, ರಸ್ತೆ ನಿಯಮ ಉಲ್ಲಂಘನೆ, ಸಾರ್ವಜನಿಕ ಆಸ್ತಿಗೆ ನಷ್ಟ ಮಾಡಿದ್ದಾರೆ. ಬಿಎನ್ಎಸ್ನ ವಿವಿಧ ಕಲಂಗಳ ಅಡಿಯಲ್ಲಿ ರಜತ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಿದ್ದೇವೆ. ರಜತ್ ಅವರಿಗೆ ನೊಟೀಸ್ ನೀಡಿ, ವಿಚಾರಣೆ ಮಾಡಲಾಗುವುದು’ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ರೀಲ್ಸ್ಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ರೀಲ್ಸ್ ಡಿಲೀಟ್ ಮಾಡಿದ್ದ ರಜತ್, ನಿನ್ನೆಯೇ ಈ ಬಗ್ಗೆ ಕ್ಷಮೆ ಕೇಳಿ ವಿಡಿಯೋ ಒಂದನ್ನು ಸಹ ಅಪ್ಲೋಡ್ ಮಾಡಿದ್ದರು. ತಾವು ಸುರಕ್ಷತಾ ಕ್ರಮಗಳನ್ನು ಬಳಸಿಯೇ ಆ ಬ್ಲಾಸ್ಟ್ ಮಾಡಿದ್ದಾಗಿ, ಹಾಗೂ ಸ್ಥಳೀಯರ ಅನುಮತಿ ಪಡೆದೇ ಬ್ಲಾಸ್ಟ್ ಮಾಡಿದ್ದಾಗಿ ಹೇಳಿದ್ದರು. ಅಲ್ಲದೆ, ತಮ್ಮ ಈ ಕೃತ್ಯದಿಂದ ಯಾರಿಗಾದರೂ ತೊಂದರೆ ಆಗಿದ್ದರೆ ಕ್ಷಮೆ ಕೇಳುವುದಾಗಿಯೂ ಸಹ ರಜತ್ ಹೇಳಿದ್ದರು. ಆದರೆ ಇದೀಗ ರಜತ್ ವಿರುದ್ಧ ಅಧಿಕೃತವಾಗಿ ದೂರು ದಾಖಲಾಗಿದ್ದು, ವಿಚಾರಣೆ ಎದುರಿಸಬೇಕಿದೆ.
ಈ ಹಿಂದೆ ರಜತ್ ಮತ್ತು ವಿನಯ್ ಅವರು ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಪ್ರಕರಣದಲ್ಲಿ ರಜತ್ ಮತ್ತು ವಿನಯ್ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು. ಈಗ ಮತ್ತೆ ರೀಲ್ಸ್ ಸಾಹಸದಿಂದ ರಜತ್ ಸಂಕಷ್ಟ ತಂದುಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ