ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ (Thalapathy Vijay) ಅಭೂತಪೂರ್ವ ಗೆಲುವು ಕಂಡಿದ್ದಾರೆ. ವಿಜಯ್ ಅವರ ಗೆಲುವು ಅದೆಷ್ಟು ಸದ್ದು ಮಾಡಿದೆಯೆಂದರೆ ಇತರೆ ರಾಜ್ಯಗಳ ಫಲಿತಾಂಶಗಳು ಹಿನ್ನೆಲೆಗೆ ಸರಿದು ಬಿಟ್ಟಿವೆ. ಪಕ್ಷ ಕಟ್ಟಿದ ಎರಡೇ ವರ್ಷದಲ್ಲಿ ವಿಜಯ್ ಚುನಾವಣೆ ಗೆದ್ದು ಸಿಎಂ ಆಗಲಿದ್ದಾರೆ. ಆದರೆ ವಿಜಯ್ ಗೆಲುವನ್ನು ವಿಶ್ಲೇಷಿಸುತ್ತಿರುವವರು ಅವರು ಸ್ಟಾರ್ ಗಿರಿಯ ಬಲದಿಂದ ಗೆದ್ದಿದ್ದಾರೆ. ಸಿನಿಮಾ ಸ್ಟಾರ್ ಆಗಿ ಧಕ್ಕಿಸಿಕೊಂಡಿರುವ ಜನಪ್ರಿಯತೆಯೇ ಅವರನ್ನು ಗೆಲ್ಲಿಸಿದೆ ಎನ್ನುತ್ತಿದ್ದಾರೆ. ಅವರ ಗೆಲುವಿಗೆ ಸ್ಟಾರ್ ಗಿರಿ ಸಹಾಯ ಮಾಡಿದೆಯಾದರೂ ಅದೊಂದರಿಂದಲೇ ವಿಜಯ್ ಗೆದ್ದಿದ್ದಾರೆ ಎಂಬುದು ಅಪ್ಪಟ ಸುಳ್ಳು. ವಿಜಯ್ ರಾಜಕೀಯ ಪಕ್ಷ ಸ್ಥಾಪಿಸಿ ಎರಡು ವರ್ಷವೇ ಆಗಿರಬಹುದು ಆದರೆ ಸಮಾಜ ಸೇವೆಯನ್ನು ಸುಮಾರು ಎರಡು ದಶಕಕ್ಕೂ ಹೆಚ್ಚು ಸಮಯದಿಂದಲೂ ಮಾಡುತ್ತಿದ್ದಾರೆ. ಅದರ ಪಟ್ಟಿ ಇಲ್ಲಿದೆ ನೋಡಿ…
1996 ಮತ್ತು 98 ರಲ್ಲಿ ರಲ್ಲಿ ಚೆನ್ನೈನಲ್ಲಿ ನೆರೆ ಪರಿಸ್ಥಿತಿ ಉಂಟಾದಾಗ ಆಗಿನ ಸಮಯದಲ್ಲಿ ಭಾರಿ ಪ್ರಮಾಣದ ಹಣ ಸಹಾಯವನ್ನು ಸಂತ್ರಸ್ಥರಿಗಾಗಿ ವಿಜಯ್ ಮಾಡಿದ್ದರು. ಬಳಿಕ ಕಾರ್ಗಿಲ್ ಯುದ್ಧದ ಸಮಯದಲ್ಲಿ ಬೀದಿಗಿಳಿದು ದೇಣಿಗೆ ಸಂಗ್ರಹಿಸಿದ್ದು ಮಾತ್ರವೇ ಅಲ್ಲದೆ ಖುದ್ದು ಲಕ್ಷಾಂತರ ರೂಪಾಯಿ ಹಣವನ್ನು ಸೈನಿಕರ ನಿಧಿಗೆ ನೀಡಿದ್ದರು. 2001 ರ ಗುಜರಾತ್ ಭೂಪಂಕದ ಸಂದರ್ಭದಲ್ಲಿಯೂ ಸಹ ದೇಣಿಗೆ ಸಂಗ್ರಹಿಸಿದ್ದರು, ದೇಣಿಗೆ ನೀಡಿದ್ದರು ಸಹ.
2004 ರ ಸುನಾಮಿ ಸಮಯದಲ್ಲಿ ಭಾರಿ ಮೊತ್ತದ ಹಣಕಾಸು ದೇಣಿಗೆ ನೀಡುವ ಜೊತೆಗೆ ಸಂತ್ರಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. 2007 ರಲ್ಲಿ ವಿಜಯ್ ಉಚಿತ ಶಾಲೆಯೊಂದನ್ನು ಪ್ರಾರಂಭಿಸಿದರು. ಕೆಲ ವರ್ಷಗಳ ಬಳಿಕ ಮತ್ತೊಂದು ಶಾಲೆಯಲ್ಲಿ ಪ್ರಾರಂಭ ಮಾಡಿದರು. ಫ್ರೀ ಕಂಪ್ಯೂಟರ್ ಸೆಂಟರ್ ಅನ್ನು 2010 ರ ಸಮಯದಲ್ಲಿ ಪ್ರಾರಂಭಿಸಿದರು. 2010 ರಲ್ಲಿ 300 ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದ್ದರು. 2011 ರಲ್ಲಿ ಶಾಲಾ ಮಕ್ಕಳಿಗೆ ಸೈಕಲ್, ಅಂಗವಿಲಕರಿಗೆ ವಾಹನಗಳನ್ನು ಸ್ವಂತ ಹಣದಲ್ಲಿ ನೀಡಿದ್ದರು.
ಇದನ್ನೂ ಓದಿ:ದಳಪತಿ ವಿಜಯ್ ಪಕ್ಷದಿಂದ ಗೆದ್ದು ಶಾಸಕರಾದ ತುಮಕೂರು ಮೂಲದ ಸುನೀಲ್ ಆನಂದ್ ಬಗ್ಗೆ ನಿಮಗೆ ಗೊತ್ತೇ!
ಅದೇ ಸಮಯದಲ್ಲಿ, ತಮ್ಮ ಹುಟ್ಟುಹಬ್ಬದಂದು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಚಿನ್ನದ ಉಂಗುರಗಳನ್ನು ನೀಡಿದರು. ಇದನ್ನು ಅವರು ಹಲವು ವರ್ಷಗಳ ಕಾಲ ಮಾಡಿದರು. ಹಲವು ವರ್ಷಗಳಿಂದ ಪ್ರತಿ ವರ್ಷವೂ ಉಚಿತ ಮದುವೆಗಳನ್ನು ಮಾಡಿಸುತ್ತಿದ್ದಾರೆ. ವಧು-ವರರಿಗೆ ಉಡುಗೊರೆಗಳನ್ನು ಸಹ ವಿಜಯ್ ನೀಡುತ್ತಾರೆ. ಪ್ರತಿ ವರ್ಷವೂ ಐ ಡೊನೇಷನ್, ಬ್ಲಡ್ ಡೊನೇಷನ್ ಕ್ಯಾಂಪ್ ಮಾಡಿಸುತ್ತಾರೆ. ಬ್ಲಡ್ ಡೊನೇಷನ್ಗಾಗಿ ಪ್ರತ್ಯೇಕವಾಗಿ ಅಪ್ಲಿಕೇಶನ್ ಒಂದನ್ನು ಸಹ ವಿಜಯ್ ಪ್ರಾರಂಭ ಮಾಡಿದ್ದರು.
ತಮ್ಮ ಫೌಂಡೇಷನ್ ಮೂಲಕ ಹಲವಾರು ಮಕ್ಕಳಿಗೆ ಆಪರೇಷನ್ಗಳನ್ನು ಮಾಡಿಸಿದ್ದಾರೆ. 2012 ರಿಂದ ಪ್ರತಿ ವರ್ಷ ಎಜುಕೇಶನಲ್ ಅವಾರ್ಡ್ಸ್ ನೀಡುತ್ತಾ ಬರುತ್ತಿದ್ದಾರೆ. ಅತ್ಯುತ್ತಮ ದರ್ಜೆಯಲ್ಲಿ ಪಾಸಾದ ಸರ್ಕಾರಿ ಶಾಲೆ ಮಕ್ಕಳಿಗೆ ವಿಜಯ್ ನಗದು ಬಹುಮಾನಗಳನ್ನು ನೀಡುತ್ತಾ ಬಂದಿದ್ದಾರೆ. ಪ್ರತಿ ವರ್ಷವೂ ತಪ್ಪದೇ ಈ ಕಾರ್ಯ ಮಾಡುತ್ತಾರೆ. ಕೇರಳ ಪ್ರವಾಹ, ನೇಪಾಳ ಪ್ರವಾಹ ಇನ್ನೂ ಅನೇಕ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ವಿಜಯ್ ಸಹಾಯ ಮಾಡಿದ್ದಾರೆ.
ಕೇವಲ ಸಮಾಜ ಸೇವೆ ಮಾತ್ರವೇ ಅಲ್ಲದೆ, ಹಲವು ತಮಿಳುನಾಡು ಪರ ಪ್ರತಿಭಟನೆಗಳಲ್ಲಿಯೂ ಸಹ ವಿಜಯ್ ಪಾಲ್ಗೊಂಡಿದ್ದಾರೆ. ಸಿನಿಮಾ ರಂಗದ ಜೊತೆಗೆ ನೀರಿಗಾಗಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ‘ತಮಿಳ್ ಇಲಂ’ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. 2018 ರಲ್ಲಿ ದಲಿತ ಯುವತಿಯೊಬ್ಬಾಕೆ ಶಿಕ್ಷಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಾಗ ಖುದ್ದಾಗಿ ಮೃತ ಯುವತಿಯ ಮನೆಗೆ ಹೋಗಿ ಅವರ ಪೋಷಕರನ್ನು ಭೇಟಿ ಆಗಿ ಬಂದಿದ್ದರು ವಿಜಯ್. 2017 ರಲ್ಲಿ ನಡೆದ ಜಲ್ಲಿಕಟ್ಟು ಹೋರಾಟಕ್ಕೆ ಬೆಂಬಲ ನೀಡಿದ್ದು ಮಾತ್ರವಲ್ಲದೆ, ಹೋರಾಟದ ಹಿಂದೆ ಇದ್ದ ಪ್ರಮುಖ ವ್ಯಕ್ತಿಗಳಲ್ಲಿ ವಿಜಯ್ ಸಹ ಒಬ್ಬರಾಗಿದ್ದರು ಎನ್ನಲಾಗುತ್ತದೆ. ಹೀಗೆ ಅನೇಕ ಕಾರ್ಯಗಳನ್ನು ವಿಜಯ್ ವರ್ಷಗಳಿಂದಲೂ ಮಾಡುತ್ತಲೇ ಬಂದಿದ್ದಾರೆ. ಹಾಗಾಗಿ ವಿಜಯ್ ಗೆಲುವು ಕೇವಲ ಜನಪ್ರಿಯತೆಯಿಂದ ಧಕ್ಕಿದ್ದು ಮಾತ್ರವಲ್ಲ, ಅದರ ಹಿಂದೆ ಹಲವು ವರ್ಷಗಳ ಸೇವೆಯೂ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ