ಸಭಾಪತಿ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಸಿದ್ಧತೆImage Credit source: IamMGoudar X Account
ಬೆಂಗಳೂರು, ಆಗಸ್ಟ್ 07: ಕರ್ನಾಟಕ ವಿಧಾನ ಪರಿಷತ್ ಸಭಾಪತಿ ವಿಚಾರದಲ್ಲಿ ರಾಜಕೀಯ ಹೈಡ್ರಾಮಾಗಳು ಮುಂದುವರಿದಿವೆ. ಇಂದು ಕಾಂಗ್ರೆಸ್ ಅವಿಶ್ವಾಸ ನಿರ್ಣಯ ನಿಲುವಳಿ ನೋಟಿಸ್ ನೀಡುವ ಸಾಧ್ಯತೆ ಹಿನ್ನೆಲೆ ಸಿಎಂ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿದ್ದಾರೆ. ತಮ್ಮ ಸ್ಥಾನಕ್ಕೆ ಆಗಸ್ಟ್ 14ರಂದು ರಾಜೀನಾಮೆ ನೀಡೋದಾಗಿ ಹೇಳಿದ್ದ ಹೊರಟ್ಟಿ, ಇದೀಗ ರಾಜೀನಾಮೆಗೆ ಸಮಯಾವಕಾಶ ಬೇಕು ಎಂದಿದ್ದಾರೆ ಎನ್ನಲಾಗಿದೆ. ಇನ್ನು ಡಿಕೆಶಿ ಭೇಟಿ ಬಳಿಕ ಅಸಮಾಧಾನದಿಂದಲೇ ಸಿಎಂ ನಿವಾಸದಿಂದ ಹೊರಟ್ಟಿ ಹೊರ ಬಂದ ದೃಶ್ಯಗಳು ಕೂಡ ಕಂಡುಬಂದಿವೆ.
‘ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ’
ಇನ್ನು ಸಿಎಂ ಡಿಕೆಶಿ ಭೇಟಿ ವಿಚಾರ ಸಂಬಂಧ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಮೊನ್ನೆ ನಾನು ಏನು ಹೇಳಿದ್ದೇನೋ ಅದಕ್ಕೆ ಬದ್ಧನಿದ್ದೇನೆ. ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ರೆ ಮಂಡಿಸಲಿ. ಕಾನೂನು ಪ್ರಕಾರ ಏನು ಬೇಕಾದರೂ ಮಾಡಲಿ ಎಂದು ಬೆಂಗಳೂರಿನ ಸದಾಶಿವನಗರದ ಸಿಎಂ ಡಿಕೆಶಿ ನಿವಾಸದ ಬಳಿ ಹೇಳಿದ್ದಾರೆ.
ಇದನ್ನೂ ಓದಿ: ಸಭಾಪತಿ ಹುದ್ದೆ ತೊರೆಯಲು ಮುಂದಾದ ಬಸವರಾಜ ಹೊರಟ್ಟಿ: ಆಗಸ್ಟ್ 14ರಂದು ರಾಜೀನಾಮೆಗೆ ನಿರ್ಧಾರ
ಕಾಂಗ್ರೆಸ್ ಮುಂದಿನ ನಡೆ ಏನು?
ರಾಜೀನಾಮೆ ಬಗ್ಗೆ ಹೊರಟ್ಟಿ ಅಡ್ಡಗೋಡೆ ಮೇಲೆ ದೀಪವಿಟ್ಟಿರುವ ಕಾರಣ, ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಬಸವರಾಜ ಹೊರಟ್ಟಿ ಪಕ್ಷಪಾತಿ ಧೋರಣೆ ಅನುಸರಿಸುತ್ತಿದ್ದು, ಬಿಜೆಪಿ ನಾಯಕರ ಜೊತೆಗೆ ಚರ್ಚಿಸಿ ಎಲ್ಲವನ್ನೂ ನಿರ್ಣಯಿಸುತ್ತಿದ್ದಾರೆ. ಅಲ್ಲದೆ ಸಭಾಪತಿ ಹೊರಟ್ಟಿ ಅವಧಿಯಲ್ಲಿ ಅಕ್ರಮ ನೇಮಕಾತಿ ಆಗಿದ್ದು, ಪರಿಷತ್ನ 8 ಸಿಬ್ಬಂದಿ ನೇಮಕದ ಅಕ್ರಮದಲ್ಲಿ ಹೊರಟ್ಟಿ ಪಾತ್ರವಿದೆ ಎಂಬ 2 ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಅವಿಶ್ವಾಸ ನಿರ್ಣಯ ಮಂಡನೆಗೆ ಆಡಳಿತ ಪಕ್ಷ ಸಿದ್ಧತೆ ನಡೆಸಿದೆ. ಅವಿಶ್ವಾಸ ನಿರ್ಣಯ ನಿಲುವಳಿ ನೋಟಿಸ್ಗೆ ಅದಾಯಲೇ ಐವನ್ ಡಿಸೋಜಾ ತಯಾರಿ ಕೂಡ ನಡೆಸಿದ್ದಾರೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.