Headlines

ಶತಕೋಟಿ ಕ್ಲಬ್ ಸೇರಿದ ತಮಿಳು ನಟ ಸೂರ್ಯ; 100 ಕೋಟಿ ರೂಪಾಯಿ ಸಂಭಾವನೆ – Kannada News | Suriya Joins 100 Crore Club After Karuppu Blockbuster: Kollywood New Box Office King

ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಅವರ ಮಾರುಕಟ್ಟೆ ಮೌಲ್ಯ ಈಗ ಗಗನಕ್ಕೇರಿದೆ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ಸತತ ಸೋಲುಗಳು ಹಾಗೂ ಕೆಲವು ಚಿತ್ರಗಳು ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದ್ದರಿಂದ ಅವರ ಮಾರುಕಟ್ಟೆ ಕೊಂಚ ಡಲ್ ಹೊಡೆದಂತಿತ್ತು. ಆದರೆ, ಇದೀಗ ಬಂದಿರುವ ‘ಕರುಪ್ಪು’ ಚಿತ್ರದ ಭರ್ಜರಿ ಯಶಸ್ಸು ಸೂರ್ಯ ಅವರ ಕಂ‌ಬ್ಯಾಕ್‌ಗೆ ಭದ್ರ ಬುನಾದಿ ಹಾಕಿದೆ. ಇದರ ಬೆನ್ನಲ್ಲೇ ನಟ ಸೂರ್ಯ ತಮ್ಮ ಮುಂದಿನ ಸಿನಿಮಾಗಳಿಗಾಗಿ ಬರೋಬ್ಬರಿ 100 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.

‘ಕರುಪ್ಪು’ ಚಿತ್ರದ ಸಕ್ಸಸ್ ತಂದ ಭಾರಿ ಆರ್ಥಿಕ ಬಲ

ಸಿನಿಮಾ ರಂಗದಲ್ಲಿ ನಟನ ಮಾರುಕಟ್ಟೆ ಮೌಲ್ಯ ನಿರ್ಧಾರವಾಗುವುದೇ ಅವರ ಚಿತ್ರ ಗಳಿಸುವ ಕಲೆಕ್ಷನ್ ಆಧಾರದ ಮೇಲೆ. ಇತ್ತೀಚೆಗೆ ಬಿಡುಗಡೆಯಾದ ಸೂರ್ಯ ನಟನೆಯ ‘ಕರುಪ್ಪು’ ಚಿತ್ರವು ಕೇವಲ ತಮಿಳುನಾಡಿನಲ್ಲಿಯೇ ಬರೋಬ್ಬರಿ 170 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ಸೂಪರ್ ಹಿಟ್ ಎನಿಸಿಕೊಂಡಿದೆ.
ಈ ಚಿತ್ರದ ದೈತ್ಯ ಯಶಸ್ಸು ಸೂರ್ಯ ಅವರ ಬ್ಯುಸಿನೆಸ್ ವ್ಯಾಲ್ಯೂ ಅನ್ನು ಗಣನೀಯವಾಗಿ ಹೆಚ್ಚಿಸಿದೆ. ಈ ಭರ್ಜರಿ ಸಕ್ಸಸ್ ಕೊಟ್ಟ ಮೈಲೇಜ್‌ನಿಂದಾಗಿ ಸೂರ್ಯ ತಮ್ಮ ಸಂಭಾವನೆಯನ್ನು ಶತಕೋಟಿ ಗಡಿದಾಟಿಸಿದ್ದಾರೆ ಎಂದು ಕಾಲಿವುಡ್ ಅಂಗಳದಲ್ಲಿ ಚರ್ಚೆಯಾಗುತ್ತಿದೆ. ಸಾಮಾನ್ಯವಾಗಿ ಸೂರ್ಯ ಅವರು ತಮ್ಮದೇ ಆದ ಸ್ವಂತ ನಿರ್ಮಾಣ ಸಂಸ್ಥೆಯ (ಟು ಡಿ ಎಂಟರ್ಟೈನ್ಮೆಂಟ್) ಅಡಿಯಲ್ಲಿ ಹೆಚ್ಚು ಸಿನಿಮಾಗಳನ್ನು ಮಾಡುತ್ತಾರೆ. ಆದಾಗ್ಯೂ, ಹೊರಗಿನ ಬ್ಯಾನರ್‌ಗಳಿಗೆ ಅವರು 100 ಕೋಟಿ ರೂ. ಸಂಭಾವನೆ ನಿಗದಿಪಡಿಸಿದ್ದಾರೆ ಎನ್ನಲಾಗಿದೆ.

ರಜನಿ, ವಿಜಯ್ ಲೀಗ್ ಸೇರಿದ ಸೂರ್ಯ

ತಮಿಳು ಚಿತ್ರರಂಗದಲ್ಲಿ ಈಗಾಗಲೇ ತಲೈವಾ ರಜನಿಕಾಂತ್, ಕಮಲ್ ಹಾಸನ್, ಅಜಿತ್ ಕುಮಾರ್ ಮತ್ತು ರಾಜಕೀಯಕ್ಕೆ ಪ್ರವೇಶಿಸಿರುವ ತಮಿಳಗ ವೆಟ್ರಿ ಕಳಗಂ ಪಕ್ಷದ ಅಧ್ಯಕ್ಷ, ನಟ ವಿಜಯ್ (ಇಳಯದಳಪತಿ) ಅವರ ಸಂಭಾವನೆ 100 ಕೋಟಿ ರೂಪಾಯಿಯ ಗಡಿಯನ್ನು ದಾಟಿದೆ. ಸೂರ್ಯ ಅವರಿಗೆ ಈ ಹಿಂದೆ ಸೂಕ್ತ ಯಶಸ್ಸು ಇಲ್ಲದ ಕಾರಣ ಆ ಲೀಗ್ ತಲುಪಲು ಸಾಧ್ಯವಾಗಿರಲಿಲ್ಲ. ಆದರೆ ಈಗ ‘ಕರುಪ್ಪು’ ಚಿತ್ರದ ಸಕ್ಸಸ್ ಸೂರ್ಯ ಅವರನ್ನು ಈ ಘಟಾನುಘಟಿ ನಟರ ಸಾಲಿಗೆ ತಂದು ನಿಲ್ಲಿಸಿದೆ.

ಬ್ಯಾಕ್-ಟು-ಬ್ಯಾಕ್ ಸಿನಿಮಾಗಳು

ಸದ್ಯ ‘ಕರುಪ್ಪು’ ಚಿತ್ರದ ಭರ್ಜರಿ ಯಶಸ್ಸಿನ ಉಮ್ಮಸ್ಸಿನಲ್ಲಿರುವ ಸೂರ್ಯ, ತಮ್ಮ ಮುಂದಿನ ಚಿತ್ರ ‘ವಿಶ್ವನಾಥ್ ಅಂಡ್ ಸನ್ಸ್’ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಖ್ಯಾತ ನಿರ್ದೇಶಕ ವೆಂಕಟ್ ಅಟ್ಲೂರಿ ನಿರ್ದೇಶನದ ಈ ಚಿತ್ರದ ಮೇಲೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಗಳಿವೆ.

ಇದರ ಬೆನ್ನಲ್ಲೇ ರೋಮಾಂಚಕ ಚಿತ್ರಗಳ ಸರಮಾಲೆಯೇ ಸೂರ್ಯ ಅವರ ಬತ್ತಳಿಕೆಯಲ್ಲಿದೆ. ಸೂಪರ್ ಹಿಟ್ ‘ಆವೇಶಂ’ ಖ್ಯಾತಿಯ ಜಿತು ಮಾಧವನ್ ನಿರ್ದೇಶನದಲ್ಲಿ ಸೂರ್ಯ ಅವರ 47ನೇ ಸಿನಿಮಾ (ಸೂರ್ಯ-47) ಮೂಡಿಬರಲಿದೆ. ಅದಾದ ನಂತರ, ‘ಜೈ ಭೀಮ್’ ನಂತಹ ಸಮಾಜಮುಖಿ ಕ್ರಾಂತಿಕಾರಿ ಸಿನಿಮಾ ನೀಡಿದ್ದ ಖ್ಯಾತ ನಿರ್ದೇಶಕ ಟಿ.ಎಸ್. ಜ್ಞಾನವೇಲ್ ಅವರೊಂದಿಗೆ ಸೂರ್ಯ ತಮ್ಮ 48ನೇ ಚಿತ್ರಕ್ಕಾಗಿ ಕೈಜೋಡಿಸಲಿದ್ದಾರೆ. ವಿಶೇಷವೆಂದರೆ, ಈ ಮೆಗಾ ಪ್ರಾಜೆಕ್ಟ್ ಅನ್ನು ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿರುವುದು ಚಿತ್ರದ ಮೇಲಿನ ಕುತೂಹಲವನ್ನು ದುಪ್ಪಟ್ಟುಗೊಳಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *