ಬಾಗಲಕೋಟೆ, ಏ.18: ಭಕ್ತಿ ಮತ್ತು ಸಂಕಲ್ಪ ಸೇರಿದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಬಾಗಲಕೋಟೆಯ 19 ವರ್ಷದ ಯುವಕನೊಬ್ಬ ಸಾಬೀತುಪಡಿಸಿದ್ದಾನೆ. ಗ್ರಾಮದ ಒಳಿತಿಗಾಗಿ ತನಗಿಂತ ಎರಡೂವರೆ ಪಟ್ಟು ಹೆಚ್ಚು ತೂಕದ ಜೋಳದ ಚೀಲವನ್ನು ಬೆನ್ನ ಮೇಲೆ ಹೊತ್ತು ‘ದೀಡ್ ನಮಸ್ಕಾರ’ ಹಾಕುವ ಮೂಲಕ ಯುವಕ ಅಚ್ಚರಿ ಮೂಡಿಸಿದ್ದಾನೆ. ಇಳಕಲ್ ತಾಲೂಕಿನ ಗೋನಾಳ ಎಸ್ಟಿ ಗ್ರಾಮದ ನಿವಾಸಿ ಬಾಲರಾಜ ಹನಮಂತ ಕುರಿ (19) ಈ ಸಾಹಸಗೈದ ಯುವಕ. ಈ ಯುವಕನ ತೂಕ ಕೇವಲ 47 ಕೆಜಿ. ಆದರೆ ಈತ ಬೆನ್ನ ಮೇಲೆ ಹೊತ್ತುಕೊಂಡಿದ್ದ ಜೋಳದ ಚೀಲದ ತೂಕ ಬರೋಬ್ಬರಿ 105 ಕೆಜಿ! ಗ್ರಾಮದ ಶ್ರೀ ಮಾರುತೇಶ್ವರ ಹಾಗೂ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಈ ಸಾಹಸ ಪ್ರದರ್ಶನ ನಡೆಯಿತು. ಹನುಮಂತನ ಪರಮ ಭಕ್ತನಾಗಿರುವ ಬಾಲರಾಜ, ನಾಡಿನ ಒಳಿತಿಗಾಗಿ ಈ ಕಠಿಣ ಸಂಕಲ್ಪ ಹೊತ್ತಿದ್ದನು. ಬಾಲರಾಜನ ಈ ಅಪ್ರತಿಮ ಭಕ್ತಿ ಮತ್ತು ಶಕ್ತಿಯ ಪ್ರದರ್ಶನ ಕಂಡು ಜಾತ್ರೆಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಸಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ಪ್ರೋತ್ಸಾಹಿಸಿದರು. ಸಾಹಸ ಪೂರ್ಣಗೊಳ್ಳುತ್ತಿದ್ದಂತೆ ಗ್ರಾಮಸ್ಥರು ಆತನಿಗೆ ಆರತಿ ಬೆಳಗಿ, ಹಾರ ಹಾಕಿ ಗೌರವಿಸಿದರು. ಅಷ್ಟೇ ಅಲ್ಲದೆ, ಬಾಲರಾಜನನ್ನು ಹೆಗಲ ಮೇಲೆ ಹೊತ್ತು ಊರ ತುಂಬ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ