ನವದೆಹಲಿ, (ಮೇ 03): ಶೃಂಗೇರಿ ವಿಧಾನಸಭೆ ಕ್ಷೇತ್ರದ ಅಂಚೆ ಮರು ಮತ ಎಣಿಕೆಯಲ್ಲಿ (Sringeri Postal Ballots Recount) ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆಲುವು ಸಾಧಿಸಿರುವ ಸಾಧ್ಯತೆ ಸ್ಪಷ್ಟವಾಗಿದೆ. ಕೂಡಲೇ ಫಲಿತಾಂಶ ಘೋಷಣೆ ಆಗಬೇಕು.ತಕ್ಷಣ ಫಲಿತಾಂಶ ಘೋಷಿಸದಿದ್ದರೆ ಅವಾಂತರಗಳಿಗೆ ಚುನಾವಣಾಧಿಕಾರಿಯೇ ಹೊಣೆ ಹೊರಬೇಕಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ (Pralhad Joshi) ಎಂದು ಎಚ್ಚರಿಸಿದ್ದಾರೆ.
ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರು ಅಂಚೆ ಮತ ಎಣಿಕೆ ಎಡವಟ್ಟಿನಿಂದ ಈಗಾಗಲೇ ಮೂರು ವರ್ಷದಿಂದ ಶಾಸಕ ಸ್ಥಾನದಿಂದ ವಂಚಿತರಾಗಿದ್ದಾರೆ. ಫಲಿತಾಂಶ ಘೋಷಣೆಗೆ ಇನ್ನೂ ವಿಳಂಬ ಸಲ್ಲದು. ಚುನಾವಣಾಧಿಕಾರಿ ಯಾವುದೇ ಒತ್ತಡಕ್ಕೆ ಮಣಿಯದೆ ತತ್ ಕ್ಷಣವೇ ಅಂಚೆ ಮತ ಮರು ಎಣಿಕೆ ಫಲಿತಾಂಶವನ್ನು ಘೋಷಿಸಬೇಕು. ಮಾನ್ಯ ಹೈಕೋರ್ಟ್ ಆದೇಶವನ್ನು ಪಾಲಿಸಬೇಕು ಎಂದಿದ್ದಾರೆ.
ಇದನ್ನೂ ಓದಿ: ಶೃಂಗೇರಿ ಕ್ಷೇತ್ರದ ಮರುಮತ ಎಣಿಕೆ: ತಕ್ಷಣ ಫಲಿತಾಂಶ ಘೋಷಣೆ ಕೋರಿ ಲೀಗಲ್ ನೋಟಿಸ್
ಅಂಚೆ ಮತಗಳ ಮರು ಎಣಿಕೆಯಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಚುನಾವಣಾಧಿಕಾರಿಯೇ (DEO) ಘೋಷಿಸಬೇಕೆಂದು ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದೆ. ಅದರಂತೆ ಚುನಾವಣಾಧಿಕಾರಿ ಹೈಕೋರ್ಟ್ ಆದೇಶವನ್ನು ಪಾಲಿಸಬೇಕೆಂದು ಜೋಶಿ ಆಗ್ರಹಿಸಿದ್ದಾರೆ.
ಚುನಾವಣಾಧಿಕಾರಿಗೆ ಲೀಗಲ್ ನೋಟಿಸ್
ಕಾಂಗ್ರೆಸ್ನ ಹಾಲಿ ಶಾಸಕರಿಗೆ ಬಿಗ್ ಶಾಕ್ ಎದುರಾಗಿದ್ದು, ಅಂಚೆ ಮತ ಮರು ಎಣಿಕೆಯಲ್ಲಿ ಮತ್ತಷ್ಟು ಅಂತರ ಹೆಚ್ಚಿಸಿಕೊಳ್ಳುವ ನೀರಿಕ್ಷೆಯಲ್ಲಿದ್ದ ಶೃಂಗೇರಿ MLA ಟಿ.ಡಿ ರಾಜೇಗೌಡ ನಿರೀಕ್ಷೆ ಸಂಪೂರ್ಣ ತಲೆ ಕೆಳಗಾಗಿದೆ. ಕಾನೂನು ಹೋರಾಟದಲ್ಲಿ ಬಿಜೆಪಿಯ ಡಿಎನ್ ಜೀವರಾಜ್ ಜಯದ ಹೊಸ್ತಿಲಲ್ಲಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ, ರಾಜೇಗೌಡರು ಪಡೆದಿದ್ದ 569 ಅಂಚೆಮತಗಳ ಪೈಕಿ 255 ಅಸಿಂಧು ಆಗಿದ್ದು, ಅವರ ಮತ 314ಕ್ಕೆ ಕುಸಿದಿದೆ. ಹೀಗಾಗಿ 201 ಮತಗಳ ಅಂತರದಲ್ಲಿ ಸೋತಿದ್ದ ಜೀವರಾಜ್ಗೆ 52 ಮುನ್ನಡೆ ಸಿಕ್ಕಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ.
ಇನ್ನು ಅಂಚೆ ಮತಪತ್ರಗಳ ಮರುಎಣಿಕೆ ನಂತರ ಫಲಿತಾಂಶ ವಿಳಂಬ ಆಗ್ತಿದೆ. ಹೀಗಾಗಿ ತಕ್ಷಣ ಫಲಿತಾಂಶ ಘೋಷಣೆ ಕೋರಿ ಚುನಾವಣಾಧಿಕಾರಿಗೆ ಲೀಗಲ್ ನೋಟಿಸ್ ನೀಡಲಾಗಿದೆ. ಡಿ.ಎನ್.ಜೀವರಾಜ್ ಪರ ವಕೀಲೆ ಡಾ.ವಂದನಾ ಪಿ.ಎಲ್.ರಿಂದ ನೋಟಿಸ್ ಕೊಟ್ಟಿದ್ದಾರೆ.