ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಯಾಗುವುದು ಖಚಿತವಾಗಿದೆ. ಅದು ಕೂಡ ಪ್ರಸ್ತುತ ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ತಲೆದಂಡದೊಂದಿಗೆ. ಅಂದರೆ ಟೀಮ್ ಇಂಡಿಯಾದ ನಾಯಕನ ಸ್ಥಾನದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೆಳಗಿಳಿಸುವುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ಮಾಹಿತಿ ಪ್ರಕಾರ, ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಯಾದವ್ ಅವರನ್ನು ಕೈ ಬಿಡಲಿದ್ದಾರೆ. ಅವರ ಬದಲಿಗೆ ಮಧ್ಯಮ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ಚಿಂತಿಸಿದೆ. ಅಲ್ಲದೆ ಅಯ್ಯರ್ ಅವರಿಗೆನೇ ನಾಯಕತ್ವವನ್ನೂ ನೀಡುವ ಬಗ್ಗೆ ಕೂಡ ಚರ್ಚಿಸಲಾಗಿದೆ.
ಅಂದರೆ ಭಾರತ ಟಿ20 ತಂಡದ ಮುಂದಿನ ನಾಯಕನ ರೇಸ್ನಲ್ಲಿ ಶ್ರೇಯಸ್ ಅಯ್ಯರ್ ಮುಂಚೂಣಿಯಲ್ಲಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಹೀಗಾಗಿ ಟಿ20 ತಂಡಕ್ಕೆ ಕಂಬ್ಯಾಕ್ನೊಂದಿಗೆ ಅಯ್ಯರ್ಗೆ ನಾಯಕತ್ವ ಕೂಡ ಒಲಿಯುವ ಸಾಧ್ಯತೆ ಹೆಚ್ಚಿದೆ.
ನಾಲ್ಕನೇ ಕ್ರಮಾಂಕಕ್ಕೆ ಅಯ್ಯರ್ ಫಿಕ್ಸ್?
ವಿರಾಟ್ ಕೊಹ್ಲಿ ಅವರ ನಿವೃತ್ತಿಯ ಆಯ್ಕೆ ಸಮಿತಿಯು ಸ್ಥಿರ ಪ್ರದರ್ಶನ ನೀಡಬಲ್ಲ ಮಧ್ಯಮ ಕ್ರಮಾಂಕದ ಬ್ಯಾಟರ್ನ ಹುಡುಕಾಟದಲ್ಲಿದೆ. ಇದೀಗ ಈ ಸ್ಥಾನಕ್ಕಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಲು ಉತ್ಸುಕರಾಗಿದ್ದಾರೆ.
ಏಕೆಂದರೆ ಐಪಿಎಲ್ 2025 ರಲ್ಲಿ ಪಂಜಾಬ್ ಕಿಂಗ್ಸ್ ಪರ ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ಈ ಬಾರಿ ಟೂರ್ನಿಯಲ್ಲಿ 5 ಪಂದ್ಯಗಳನ್ನಾಡಿರುವ ಅಯ್ಯರ್ 200 ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಹೀಗಾಗಿ ಅಯ್ಯರ್ ಭಾರತದ ಟಿ20 ತಂಡದ ನಂ. 4 ಸ್ಥಾನಕ್ಕೆ ಅತ್ಯಂತ ಸಮರ್ಥ ಆಟಗಾರ ಎಂದು ಆಯ್ಕೆದಾರರು ಭಾವಿಸಿದ್ದಾರೆ.
ನಾಯಕತ್ವದ ರೇಸ್ನಲ್ಲೂ ಮುಂಚೂಣಿ
ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕಳೆದ ಟಿ20 ವಿಶ್ವಕಪ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದರು. ಇದಾಗ್ಯೂ ನಾಯಕನಾಗಿದ್ದ ಕಾರಣ ಅವರನ್ನು ತಂಡದಲ್ಲಿ ಉಳಿಸಕೊಳ್ಳಲಾಗಿತ್ತು.
ಇದೀಗ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ಸೂರ್ಯಕುಮಾರ್ ಯಾದವ್ಗೆ ಗೇಟ್ ಪಾಸ್ ನೀಡಲು ಬಿಸಿಸಿಐ ನಿರ್ಧರಿಸಿದೆ. ಅಲ್ಲದೆ ಭವಿಷ್ಯದ ದೃಷ್ಟಿಯಿಂದ ಬಿಸಿಸಿಐ (BCCI) ಹೊಸ ನಾಯಕನ ಹುಡುಕಾಟದಲ್ಲಿದೆ. ಈ ಹುಡಕಾಟದ ನಡುವೆ ಶ್ರೇಯಸ್ ಅಯ್ಯರ್ ಹೆಸರು ಕೇಳಿ ಬಂದಿರುವುದು ವಿಶೇಷ.
- ಐಪಿಎಲ್ ಯಶಸ್ಸು: ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 2024ರಲ್ಲಿ ಟ್ರೋಫಿ ಗೆದ್ದುಕೊಟ್ಟಿದ್ದು ಮತ್ತು 2025ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್ಗೆ ತಲುಪಿಸಿದ್ದು ಅಯ್ಯರ್ ಅವರ ನಾಯಕತ್ವದ ಗುಣಕ್ಕೆ ಸಾಕ್ಷಿಯಾಗಿದೆ.
- ಸ್ಥಿರತೆ: ಅಯ್ಯರ್ ಕೇವಲ ಆಟಗಾರನಾಗಿ ಮಾತ್ರವಲ್ಲದೆ, ಮೈದಾನದಲ್ಲಿ ತಂಡವನ್ನು ಸಂಘಟಿಸುವಲ್ಲಿ ತೋರುತ್ತಿರುವ ಪ್ರಬುದ್ಧತೆ ಆಯ್ಕೆದಾರರ ಗಮನ ಸೆಳೆದಿದೆ.
ಕಂಬ್ಯಾಕ್ಗೆ ಸಜ್ಜು:
ಕಳೆದ ಕೆಲವು ಸಮಯದಿಂದ ಸೆಂಟ್ರಲ್ ಕಾಂಟ್ರಾಕ್ಟ್ ಮತ್ತು ಫಿಟ್ನೆಸ್ ಕಾರಣದಿಂದ ತಂಡದಿಂದ ಹೊರಗುಳಿದಿದ್ದ ಅಯ್ಯರ್, ಈಗ ಭರ್ಜರಿಯಾಗಿ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಮುಂದಿನ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಯ್ಯರ್ ಅವರಿಗೆ ತಂಡದ ಜವಾಬ್ದಾರಿ ನೀಡುವ ಸಾಧ್ಯತೆ ದಟ್ಟವಾಗಿದೆ.
ಆಯ್ಕೆದಾರರ ಮುಂದಿರುವ ಸವಾಲುಗಳು:
ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಭಾರತ 2026ರ ಟಿ20 ವಿಶ್ವಕಪ್ ಗೆದ್ದಿರುವುದು ಅವರ ಪರವಾಗಿರುವ ದೊಡ್ಡ ಪ್ಲಸ್ ಪಾಯಿಂಟ್. ಹೀಗಾಗಿ, ಸೂರ್ಯಕುಮಾರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವುದು ಆಯ್ಕೆದಾರರಿಗೆ ಅಷ್ಟು ಸುಲಭದ ನಿರ್ಧಾರವಲ್ಲ. ಆದರೂ, 2028ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಅಯ್ಯರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲು ಬಿಸಿಸಿಐ ಯೋಚಿಸುತ್ತಿದೆ.
ಇದನ್ನೂ ಓದಿ: CSK ಫ್ಯಾನ್ಸ್ನ ಸೈಲೆಂಟ್ ಮಾಡಿದ್ದೇವೆ… ಕಾವ್ಯ ಮಾರನ್ ವಿಡಿಯೋ ವೈರಲ್
ಒಟ್ಟಾರೆಯಾಗಿ, ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಫಾರ್ಮ್ ಮತ್ತು ನಾಯಕತ್ವದ ಅನುಭವ ಅವರನ್ನು ಭಾರತ ಟಿ20 ತಂಡದ ಪ್ರಬಲ ದಾವೇದಾರನನ್ನಾಗಿ ಮಾಡಿದೆ. ಶೀಘ್ರದಲ್ಲೇ ಅಯ್ಯರ್ ಭಾರತ ಟಿ20 ತಂಡದ ನಾಯಕನ ಪಟ್ಟಕ್ಕೇರಿದರೂ ಆಶ್ಚರ್ಯವಿಲ್ಲ.