ಮೇಘಾಲಯ, ಏಪ್ರಿಲ್ 28: ಶಿಲ್ಲಾಂಗ್ನ ನ್ಯಾಯಾಲಯವು ಇಂದು ರಾಜ ರಘುವಂಶಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ (Sonam Raghuvanshi) ಜಾಮೀನು ನೀಡಿದೆ. ಇಂದೋರ್ ಮೂಲದ ಉದ್ಯಮಿ ರಾಜ ರಘುವಂಶಿ ಅವರನ್ನು ಮೇ 2025ರಲ್ಲಿ ಅವರ ಪತ್ನಿ ಸೋನಮ್ ಹಾಗೂ ಇತರೆ ಮೂವರು ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಜಾಮೀನು ನೀಡುವಾಗ ಸೋನಮ್ ರಘುವಂಶಿ ಶಿಲ್ಲಾಂಗ್ನಿಂದ ಹೊರಹೋಗಬಾರದು. ಅವರ ಹಾಜರಾತಿಯನ್ನು ಗುರುತಿಸಲು ಪ್ರತಿದಿನ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಇಂದೋರ್ ಉದ್ಯಮಿ ರಾಜ ರಘುವಂಶಿ ಅವರ ಕೊಲೆಯನ್ನು ಪ್ಲಾನ್ ಮಾಡಿ, ಆತನನ್ನು ಕೊಂದಿದ್ದಕ್ಕಾಗಿ ಸೋನಮ್ ಹಾಗೂ ಆಕೆಯ ಪ್ರೇಮಿ ರಾಜ್ ಕುಶ್ವಾಹ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಮೇ 20ರಂದು ದಂಪತಿ ತಮ್ಮ ಹನಿಮೂನ್ಗಾಗಿ ಗುವಾಹಟಿ ಮತ್ತು ಶಿಲ್ಲಾಂಗ್ಗೆ ಹೋಗಿದ್ದರು. ಆದರೆ ಮೇ 23ರಂದು ಅವರಿಬ್ಬರೂ ಕಾಣೆಯಾಗಿದ್ದರು. ಸುಮಾರು 10 ದಿನಗಳ ಹುಡುಕಾಟದ ನಂತರ, ಜೂನ್ 2ರಂದು ಮೇಘಾಲಯದ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾದಲ್ಲಿನ ಆಳವಾದ ಕಂದಕದಲ್ಲಿ ರಾಜ ರಘುವಂಶಿಯ ಶವ ಪತ್ತೆಯಾಗಿತ್ತು. ನಂತರ ಸೋನಮ್ ಘಾಜಿಪುರದಲ್ಲಿ ಪತ್ತೆಯಾಗಿದ್ದರು. ಇದು ದರೋಡೆಕೋರರ ಕೆಲಸ ಎಂದು ಆಕೆ ಪೊಲೀಸರನ್ನು ನಂಬಿಸಲು ಪ್ರಯತ್ನ ಮಾಡಿದ್ದರು. ಅದಕ್ಕೆ ತಕ್ಕಂತೆ ಪ್ಲಾನ್ ಮಾಡಲಾಗಿತ್ತು. ಆದರೆ, ಪೊಲೀಸರ ತನಿಖೆ ವೇಳೆ ಸೋನಮ್ಳ ಸಂಚು ಬಯಲಾಗಿತ್ತು.
ಇದನ್ನೂ ಓದಿ: 10 ವರ್ಷಗಳ ಪ್ರೀತಿ, ಹತ್ತಾರು ಬಾರಿ ದೈಹಿಕ ಸಂಬಂಧ: ಈಗ ಮದುವೆ ಮಾತು ಬಂದಾಗ ಯುವಕನಿಂದ ಕೊಲೆ ಬೆದರಿಕೆ
ಸೋನಮ್ ಮತ್ತು ಇತರ ನಾಲ್ವರು ಆರೋಪಿಗಳಾದ ಸೋನಮ್ಳ ಪ್ರೇಮಿ ರಾಜ್ ಕುಶ್ವಾಹ ಮತ್ತು ಸಹಚರರಾದ ಆಕಾಶ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್ ಮತ್ತು ಆನಂದ್ ಕುರ್ಮಿ ಅವರನ್ನು ಬಂಧಿಸಲಾಗಿದ್ದು, ಈಗ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ರಾಜ್ ಕುಶ್ವಾಹ ಜೊತೆಗಿನ ಪ್ರೇಮ ಸಂಬಂಧ ಇಷ್ಟವಿಲ್ಲದ ಸೋನಮ್ಳ ಕುಟುಂಬಸ್ಥರು ಆಕೆಯನ್ನು ರಾಜ ರಘುವಂಶಿಯೊಂದಿಗೆ ಮದುವೆ ಮಾಡಿದ್ದರು. ಹೀಗಾಗಿ, ಸೋನಮ್ ತನ್ನ ಗಂಡನನ್ನು ಕೊಲೆ ಮಾಡಲು ಪ್ರೇಮಿಯೊಂದಿಗೆ ಸಂಚು ಮಾಡಿದ್ದರು.
ಇದನ್ನೂ ಓದಿ: ಹೆಂಡತಿಯನ್ನು ಕೊಚ್ಚಿ ಕೊಲೆಗೈದು ಮಗುವಿನೊಂದಿಗೆ ಬಾವಿಗೆ ಹಾರಿದ ಗಂಡ; ಸ್ಥಳೀಯರಿಂದ ಮಗುವಿನ ರಕ್ಷಣೆ, ಲಕ್ಷ್ಮೀಪುತ್ರ ಸಾವು!
2025ರ ಈ ಪ್ರಕರಣದ ಟೈಮ್ಲೈನ್:
ಮೇ 11: ರಾಜ ರಘುವಂಶಿ ಇಂದೋರ್ನಲ್ಲಿ ಸೋನಮ್ ಅವರನ್ನು ವಿವಾಹವಾದರು.
ಮೇ 20: ದಂಪತಿ ತಮ್ಮ ಹನಿಮೂನ್ಗಾಗಿ ಶಿಲ್ಲಾಂಗ್ ತಲುಪಿದರು ಮತ್ತು ನಂತರ ಸೊಹ್ರಾಗೆ ತೆರಳಿದರು.
ಮೇ 23: ದಂಪತಿ ನೊಂಗ್ರಿಯಾಟ್ ಹೋಮ್ ಸ್ಟೇಯಿಂದ ಹೊರಬಂದರು. ಅಲ್ಲೇ ರಾಜ ಸಿಸಿಟಿವಿಯಲ್ಲಿ ಕೊನೆಯದಾಗಿ ಜೀವಂತವಾಗಿ ಕಾಣಿಸಿಕೊಂಡಿದ್ದು. ವೀ ಸಾವ್ಡಾಂಗ್ ಜಲಪಾತದ ಬಳಿ ಕೊಲೆ ಅವರನ್ನು ಕೊಲೆ ಮಾಡಲಾಗಿತ್ತು.
ಮೇ 26: ದಂಪತಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಅವರಿಗಾಗಿ ಶೋಧ ಕಾರ್ಯಾಚರಣೆ ಪ್ರಾರಂಭವಾಯಿತು.
ಮೇ 31: ಗೋಲ್ಡನ್ ಪೈನ್ಸ್ ಧಾಬಾ ಬಳಿ ಅವರು ತೆಗೆದುಕೊಂಡ ಹೋಗಿದ್ದ ಸ್ಕೂಟರ್ ಪತ್ತೆಯಾಗಿತ್ತು.
ಜೂನ್ 2: ಅರ್ಲಿಯಾಂಗ್ ರಿಯಾತ್ ಕುನೊಂಗ್ರಿಮ್ನಲ್ಲಿರುವ ಕಣಿವೆಯಲ್ಲಿ ರಾಜ ಅವರ ಛಿದ್ರಗೊಂಡ ಮೃತದೇಹ ಪತ್ತೆಯಾಗಿತ್ತು.
ಜೂನ್ 8-11: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸೋನಮ್, ರಾಜ್ ಕುಶ್ವಾಹ ಮತ್ತು ಮೂವರು ಹಲ್ಲೆಕೋರರನ್ನು ಎಸ್ಐಟಿ ಬಂಧಿಸಿತು.
ಜೂನ್ 22-25: ಸಾಕ್ಷ್ಯ ನಾಶಕ್ಕಾಗಿ ಮಧ್ಯಪ್ರದೇಶದಲ್ಲಿ ಜೇಮ್ಸ್, ತೋಮರ್ ಮತ್ತು ಅಹಿರ್ವಾರ್ ಅವರನ್ನು ಬಂಧಿಸಲಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ