ಶಾಹೀದ್ ಕಪೂರ್ ಅಭಿನಯದ ‘ಅಶ್ವತ್ಥಾಮ’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇತ್ತು. ಆದರೆ ಈ ಸಿನಿಮಾ ಈಗ ಅಧಿಕೃತವಾಗಿ ನಿಂತುಹೋಗಿದೆ. ಇದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ಮೂಡಿಸಿದೆ. ತಂಡದ ಈ ನಿರ್ಧಾರಕ್ಕೆ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ’ ಸಿನಿಮಾದ ಪ್ರಭಾವವೇ ಮುಖ್ಯ ಕಾರಣ ಎಂದು ವರದಿ ಆಗಿದೆ.
‘ಅಶ್ವತ್ಥಾಮ’ ಸಿನಿಮಾ ನಿಂತುಹೋಗಲು ಹಲವು ಕಾರಣಗಳಿವೆ. ಈ ಬಗ್ಗೆ ನಿರ್ಮಾಪಕ ಜಾಕಿ ಭಗ್ನಾನಿ ಸ್ಪಷ್ಟನೆ ನೀಡಿದ್ದಾರೆ. ‘ವೀಕ್ಷಕರು ಬಜೆಟ್ ನೋಡಿ ಸಿನಿಮಾ ನೋಡುವುದಿಲ್ಲ. ಅವರಿಗೆ ಹೊಸತನ ಬೇಕು. ಕಲ್ಕಿ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರು ಅಶ್ವತ್ಥಾಮ ಪಾತ್ರವನ್ನು ಅದ್ಭುತವಾಗಿ ಮಾಡಿದ್ದರು. ಈ ಪಾತ್ರ ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿದೆ’ ಎಂದು ಹೇಳಿದ್ದಾರೆ.
ಇದರಿಂದಾಗಿ ಶಾಹೀದ್ ಕಪೂರ್ ಅವರ ‘ಅಶ್ವತ್ಥಾಮ’ ಸಿನಿಮಾಗೆ ದೊಡ್ಡ ಹಿನ್ನಡೆಯಾಗಿದೆ. ‘ಕಲ್ಕಿ’ ಸಿನಿಮಾ ಗೆದ್ದ ನಂತರ ನಿರ್ಮಾಪಕರು ಮರುಚಿಂತನೆ ನಡೆಸಿದರು. ತಮ್ಮ ಸಿನಿಮಾದಲ್ಲಿ ಹೊಸತನ ಇದೆಯೇ ಎಂದು ಪರಿಶೀಲಿಸಿದರು. ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲು ಸಾಧ್ಯವೇ ಎಂದು ಯೋಚಿಸಿದರು. ಆತುರಪಟ್ಟು ಶೂಟಿಂಗ್ ಆರಂಭಿಸುವುದು ಬೇಡ ಎಂದು ನಿರ್ಧರಿಸಿದರು. ಕೊನೆಗೆ ಸಿನಿಮಾವನ್ನು ತಾತ್ಕಾಲಿಕವಾಗಿ ಕೈಬಿಡಲು ನಿರ್ಮಾಪಕರು ತೀರ್ಮಾನಿಸಿದರು. ಶಾಹೀದ್ ಕಪೂರ್ ಅಭಿಮಾನಿಗಳಿಗೆ ಈ ಸುದ್ದಿ ತೀವ್ರ ನಿರಾಸೆ ತಂದಿದೆ.
ಆದರೆ ಮಾರುಕಟ್ಟೆಯ ಪರಿಸ್ಥಿತಿಗೆ ತಕ್ಕಂತೆ ನಿರ್ಮಾಪಕರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಇಂತಹ ನಿರ್ಧಾರಗಳು ಸಾಮಾನ್ಯ ಎಂಬ ಮಾತು ಕೇಳಿ ಬಂದಿದೆ. ಸಿನಿಮಾದ ಕಥೆಯಲ್ಲಿ ಬದಲಾವಣೆ ತರೋದು ಅಸಾಧ್ಯ. ಅಶ್ವತ್ಥಾಮನ ಕಥೆ ಹೇಗಿದೆಯೋ ಹಾಗೆಯೇ ಹೇಳಬೇಕು. ಆಗ ಎಲ್ಲರೂ ಈ ಸಿನಿಮಾ ಪಾತ್ರವನ್ನು ಅಮಿತಾಭ್ ಬಚ್ಚನ್ ನಟನೆಗೆ ಹೋಲಿಕೆ ಮಾಡುತ್ತಾರೆ. ಇದರಿಂದ ಸಿನಿಮಾಗೆ ಸಾಕಷ್ಟು ಹಿನ್ನಡೆ ಆಗಬಹುದು.
ಇದನ್ನೂ ಓದಿ: ‘ಫರ್ಜಿ’ ವೆಬ್ ಸೀರೀಸ್ ನೋಡಿ ಖೋಟಾ ನೋಟ್ ದಂಧೆ; ಈ ಗ್ಯಾಂಗ್ ಪೊಲೀಸ್ ಖೆಡ್ಡಾಗೆ ಬಿದ್ದಿದ್ದೆ ರಣರೋಚಕ
ಶಾಹೀದ್ ಕಪೂರ್ ಅವರ ಹೊಸ ಸಿನಿಮಾದ ಘೋಷಣೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಜಾಕಿ ಭಗ್ನಾನಿ ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ಕುತೂಹಲ ಮೂಡಿದೆ. ಮತ್ತೊಂದೆಡೆ ‘ಕಲ್ಕಿ 2’ ಸಿನಿಮಾದ ಕೆಲಸಗಳು ಈಗಾಗಲೇ ಆರಂಭವಾಗಿವೆ. ಶೀಘ್ರದಲ್ಲೇ ಪ್ರಭಾಸ್ ಅವರು ಶೂಟಿಂಗ್ಗೆ ಸೇರಿಕೊಳ್ಳಲಿದ್ದಾರೆ. ‘ಕಲ್ಕಿ’ ಸಿನಿಮಾದ ಯಶಸ್ಸು ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.