Headlines

ಸರ್ಕಾರಿ ಶಾಲೆಯಲ್ಲಿ ಓದಿದ 30 ಸಾವಿರ ಮಕ್ಕಳು ಅತಂತ್ರ! ಸರ್ಕಾರದ ಎಡವಟ್ಟಿಗೆ ವಿದ್ಯಾರ್ಥಿಗಳ ಭವಿಷ್ಯದ ಕಥೆ ಏನು? – Kannada News | Karnataka English Medium School: 30,000 Students Struggle for Class 8 Admissions

ಪ್ರಾತಿನಿಧಿಕ ಚಿತ್ರImage Credit source: deccanherald

ಬೆಂಗಳೂರು, ಜೂನ್​​ 15: ಸರ್ಕಾರಿ ಶಾಲೆಯ (government school) ಮಕ್ಕಳಿಗೂ ಇಂಗ್ಲಿಷ್ ಮೀಡಿಯಂ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಆರಂಭವಾದ ಯೋಜನೆಯೊಂದು, ಈಗ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡಿದೆ. ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ (English Medium) ಓದಿದ ರಾಜ್ಯದ ಸುಮಾರು 30 ಸಾವಿರ ವಿದ್ಯಾರ್ಥಿಗಳು ಈಗ ಮುಂದೇನು ಮಾಡಬೇಕು ತೋಚದೆ ಅತಂತ್ರರಾಗಿದ್ದಾರೆ. ಜೂನ್ ತಿಂಗಳು ಅರ್ಧ ಕಳೆದರೂ ಶಿಕ್ಷಣ ಇಲಾಖೆ ಮಾತ್ರ ಈ ಗೊಂದಲಕ್ಕೆ ಇನ್ನೂ ಮುಕ್ತಿ ನೀಡಿಲ್ಲ.

ಮುಖ್ಯಾಂಶಗಳು

  • ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳ ಮಕ್ಕಳ ಸ್ಥಿತಿ ಅತಂತ್ರ
  • ಇದುವರೆಗೂ 8ನೇ ತರಗತಿ ಇಂಗ್ಲಿಷ್​ ‌ಮೀಡಿಯಂ ಪ್ರಾರಂಭಿಸದ ಸರ್ಕಾರ
  • ವಿದ್ಯಾರ್ಥಿಗಳ ಪೋಷಕರು ಅಸಮಾಧಾನ

30 ಸಾವಿರ ವಿದ್ಯಾರ್ಥಿಗಳ ಸ್ಥಿತಿ ಅತಂತ್ರ

ಕಳೆದ 2018-19ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರವು ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಹಿತದೃಷ್ಟಿಯಿಂದ ರಾಜ್ಯಾದ್ಯಂತ ಆಯ್ದ 1001 ಸರ್ಕಾರಿ ಶಾಲೆಗಳಲ್ಲಿ 1ರಿಂದ 7ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಿತ್ತು. ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಹೆತ್ತವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದರು. ಅದರಂತೆ ಈ 1001 ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂನಲ್ಲಿ ಓದಿದ ಸುಮಾರು 30 ಸಾವಿರ ವಿದ್ಯಾರ್ಥಿಗಳು ಈಗ ಯಶಸ್ವಿಯಾಗಿ 7ನೇ ತರಗತಿ ಪಾಸಾಗಿದ್ದಾರೆ. ಆದರೆ, ಅಸಲಿ ಸಮಸ್ಯೆ ಇಲ್ಲಿಂದ ಆರಂಭವಾಗಿದೆ.

ಇದನ್ನೂ ಓದಿ: ಶಾಲಾ ಮಕ್ಕಳಿಗಿನ್ನು ಚಪ್ಪಲಿ ಭಾಗ್ಯ!: ಮಕ್ಕಳ ಆರೋಗ್ಯ ಗಮನದಲ್ಲಿರಿಸಿ ಶಿಕ್ಷಣ ಇಲಾಖೆಯಿಂದ ಹೊಸ ಚಿಂತನೆ

7ನೇ ತರಗತಿ ಮುಗಿಸಿದ ಈ ಮಕ್ಕಳಿಗೆ ಮುಂದಿನ 8ನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಮುಂದುವರಿಸಲು ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಣಾಮ, 1001 ಶಾಲೆಗಳ 30 ಸಾವಿರ ವಿದ್ಯಾರ್ಥಿಗಳು ಈಗ 8ನೇ ತರಗತಿಗೆ ಎಲ್ಲಿ ಸೇರಬೇಕು ಎಂಬ ಗೊಂದಲದಲ್ಲಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲೇ ಓದು ಮುಂದುವರಿಸಬೇಕೆಂದರೆ ಪೋಷಕರು ಲಕ್ಷ ಲಕ್ಷ ಹಣ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದರೆ, ಇಷ್ಟು ವರ್ಷ ಇಂಗ್ಲಿಷ್‌ನಲ್ಲಿ ಓದಿದ ಮಕ್ಕಳು ಮತ್ತೆ ಪುನಃ ಕನ್ನಡ ಮಾಧ್ಯಮಕ್ಕೆ ಹಿಂತಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಶೈಕ್ಷಣಿಕ ವರ್ಷ ಆರಂಭವಾಗಿ ಜೂನ್ ಅರ್ಧ ತಿಂಗಳು ಕಳೆದಿದ್ದರೂ ಶಿಕ್ಷಣ ಇಲಾಖೆ ಮಾತ್ರ ಈ ಗಂಭೀರ ಸಮಸ್ಯೆಗೆ ಯಾವುದೇ ಪರಿಹಾರ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ: ನಿಮಗೆ ಪುಣ್ಯ ಬರುತ್ತದೆ ಎಂದ ಪೋಷಕರು 

ಇನ್ನು ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ಪೋಷಕರೊಬ್ಬರು ಈ ಬಗ್ಗೆ ಮಾತನಾಡಿದ್ದು, 7ನೇ ತರಗತಿವರೆಗೂ ಮಕ್ಕಳು ಇಂಗ್ಲಿಷ್​​ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 8ನೇ ತರಗತಿ ಆರಂಭ ಮಾಡದಿದ್ದರೆ ವಿದ್ಯಾರ್ಥಿಗಳು ಎಲ್ಲಿ ಓದಬೇಕು, ಎಲ್ಲಿಗೆ ಹೋಗಬೇಕು. ಯಾವುದೇ ಕಾರಣಕ್ಕೂ ಇದನ್ನು ಬಂದ್ ಮಾಡಬಾರದು. ಸರ್ಕಾರಿ ಶಾಲೆಗಳು, ಆಸ್ಪತ್ರೆಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಸುಮಾರು 30 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು 7ನೇ ತರಗತಿ ಪಾಸ್ ಆಗಿ 8ನೇ ತರಗತಿಗೆ ಬಂದಿದ್ದಾರೆ. ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ನಿಮಗೆ ಪುಣ್ಯ ಬರುತ್ತದೆ. ದಯವಿಟ್ಟು ಇಂಗ್ಲಿಷ್ ‌ಮಾಧ್ಯಮವನ್ನು ಬಂದ್‌ ಮಾಡಬಾರದು ಎಂದು‌ ಪೋಷಕರು ಮನವಿ ಮಾಡಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಶಾಲೆಗಳಿಗೆ ಸಮಸ್ಯೆ ಏದುರಾಗಿದೆ?

  • ಬಾಗಲಕೋಟೆ-28
  • ಬಳ್ಳಾರಿ-43
  • ಬೆಳಗಾವಿ-74
  • ಬೆಂಗಳೂರು -144
  • ಬೀದರ್ -26
  • ಚಾಮರಾಜನಗರ-17
  • ಚಿಕ್ಕಬಳ್ಳಾಪುರ-20
  • ಚಿಕ್ಕಮಗಳೂರು-21
  • ಚಿತ್ರದುರ್ಗ- 24
  • ದಕ್ಷಿಣ ಕನ್ನಡ-48
  • ದಾವಣಗೆರೆ -31
  • ಧಾರವಾಡ- 28
  • ಗದಗ-17
  • ಹಾಸನ- 38
  • ಹಾವೇರಿ-25
  • ಕಲಬುರಗಿ-39
  • ಕೊಡಗು-08
  • ಕೋಲಾರ-24
  • ಕೊಪ್ಪಳ-20
  • ಮಂಡ್ಯ-32
  • ಮೈಸೂರು-4
  • ರಾಯಚೂರು-33
  • ರಾಮನಗರ-24
  • ಶಿವಮೊಗ್ಗ-30
  • ತುಮಕೂರು-49
  • ಉಡುಪಿ-24
  • ಉತ್ತರ ‌ಕನ್ನಡ-27
  • ವಿಜಯಪುರ-38
  • ಯಾದಗಿರಿ-23

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *