Headlines

ರೈಸ್ ಪುಲ್ಲಿಂಗ್ ದಂಧೆಕೋರನಿಗೆ ಶಾಕ್: ಕಾರು ಅಡ್ಡಗಟ್ಟಿ ಬರೋಬ್ಬರಿ 1.9 ಕೋಟಿ ರೂ ದರೋಡೆ – Kannada News | Masked Gang Robs 1.09 Crore from Former Rice Pulling Scam Accused in Yelahanka

ದರೋಡೆ ನಡೆದ ಸ್ಥಳ, ಪೊಲೀಸ್ ಠಾಣೆImage Credit source: tv9 kannada

ನೆಲಮಂಗಲ, ಜೂನ್​ 17: ಬೆಂಗಳೂರು ಹೊರವಲಯದಲ್ಲಿ ಸಿನಿಮಾ ಶೈಲಿಯ ದರೋಡೆ (robbery) ಪ್ರಕರಣವೊಂದು ಬೆಳಕಿಗೆ ಬಂದಿದೆ. ಯಲಹಂಕದಿಂದ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯನ್ನ ಅಡ್ಡಗಟ್ಟಿದ 7 ಜನ ಮುಸುಕುದಾರಿಗಳ ಗ್ಯಾಂಗ್, ಬಿಯರ್ ಬಾಟಲಿ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿ ಬರೋಬ್ಬರಿ 1 ಕೋಟಿ 9 ಲಕ್ಷ ರೂ ನಗ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯ ಉತ್ತರ ತಾಲೂಕಿನ ಕುದರಗೆರೆ ಕಾಲೋನಿಯ ಗಣೇಶ ದೇವಾಲಯದ ಬಳಿ ನಡೆದಿದೆ.

ಮುಖ್ಯಾಂಶಗಳು

  • ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿ 1.09 ಕೋಟಿ ಹಣ ದರೋಡೆ
  • ರಾತ್ರಿ 11 ಗಂಟೆಗೆ 7 ಜನ ದುಷ್ಕರ್ಮಿಗಳಿಂದ ಕೃತ್ಯ
  • ಬೆಂಗಳೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕಾರು ಅಡ್ಡಗಟ್ಟಿ 7 ಜನ ದುಷ್ಕರ್ಮಿಗಳಿಂದ ದರೋಡೆ

ಆ್ಯಂಟಿಕ್ ವಸ್ತುಗಳ ಮಾರಾಟ ವ್ಯಾಪಾರ ಮಾಡಿಕೊಂಡಿದ್ದ ಶಿವಶಂಕರ್ ಎಂಬಾತನ ಕಾರನ್ನು ಅಡ್ಡಗಟ್ಟಿದ 7 ಜನ ಮುಸುಕುದಾರಿಗಳ ತಂಡ ಶಿವಶಂಕರ್ ಹಾಗೂ ಚಾಲಕನಿಗೆ ಥಳಿಸಿ ಬರೋಬ್ಬರಿ 1 ಕೋಟಿ 9 ಲಕ್ಷ ಹಣವನ್ನ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಘಟನೆ ಕಳೆದ ಸೋಮವಾರ ರಾತ್ರಿ ಸುಮಾರು 11 ಗಂಟೆಯಲ್ಲಿ ನಡೆದಿದ್ದು, ದರೋಡೆಗೊಳಗಾದ ಹಣ ಶಿವಶಂಕರ್​​​​ನದ್ದೇ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ: 13.14 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಜಪ್ತಿ, 6 ಮಂದಿಯ ಬಂಧನ

ಕೋಟ್ಯಂತರ ರೂ ಹಣ ಕಳೆದುಕೊಂಡ ಶಿವಶಂಕರ್ ಹಿನ್ನೆಲೆ ನೋಡುವುದಾದರೆ, ಈ ಹಿಂದೆ ಈತ ರೈಸ್ ಪುಲ್ಲಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡಿದ್ದ. ಬೆಂಗಳೂರು ನಗರದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕೇಸ್ ದಾಖಲಾಗಿದ್ದು, ಜೈಲಿಗೂ ಹೋಗಿ ಬಂದಿದ್ದಾನೆ. ರೈಸ್ ಪುಲ್ಲಿಂಗ್​​ನಲ್ಲಿ ಹಣ ಕಳೆದುಕೊಂಡಿದ್ದರಿಂದ ಹೊಸ ವ್ಯಾಪಾರ ಮಾಡಲು ಮುಂದಾಗಿದ್ದ ಶಿವಶಂಕರ್ ಇತ್ತೀಚೆಗೆ ಆಂಧ್ರ ಮೂಲದ ಮೊಹಮ್ಮದ್ ಪರ್ವೇಜ್ ಹಾಗೂ ಜಿಪ್ಸನ್, ಹೈದರಾಬಾದ್ ಮೂಲದ ಸಲೀಂ ಪ್ಲ್ಯಾನ್​ ಮಾಡಿದ್ದರು.

1.09 ಕೋಟಿ ರೂ. ದರೋಡೆ

ಸೋಮವಾರ ರಾತ್ರಿ ಸಲೀಂನಿಂದ ಪೀಣ್ಯಾ ಬಳಿ 35 ಲಕ್ಷ ರೂ ಪಡೆದು ತನ್ನ ಮನೆಯಲ್ಲಿ ಇಟ್ಟಿದ್ದ ಶಿವಶಂಕರ್, ಬಳಿಕ ಪರ್ವೇಜ್ ಹಾಗೂ ಜಿಪ್ಸನ್‌ನನ್ನು ಭೇಟಿಯಾಗಲು ಯಲಹಂಕಕ್ಕೆ ತೆರಳಿದ್ದನು. ಅಲ್ಲಿ ಅವರಿಂದ 74 ಲಕ್ಷ ರೂ ಹಣವನ್ನು ಪಡೆದು ಕಾರಿನಲ್ಲಿ ವಾಪಸ್ ಬರುತ್ತಿದ್ದಾಗ ದರೋಡೆಕೋರರು ಅಟ್ಯಾಕ್ ಮಾಡಿದ್ದಾರೆ. ಕಾರಿನಲ್ಲಿದ್ದ 74 ಲಕ್ಷ ರೂ ದೋಚಿದ್ದಲ್ಲದೆ, ತಮ್ಮೆನಹಳ್ಳಿಯ ಮನೆಯಲ್ಲಿದ್ದ 35 ಲಕ್ಷ ರೂ ಹಣವನ್ನು ತರಿಸಿಕೊಂಡು ಒಟ್ಟು 1.09 ಕೋಟಿ ರೂ. ದೋಚಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಡ್ರಗ್ಸ್ ಬೇಟೆ: 5.67 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ, ಕೊಕೇನ್ ಜಪ್ತಿ, ಉಗಾಂಡಾ ಮಹಿಳೆ ಸೇರಿ ಮೂವರ ಬಂಧನ

ಘಟನೆಗೆ ಸಂಬಂಧಿಸಿದಂತೆ ಸದ್ಯ ನೆಲಮಂಗಲದ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹಲ್ಲೆ ನಡೆಸಿ ಕೋಟ್ಯಂತರ ಹಣದೊಂದಿಗೆ ಪರಾರಿಯಾಗಿರುವ ಆ 7 ಜನ ಮುಸುಕುದಾರಿ ದರೋಡೆಕೋರರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *