‘ಸಿಎಂ ಸ್ಥಾನ ಬಿಟ್ಟು ಹೋಗುವ ಮುನ್ನ ಆ 5,000 ಕೋಟಿ ರೂ. ಎಲ್ಲಿದೆ ಹೇಳಿ!’: ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸುರೇಶ್ ಕುಮಾರ್

ಬೆಂಗಳೂರು, ಮೇ30: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಹೈಡ್ರಾಮಾ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಹೊಸ ನಾಯಕನ ಆಯ್ಕೆಯ ಕಸರತ್ತು ತೀವ್ರಗೊಂಡಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ತಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಡುವ ಮುನ್ನ, ರಾಜ್ಯದ 1.14 ಕೋಟಿ ಮಹಿಳೆಯರಿಗೆ ತಲುಪಬೇಕಾಗಿದ್ದ 5,000 ಕೋಟಿ ರೂ. ಹಣದ ಹಣೆಬರಹದ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಾಯಕ ಸುರೇಶ್​​ ಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ಕಟುವಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

“ಚುನಾವಣೆಯಲ್ಲಿ ಮತ ಗಳಿಸಲು ಸಾಧನವಾಗಿದ್ದ ಗೃಹಲಕ್ಷ್ಮಿ ಯೋಜನೆಯ ಹಣ 1.14 ಕೋಟಿ ಮಹಿಳೆಯರ ಕೈ ಸೇರದಿರುವುದು ಸಣ್ಣ ಪ್ರಮಾದವಲ್ಲ, ಇದು ರಾಜ್ಯದ ತಿಜೋರಿಯನ್ನೇ ಲೂಟಿ ಹೊಡೆದಿರುವ ಸ್ಪಷ್ಟ ಉದಾಹರಣೆ. ಈ ಪ್ರಸ್ತಾವನೆ ನಡೆದು 5 ತಿಂಗಳು ಕಳೆದರೂ ಇಂದಿಗೂ ರಾಜ್ಯದ ಗೃಹಲಕ್ಷ್ಮಿಯರಿಗೆ ಆ ಹಣ ತಲುಪಿಲ್ಲ. ಸಚಿವರು ಹಣ ಪಾವತಿಯಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಹಾಗಾದರೆ ಈ ಭಾರಿ ಮೊತ್ತದ ಹಣ ಎಲ್ಲಿ ಹೋಯಿತು? ಯಾರ ಜೇಬು ಸೇರಿತು?” ಎಂದು ಪತ್ರದಲ್ಲಿ ನೇರವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Karnataka CM News Live: ಕೆಪಿಸಿಸಿ ಅಧ್ಯಕ್ಷ ಗಾದಿಗೆ ಮತ್ತೊರ್ವರ ಹೆಸರು ಸಪ್ರೈಸ್​ ಎಂಟ್ರಿ!

ಇಲ್ಲಿದೆ ನೋಡಿ ಸುರೇಶ್​ ಕುಮಾರ್​​ ಬಹಿರಂಗ ಪತ್ರ:

“ಇಡೀ ದೇಶದಲ್ಲೇ ದಾಖಲೆ ಸಂಖ್ಯೆಯ ಬಜೆಟ್ ಮಂಡಿಸಿರುವ ನೀವು ರಾಜ್ಯದ ಆರ್ಥಿಕ ತಜ್ಞರು ಹಾಗೂ ತಿಜೋರಿಯ ಸಂಪೂರ್ಣ ನಿಯಂತ್ರಣ ಹೊಂದಿದ್ದವರು. ಸಾರ್ವಜನಿಕರ ತೆರಿಗೆ ಹಣದ ಪಾವಿತ್ರ್ಯತೆಯನ್ನು ಕಾಯುವುದು ಹಾಗೂ ಪ್ರತಿಯೊಂದು ಪೈಸೆಗೂ ಉತ್ತರದಾಯಿತ್ವ ವಹಿಸುವುದು ನಿಮ್ಮ ನೈತಿಕ ಜವಾಬ್ದಾರಿಯಾಗಿದೆ. ಆದ್ದರಿಂದ ಸಿಎಂ ಸ್ಥಾನದಿಂದ ನಿರ್ಗಮಿಸುವ ಮುನ್ನ ಈ 5,000 ಕೋಟಿ ರೂ ಹಣದ ಅಸಲಿ ಸತ್ಯ ಮತ್ತು ಸ್ಥಿತಿಗತಿಯನ್ನು ರಾಜ್ಯದ ನಾಗರಿಕರಿಗೆ ಸ್ಪಷ್ಟಪಡಿಸಬೇಕು” ಎಂದು ಬಹಿರಂಗ ಪತ್ರದ ಮೂಲಕ ಕಟುವಾಗಿ ಆಗ್ರಹಿಸಲಾಗಿದೆ. ಈ ಪತ್ರವು ಸದ್ಯ ಕರ್ನಾಟಕ ರಾಜಕೀಯ ವಲಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *