ಬೆಂಗಳೂರು, ಜೂನ್ 24: ಕರ್ನಾಟಕದಲ್ಲಿ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಟಾಟಾ ಪವರ್ ಕಂಪನಿ ಲಿಮಿಟೆಡ್ ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆ ಪರವಾನಿಗೆಗಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ)ಕ್ಕೆ ಅರ್ಜಿ ಸಲ್ಲಿಸಿದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಅವಕಾಶ ಕೋರಿ ಟಾಟಾ ಸಂಸ್ಥೆ ಅರ್ಜಿ ಸಲ್ಲಿಸಿದೆ.
ಆದರೆ, ಈ ಪ್ರಸ್ತಾವನೆಗೆ ರಾಜ್ಯದ ಬೆಸ್ಕಾಂ, ಹೆಸ್ಕಾಂ, ಚೆಸ್ಕಾಂ, ಮೆಸ್ಕಾಂ ಸೇರಿದಂತೆ ಐದು ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಟಾಟಾ ಪವರ್ನಂತಹ ಖಾಸಗಿ ಸಂಸ್ಥೆಗಳು ಕೇವಲ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಂತಹ ಲಾಭದಾಯಕ ಗ್ರಾಹಕರನ್ನು ಮಾತ್ರ ಆಕರ್ಷಿಸುತ್ತವೆ. ಇದರಿಂದ ಸರ್ಕಾರಿ ಸ್ವಾಮ್ಯದ ಎಸ್ಕಾಂಗಳ ಪ್ರಮುಖ ಆದಾಯದ ಮೂಲ ಕಡಿತಗೊಳ್ಳುತ್ತದೆ ಎಂದು ಬೆಸ್ಕಾಂ ಹೇಳಿದೆ. ಖಾಸಗಿ ಕಂಪನಿಗಳಿಗೆ ಪರವಾನಿಗೆ ನೀಡುವುದರಿಂದ ಎಸ್ಕಾಂಗಳಿಗೆ ನಷ್ಟವಾಗಲಿದ್ದು, ಅಂತಿಮವಾಗಿ ಸಾಮಾನ್ಯ ಗ್ರಾಹಕರು, ಬಡವರು ಮತ್ತು ರೈತರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳಲಿದೆ ಎಂದು ಎಸ್ಕಾಂಗಳು ವಾದಿಸಿವೆ. ಕೆಇಆರ್ಸಿ ಸದ್ಯಕ್ಕೆ ಈ ಅರ್ಜಿ ಕುರಿತು ಸಾರ್ವಜನಿಕ ಅಹವಾಲು ಮತ್ತು ಆಕ್ಷೇಪಣೆಗಳನ್ನು ಆಲಿಸುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ