Headlines

ವಿಜಯಪುರ: ಬರಡಾಗಿದ್ದ ಭೂಮಿಯಲ್ಲಿ ಈಗ ಹಾಲಿನ ಹೊಳೆ! ಬಬಲೇಶ್ವರದಲ್ಲಿ ಕ್ಷೀರಕ್ರಾಂತಿ – Kannada News | White Revolution in Babaleshwar: Minister MB Patil Fuels Dairy Farming Boom in Vijayapura District

ಬಬಲೇಶ್ವರದಲ್ಲಿ ಕ್ಷೀರಕ್ರಾಂತಿ (ಸಾಂದರ್ಭಿಕ ಚಿತ್ರ)Image Credit source: tv9

ವಿಜಯಪುರ, ಜುಲೈ 6: ಒಂದು ಕಾಲದಲ್ಲಿ ತೀವ್ರ ಬರಗಾಲ ಮತ್ತು ಧೂಳಿನಿಂದ ಆವೃತವಾಗಿದ್ದ ವಿಜಯಪುರ (Vijayapura) ಜಿಲ್ಲೆಯ ಚಿತ್ರಣ ಈಗ ಸಂಪೂರ್ಣವಾಗಿ ಬದಲಾಗುತ್ತಿದೆ. ವಿವಿಧ ನೀರಾವರಿ ಯೋಜನೆಗಳು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಯಶಸ್ವಿಯಾದ ಬೆನ್ನಲ್ಲೇ, ಜಿಲ್ಲೆಯು ಈಗ ಹಸಿರೀಕರಣ ಮತ್ತು ಕ್ಷೀರಕ್ರಾಂತಿಯತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಶಾಸಕ ಹಾಗೂ ಸಚಿವ ಎಂಬಿ ಪಾಟೀಲ್ ವಿಶೇಷ ಕಾಳಜಿಯಿಂದಾಗಿ ಕೃಷಿಯ ಜೊತೆ ಜೊತೆಗೆ ಹೈನೋದ್ಯಮ ಕೂಡ ಮುನ್ನೆಲೆಗೆ ಬಂದಿದೆ. ಕ್ಷೇತ್ರದ ಆಯ್ದ ರೈತರು ಹಾಗೂ ರೈತ ಮಹಿಳೆಯರಿಗೆ ಹೈನೋದ್ಯಮದಲ್ಲಿ ವೈಜ್ಞಾನಿಕ ತರಬೇತಿ ಕೊಡಿಸುವ ಮೂಲಕ ಕ್ಷೇತ್ರದಲ್ಲಿ ಹೊಸ ಆರ್ಥಿಕ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ.

ಸಂಸ್ಥೆಗಳ ಸಹಯೋಗ, ರೈತರಿಗೆ ಉಚಿತ ತರಬೇತಿ

2013 ರಿಂದ 2018 ರವರೆಗೆ ಜಲಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ಎಂಬಿ ಪಾಟೀಲ್ ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಮೊದಲ ಆದ್ಯತೆ ನೀಡಿದ್ದರು. ಜೊತೆಗೆ ‘ಕೋಟಿ ವೃಕ್ಷ ಅಭಿಯಾನ’ದ ಮೂಲಕ ಜಿಲ್ಲೆಯಲ್ಲಿ 5 ಕೋಟಿ ಸಸಿಗಳನ್ನು ನೆಟ್ಟು ಹಸಿರೀಕರಣಕ್ಕೆ ಬಲವಾದ ಪಾಯ ಹಾಕಿದ್ದರು. ಇದೀಗ ತಮ್ಮ ಸ್ವಕ್ಷೇತ್ರ ಬಬಲೇಶ್ವರದ ನಿಡೋಣಿ, ನಾಗರಾಳ, ಕುಮಟೆ, ಅರ್ಜುಣಗಿ, ಜಾಲಗೇರಿ, ಯಕ್ಕುಂಡಿ, ಟಕ್ಕಳಕಿ, ಬಾಬಾನಗರ, ಟೋಕಳೆವಾಡಿ, ಹುಬನೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಹೈನುಗಾರಿಕೆಯಲ್ಲಿ ಆಸಕ್ತಿಯಿರುವ ರೈತರನ್ನು ಗುರುತಿಸಿ ಅಕ್ಷಯಕಲ್ಪ, ಕೃಷಿಕಲ್ಪ ಹಾಗೂ ಬಿಎಲ್‌ಡಿಇ (BLDE) ಸಂಸ್ಥೆಯ ಸಹಯೋಗದಲ್ಲಿ ಉಚಿತವಾಗಿ ಆಧುನಿಕ ಹೈನುಗಾರಿಕೆ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಗಾಗಿ ಬಿಎಲ್‌ಡಿಇ ಸಂಸ್ಥೆಯಿಂದ ವಾರ್ಷಿಕ 50 ಲಕ್ಷ ರೂಪಾಯಿಗಳಂತೆ ಮುಂದಿನ ಐದು ವರ್ಷಗಳವರೆಗೆ ಒಟ್ಟು ಧನಸಹಾಯವನ್ನು ನೀಡಲಾಗುತ್ತಿದೆ ಎಂದು ಸಚಿವ ಎಂಬಿ ಪಾಟೀಲ್ ಪುತ್ರ ಬಸನಗೌಡ ಪಾಟೀಲ್ ತಿಳಿಸಿದ್ದಾರೆ.

ವೈಜ್ಞಾನಿಕ ವಿಧಾನದಿಂದ ದುಪ್ಪಟ್ಟಾದ ಹಾಲು ಇಳುವರಿ

ಹಸುಗಳಿಗೆ ಕೇವಲ ಒಣ ಮೇವು ಹಾಕಿದರೆ ಮಾತ್ರ ಸಾಕು ಎಂಬ ಹಳೆಯ ಪರಿಕಲ್ಪನೆಯಲ್ಲಿದ್ದ ರೈತರಿಗೆ ಕೃಷಿಕಲ್ಪ ಮತ್ತು ಅಕ್ಷಯಕಲ್ಪ ಸಂಸ್ಥೆಗಳು ಹೊಸ ದೃಷ್ಟಿಕೋನ ನೀಡಿವೆ. ಕಡಿಮೆ ಖರ್ಚಿನಲ್ಲಿ, ರಾಸಾಯನಿಕ ಮುಕ್ತ ಆಹಾರ ಬಳಸಿ ಹೇಗೆ ಗುಣಮಟ್ಟದ ಮೇವು ಮತ್ತು ನೀರು ಒದಗಿಸಬೇಕು ಎಂಬುದನ್ನು ತರಬೇತಿಯಲ್ಲಿ ಸಾಬೀತುಪಡಿಸಲಾಗಿದೆ. ಹಸುಗಳಿಗೆ ವೈಜ್ಞಾನಿಕ ಕೊಟ್ಟಿಗೆ ನಿರ್ಮಾಣ, ಆರೋಗ್ಯ ನಿರ್ವಹಣೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿದ್ದರಿಂದ ಹಾಲಿನ ಉತ್ಪಾದನೆ ದುಪ್ಪಟ್ಟಾಗಿದೆ. ಪರಿಣಾಮವಾಗಿ ಬಬಲೇಶ್ವರ ಕ್ಷೇತ್ರದಲ್ಲಿ ಇಂದು 100ಕ್ಕೂ ಹೆಚ್ಚು ಕುಟುಂಬಗಳು ಹೈನೋದ್ಯಮದಲ್ಲಿ ಯಶಸ್ಸು ಕಂಡಿವೆ. ನಾಗರಾಳ ಗ್ರಾಮದ ಸಾಹೇಬಗೌಡ ಪಾಟೀಲ್ ಎಂಬುವವರು ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಮಾಸಿಕ ಗಣನೀಯ ಆದಾಯ ಗಳಿಸುತ್ತಿದ್ದಾರೆ.

ಕೂಲಿ ಮಾಡುತ್ತಿದ್ದ ದಂಪತಿಗಳ ಯಶೋಗಾಥೆ

ಕೇವಲ ಎರಡು ಎಕರೆ ಜಮೀನು ಹೊಂದಿದ್ದ ರಾಜಕುಮಾರ ಮತ್ತು ಮಹಾದೇವಿ ಕೊಣ್ಣೂರ ದಂಪತಿಗಳು ಈ ಹಿಂದೆ ನಿತ್ಯ ಜೀವನ ನಿರ್ವಹಣೆಗಾಗಿ ಮತ್ತೊಬ್ಬರ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಈ ಹೈನುಗಾರಿಕೆ ತರಬೇತಿ ಪಡೆದ ನಂತರ ಅವರು 15 ಹಸುಗಳನ್ನು ಸಾಕಿ, ಹಾಲು ಕರೆಯುವ ಯಂತ್ರವನ್ನೂ ಖರೀದಿಸಿದ್ದಾರೆ. ಇಂದು ಅವರು ತಿಂಗಳಿಗೆ ಬರೋಬ್ಬರಿ 2.5 ಲಕ್ಷ ರೂಪಾಯಿಗಳ ವಹಿವಾಟು ನಡೆಸುತ್ತಾ ಆರ್ಥಿಕವಾಗಿ ಸಬಲರಾಗಿದ್ದಾರೆ. ತರಬೇತಿ ಪಡೆದ ಕಾರಣ ರೈತರು ಹೈನುಗಾರಿಕೆಯನ್ನು ಪೂರ್ಣ ಸಮಯದ ಕೆಲಸವಾಗಿ ಮಾಡಬೇಕಾಗಿಲ್ಲ, ಬದಲಿಗೆ ಪಾರ್ಟ್ ಟೈಂ (ಅರೆಕಾಲಿಕ) ಮಾದರಿಯಲ್ಲೇ ನಿರ್ವಹಿಸುತ್ತಾ ಕೃಷಿಯ ಜೊತೆಗೆ ಹೆಚ್ಚಿನ ಲಾಭ ಗಳಿಸುತ್ತಿದ್ದಾರೆ.

ಸಚಿವ ಎಂ.ಬಿ. ಪಾಟೀಲ್ ಅವರ ಕ್ಷೀರಕ್ರಾಂತಿಯ ಕನಸು ನನಸಾಗುತ್ತಿರುವುದಕ್ಕೆ ಕ್ಷೇತ್ರದ ರೈತರು ಹಾಗೂ ರೈತ ಮಹಿಳೆಯರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈತರಿಗೆ ಈ ತರಬೇತಿ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ ಎಂದು ಕೃಷಿಕಲ್ಪ ಸಂಸ್ಥೆಯ ಮುಖ್ಯಸ್ಥ ಸಿಎಂ ಪಾಟೀಲ್ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *