Headlines

ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್: ಹೆಚ್ಚುವರಿ ಅಬಕಾರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ದಾಳಿ – Kannada News | Belagavi ED Raid: Money Laundering and Benami Assets Allegations on Y. Manjunath

ವೈ. ಮಂಜುನಾಥ್, ಸತೀಶ್ ಜಾರಕಿಹೊಳಿ

ಬೆಳಗಾವಿ, ಜೂ.24: ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಲೋಕಾಯುಕ್ತ ಹಾಗೂ ಇಡಿ ದಾಳಿಗಳು ನಡೆಯುತ್ತಿದ್ದು, ಭ್ರಷ್ಟ ಅಧಿಕಾರಿಗಳಿಗೆ ಶಾಕ್​​ ಮೇಲೆ ಶಾಕ್​​ ನೀಡಲಾಗುತ್ತಿದೆ. ಇದೀಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಸಹೋದರಿಯ ಪತಿ (ಭಾವ) ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ವೈ. ಮಂಜುನಾಥ್ (Y. Manjunath) ಅವರಿಗೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಮುಂಜಾನೆ ಭರ್ಜರಿ ಶಾಕ್ ನೀಡಿದ್ದಾರೆ. ಬೇನಾಮಿ ಆಸ್ತಿ ಹಾಗೂ ಅಕ್ರಮ ಹಣ ವರ್ಗಾವಣೆ (Money Laundering) ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಬುಧವಾರ ಮುಂಜಾನೆ 5:30 ಕ್ಕೆ ಏಕಕಾಲದಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ರಾಜ್ಯದ ಒಟ್ಟು 6 ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ವೈ. ದೇವೇಂದ್ರಪ್ಪ ಅವರ ಪುತ್ರ ಆಗಿರುವ ವೈ. ಮಂಜುನಾಥ್ ವಿರುದ್ಧ ಲಂಚದ ಹಣದ ಅಕ್ರಮ ಹೂಡಿಕೆ ಹಾಗೂ ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿರುವ ಗಂಭೀರ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡಗಳು ಎರಡು ಅಧಿಕೃತ ಕಾರುಗಳಲ್ಲಿ ಮುಂಜಾನೆಯೇ ದಾಳಿ ನಡೆಸಿ, ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:


ಮುಖ್ಯಾಂಶಗಳು:

  • ಸಚಿವ ಸತೀಶ್ ಜಾರಕಿಹೊಳಿ ಭಾವಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ವೈ. ಮಂಜುನಾಥ್ ಮೇಲೆ ಇಡಿ ದಾಳಿ
  • ಬೆಂಗಳೂರು, ಬೆಳಗಾವಿ, ಮೈಸೂರು ಸೇರಿದಂತೆ ರಾಜ್ಯದ ಒಟ್ಟು 6 ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ
  • ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿರುವ ಗಂಭೀರ ಆರೋಪ

ಇಡಿ ಅಧಿಕಾರಿಗಳ ಬೇಟೆ ಕೇವಲ ಒಬ್ಬರ ಮನೆಗೆ ಸೀಮಿತವಾಗಿರದೆ, ಮಂಜುನಾಥ್ ಅವರ ಆಪ್ತ ವಲಯ ಹಾಗೂ ಸ್ನೇಹಿತರ ಮನೆಗಳಿಗೂ ವಿಸ್ತರಿಸಿದೆ. ಮಂಜುನಾಥ್ ಅವರ ಒಡೆತನದ ಹೈಟೆಕ್ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆದಿದ್ದು, ಸದ್ಯ ಮಂಜುನಾಥ್ ಅವರೂ ಸಹ ಅದೇ ಅಪಾರ್ಟ್‌ಮೆಂಟ್‌ನಲ್ಲಿದ್ದಾರೆ ಎನ್ನಲಾಗಿದೆ. ಮಂಜುನಾಥ್ ಅವರ ಸ್ವಗ್ರಾಮವಾದ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದಲ್ಲಿರುವ ಇವರ ಎರಡು ಮನೆಗಳ ಮೇಲೆ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಇನ್ನು ಮಂಜುನಾಥ್ ಅವರ ಆಪ್ತ ಸ್ನೇಹಿತೆಯ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿರುವ ಮಂಜುನಾಥ್ ಅವರ ಆಪ್ತ ಗೆಳೆಯನ ನಿವಾಸದಲ್ಲಿ ಇಡಿ ಗ್ರೂಪ್ ಪರಿಶೀಲನೆ ನಡೆಸುತ್ತಿದೆ. ಇದರೊಂದಿಗೆ ಗೋವಾ ಸೇರಿದಂತೆ ಬೇರೆ ಪ್ರಮುಖ ಸ್ಥಳಗಳಲ್ಲೂ ಜಂಟಿ ಶೋಧ ಮುಂದುವರಿದಿದೆ.

ಇದನ್ನೂ ಓದಿ; ಕ್ರಾಸ್ ವೋಟಿಂಗ್ ಮಾಹಿತಿ ನೀಡಿದ ಬಿಜೆಪಿ ನಾಯಕರಿಗೆ ಹೈಕಮಾಂಡ್​ನಿಂದ ಸಾಲು ಸಾಲು ಪ್ರಶ್ನೆಗಳು!

ಅಬಕಾರಿ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದುಕೊಂಡು ಮಂಜುನಾಥ್ ಅವರು ಬೇನಾಮಿ ಹೆಸರಿನಲ್ಲಿ ನೂರಾರು ಎಕರೆ ಜಮೀನು, ಕೋಟ್ಯಂತರ ಮೌಲ್ಯದ ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಖರೀದಿಸಿದ್ದಾರೆ ಎಂಬ ಆಪಾದನೆಗಳಿವೆ. ಗೋವಾ ಮತ್ತು ಮಹಾರಾಷ್ಟ್ರದ ಗಡಿ ಭಾಗದಲ್ಲಿ ನಡೆದಿದೆ ಎನ್ನಲಾದ ಕೆಲವು ಅಕ್ರಮ ವ್ಯವಹಾರಗಳ ಲಿಂಕ್ ಇಟ್ಟುಕೊಂಡು ಇಡಿ ಈಗ ತನಿಖೆ ಚುರುಕುಗೊಳಿಸಿದೆ. ಸಚಿವರ ನಿಕಟ ಸಂಬಂಧಿಯ ಮೇಲೆಯೇ ಇಡಿ ದಾಳಿ ನಡೆಸಿರುವುದರಿಂದ ಆಡಳಿತ ರೂಢ ಕಾಂಗ್ರೆಸ್ ಪಾಳಯದಲ್ಲಿ  ಭಾರೀ ಚರ್ಚೆಗೆ ಕಾರಣವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *