ಶಿವಮೊಗ್ಗ-ತುಮಕೂರು ಹೆದ್ದಾರಿ ಕಾಮಗಾರಿಯಲ್ಲಿ ಮಹಾ ಯಡವಟ್ಟು: ಕಿರಿದಾದ ಮಣ್ಣಿನ ರಸ್ತೆಯಲ್ಲಿ ಲಾಕ್ ಆಯ್ತು ಗ್ಯಾಸ್ ಟ್ಯಾಂಕರ್ – Kannada News

ಶಿವಮೊಗ್ಗ ಹೆದ್ದಾರಿImage Credit source: Tv9 kannada

ಶಿವಮೊಗ್ಗ, ಜೂ.9: ಅಧಿಕಾರಿಗಳು ಮಾಡುವ ಯಡವಟ್ಟಿನಿಂದ ಜನರಿಗೆ ಭಾರೀ ತೊಂದರೆ ಆಗುತ್ತಿದೆ. ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿ 206ರ ಕಾಮಗಾರಿ ಸಾರ್ವಜನಿಕರಿಗೆ ನಿತ್ಯ ನರಕದರ್ಶನ ಮಾಡಿಸುತ್ತಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮಂದಗತಿಯ ಕೆಲಸಕ್ಕೆ ಇಂದು ಮತ್ತೊಂದು ಭೀಕರ ಅವಾಂತರ ಸೃಷ್ಟಿಯಾಗಿದೆ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಇರುವ ಕುವೆಂಪು ನಗರ ಗ್ರಾಮದ ಮುಂಭಾಗದ ಕಿರಿದಾದ ತಾತ್ಕಾಲಿಕ ಮಣ್ಣಿನ ರಸ್ತೆಯಲ್ಲಿ ಭಾರಿ ಪ್ರಮಾಣದ ಗ್ಯಾಸ್ ತುಂಬಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಸಿಲುಕಿಕೊಂಡಿದ್ದು, ಕೂದಲೆಳೆ ಅಂತರದಲ್ಲಿ ಭೀಕರ ದುರಂತವೊಂದು ತಪ್ಪಿದೆ.

ಕಳೆದ ಐದು ವರ್ಷಗಳಿಂದ ಈ ಹೆದ್ದಾರಿ ಕಾಮಗಾರಿ ನಡೆಯುತ್ತಲೇ ಇದೆ. ಅತ್ಯಾಧುನಿಕ ಯಂತ್ರೋಪಕರಣಗಳಿದ್ದರೂ ಇಲ್ಲಿನ ಕೆಲಸ ಮಾತ್ರ ಆಮೆಗತಿಯಲ್ಲಿ ಕುಂಟುತ್ತಾ ಸಾಗುತ್ತಿದೆ. ಹೆದ್ದಾರಿ ನಿರ್ಮಾಣಕ್ಕಾಗಿ ರಸ್ತೆಯನ್ನು ಅಗೆದು ಹಾಕಲಾಗಿದ್ದು, ಪಕ್ಕದಲ್ಲೇ ಇರುವ 150ಕ್ಕೂ ಹೆಚ್ಚು ಮನೆಗಳಿರುವ ಕುವೆಂಪು ನಗರದ ಜನರಿಗೆ ಸರಿಯಾದ ಸರ್ವಿಸ್ ರಸ್ತೆಯನ್ನೇ ನಿರ್ಮಿಸಿಕೊಟ್ಟಿಲ್ಲ. ಜನರು ಕೇವಲ ಎರಡರಿಂದ ನಾಲ್ಕು ಅಡಿ ಅಗಲದ ಅತ್ಯಂತ ಅಪಾಯಕಾರಿ ತಾತ್ಕಾಲಿಕ ಮಣ್ಣಿನ ರಸ್ತೆಯಲ್ಲೇ ಜೀವ ಕೈಯಲ್ಲಿ ಹಿಡಿದು ಓಡಾಡುತ್ತಿದ್ದಾರೆ. ಇಂದು ಇದೇ ಕಿರಿದಾದ ರಸ್ತೆಯಲ್ಲಿ ಟ್ಯಾಂಕರ್​​​​​ ಒಂದು ಚಲಿಸಿದೆ. ಆದರೆ ಇದು ನಿಯಂತ್ರಣ ತಪ್ಪಿ ರಸ್ತೆ ಬದಿಗೆ ವಾಲಿ ನಿಂತಿತ್ತು. ಟ್ಯಾಂಕರ್ ಸಿಲುಕಿದ್ದ ಜಾಗದಿಂದ ಕೇವಲ ಒಂದೇ ಒಂದು ಅಡಿ ಪಕ್ಕದಲ್ಲಿರುವ ಸುಮಾರು 20 ರಿಂದ 25 ಅಡಿಯಷ್ಟು ಆಳದಲ್ಲಿ ಪ್ರಪಾತಕ್ಕೆ ಹೋಗಿ ಬೀಳುತ್ತಿತ್ತು.

ಒಂದು ವೇಳೆ ತುಂಬಿದ್ದ ಗ್ಯಾಸ್ ಟ್ಯಾಂಕರ್ ಕಂದಕಕ್ಕೆ ಬಿದ್ದಿದ್ದರೆ ಭಾರಿ ಪ್ರಮಾಣದ ಗ್ಯಾಸ್ ಸೋರಿಕೆಯಾಗಿ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶ, ಹತ್ತಾರು ಹಳ್ಳಿಗಳು ಹಾಗೂ ಶಿವಮೊಗ್ಗ ಮತ್ತು ಭದ್ರಾವತಿ ನಗರದ ವ್ಯಾಪ್ತಿಯಲ್ಲಿ ದೊಡ್ಡ ಅಗ್ನಿ ದುರಂತವೇ ಸಂಭವಿಸುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ಟ್ಯಾಂಕರ್ ಪ್ರಪಾತಕ್ಕೆ ಬೀಳದೆ ಅಲ್ಲಿಯೇ ನಿಂತಿದೆ. ವಿಷಯ ತಿಳಿಯುತ್ತಿದ್ದಂತೆ ಇಂಡಿಯನ್ ಗ್ಯಾಸ್ ಸಂಸ್ಥೆಯ ಎರಡು ಖಾಲಿ ಟ್ಯಾಂಕರ್‌ಗಳು ಹಾಗೂ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದಾವಿಸಿದವು. ಅಗ್ನಿಶಾಮಕ ಸಿಬ್ಬಂದಿ ಹಾಗೂ ತಾಂತ್ರಿಕ ತಂಡ ಎರಡು ಜೆಸಿಬಿ, ಕ್ರೇನ್ ಮತ್ತು ಹಿಟಾಚಿ ಯಂತ್ರಗಳನ್ನು ಬಳಸಿ ಸುಮಾರು 4 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿದರು. ಮೊದಲು ಗ್ಯಾಸ್ ಖಾಲಿ ಮಾಡಿ ಆ ಬಳಿಕ ಟ್ಯಾಂಕರ್ ಅನ್ನು ಸುರಕ್ಷಿತವಾಗಿ ಹೊರಗೆಳೆದಿವೆ. ಈ ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು.

ಇದನ್ನೂ ಓದಿ: ಜೇನುಗೂಡಿಗೆ ಕಲ್ಲು ಎಸೆದ ಪರಿಣಾಮ ಹೆಜ್ಜೇನು ದಾಳಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊರಾರ್ಜಿ ಶಾಲೆಯ 21ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಗುತ್ತಿಗೆದಾರರು ಮತ್ತು ಕಂದಾಯ ಇಲಾಖೆಯ ಬೇಜಾಬ್ದಾರಿತನಕ್ಕೆ ಸ್ಥಳೀಯ ಗ್ರಾಮಸ್ಥರು ಐದು ವರ್ಷಗಳಿಂದ ಈ ರಸ್ತೆಯಲ್ಲಿ ನರಕಯಾತನೆ ಪಡುತ್ತಿದ್ದಾರೆ. ಇಷ್ಟು ಕಿರಿದಾದ ಮತ್ತು ಕೇವಲ ಮಣ್ಣಿನಿಂದ ತಾತ್ಕಾಲಿಕವಾಗಿ ಮಾಡಲಾದ ರಸ್ತೆಯ ಮೇಲೆ ಘನ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಷೇಧ ಹೇರಬೇಕಾಗಿತ್ತು. ಆದರೆ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ ಹಾಗೂ ಶಿವಮೊಗ್ಗ ನಗರಕ್ಕೆ ಸುಲಭವಾಗಿ ತಲುಪಬಹುದು ಎನ್ನುವ ಕಾರಣಕ್ಕೆ ದೊಡ್ಡ ದೊಡ್ಡ ಲಾರಿ ಹಾಗೂ ಟ್ಯಾಂಕರ್‌ಗಳು ನಿರಂತರವಾಗಿ ಇದೇ ಅಪಾಯಕಾರಿ ರಸ್ತೆಯನ್ನೇ ಬಳಸುತ್ತಿವೆ. ಗ್ರಾಮಸ್ಥರಿಗೆ ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಗೆ ಹೋಗಲು ಕನಿಷ್ಠ ಸೂಕ್ತವಾದ ಸಂಪರ್ಕ ರಸ್ತೆಯೂ ಇಲ್ಲದೆ ಪರದಾಡುವಂತಾಗಿದ್ದು, ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹೆದ್ದಾರಿ ಕಾಮಗಾರಿಗೆ ಶಾಪವಿಮೋಚನೆ ಸಿಗುವುದು ಯಾವಾಗ? ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಸೂಕ್ತ ಸರ್ವಿಸ್ ರಸ್ತೆ ಕಲ್ಪಿಸುತ್ತಾ? ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:42 pm, Tue, 9 June 26

Source link

Leave a Reply

Your email address will not be published. Required fields are marked *