ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದಲ್ಲಿ ಕನಿಷ್ಟ ಇನ್ನು ಒಂದು ವರ್ಷ ದರ್ಶನ್ ಅವರಿಗೆ ಜಾಮೀನು ಸಿಗುವುದಿಲ್ಲ ಎಂಬುದು ಖಾತ್ರಿ ಆಗಿದೆ. ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು, ಇನ್ನೊಂದು ವರ್ಷದಲ್ಲಿ ನಿಗದಿತ ಸಂಖ್ಯೆಯ ಸಾಕ್ಷಿಗಳ ವಿಚಾರಣೆ ನಡೆಯದಿದ್ದಲ್ಲಿ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಇದೀಗ ದರ್ಶನ್ಗೆ ಹಿನ್ನಡೆಯೊಂದು ಎದುರಾಗಿದೆ. ದರ್ಶನ್ ಅನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿದ್ದ ವಕೀಲರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ದರ್ಶನ್ ಪರ ವಕಾಲತ್ತು ನಡೆಸುತ್ತಿದ್ದ ವಕೀಲ ಸುನಿಲ್ ಅವರು ಪ್ರಕರಣದಿಂದ ಹಿಂದೆ ಸರಿದಿದ್ದು, ಬೇರೊಬ್ಬ ವಕೀಲರು ದರ್ಶನ್ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.
ದರ್ಶನ್ ಪರವಾಗಿ ಆರಂಭದಿಂದಲೂ ವಕಾಲತ್ತು ಮಾಡುತ್ತಿದ್ದ ವಕೀಲ ಸುನಿಲ್ ಅವರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿ ಪ್ರಕರಣದಿಂದ ನಿವೃತ್ತರಾಗಿದ್ದಾರೆ. 59ನೇ ಸಿಸಿಎಚ್ ನ್ಯಾಯಾಲಯಕ್ಕೆ ಮೆಮೊ ಸಲ್ಲಿಕೆ ಮಾಡುವ ಮೂಲಕ ತಾವು ಇನ್ನು ಮುಂದೆ ಈ ಪ್ರಕರಣದಲ್ಲಿ ವಕಾಲತ್ತು ವಹಿಸುವುದಿಲ್ಲ ಎಂದಿದ್ದಾರೆ. ದರ್ಶನ್ ಮಾತ್ರವೇ ಅಲ್ಲದೆ ಇದೇ ಪ್ರಕರಣದಲ್ಲಿ ಆರೋಪಿಗಳಾದ ನಾಗರಾಜ್ ಮತ್ತು ಲಕ್ಷ್ಮಣ್ ಪರವಾಗಿಯೂ ಸುನಿಲ್ ವಕಾಲತ್ತು ವಹಿಸಿದ್ದರು.
ಇದನ್ನೂ ಓದಿ:ರೇಣುಕಾ ಸ್ವಾಮಿ ಪ್ರಕರಣ: ಸುಳ್ಳು ಸಾಕ್ಷ್ಯ ಆರೋಪಕ್ಕೆ ಎಸ್ಪಿಪಿ ಪ್ರಸನ್ನ ತಿರುಗೇಟು
ಇದೀಗ ಸುನಿಲ್ ಅವರ ಹಠಾತ್ ನಿವೃತ್ತಿಯ ಬಳಿಕ ದರ್ಶನ್ ಪರವಾಗಿ ವಕೀಲ ಹಷ್ಮತ್ ಪಾಷಾ ಅವರು ದರ್ಶನ್ ಪರ ವಕೀಲರಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ಇನ್ನು ಮುಂದೆ ದರ್ಶನ್ ಪರವಾಗಿ ಹಷ್ಮತ್ ಪಾಷಾ ಅವರು ವಾದಗಳನ್ನು ಮಾಡಲಿದ್ದಾರೆ. ದರ್ಶನ್ಗೆ ಸಹ ಈ ಮಾಹಿತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನೀಡಲಾಗಿದೆ. ‘ನಾನು ಕುಟುಂಬದವರ ಬಳಿ ಚರ್ಚಿಸಿ ಈ ಬಗ್ಗೆ ನಿರ್ಧಾರ ತಿಳಿಸುವೆ’ ಎಂದು ದರ್ಶನ್, ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದ್ದು, ಸಾಕ್ಷ್ಯಗಳ ವಿಚಾರಣೆ ನಡೆಯುತ್ತಿದೆ. ವರ್ಷದಲ್ಲಿ 60 ಸಾಕ್ಷ್ಯಗಳ ವಿಚಾರಣೆ ನಡೆಸದಿದ್ದಲ್ಲಿ ದರ್ಶನ್ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ನ್ಯಾಯಾಲಯವು ತ್ವರಿತವಾಗಿ ಸಾಕ್ಷ್ಯಗಳ ವಿಚಾರಣೆ ನಡೆಸುವಂತೆ ಈಗಾಗಲೇ ಸೂಚಿಸಿದೆ. ಈಗ ವಕೀಲರ ಬದಲಾವಣೆಯಿಂದ ವಿಚಾರಣೆ ತುಸು ನಿಧಾನ ಆದಂತಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ