ಮುಂಬೈ, ಆಗಸ್ಟ್ 13: ಮಹಾರಾಷ್ಟ್ರದ ನಾಂದೇಡ್ನ ಗುರುದ್ವಾರದಲ್ಲಿ ನಡೆದ ದಾಳಿಯಲ್ಲಿ ಗಾಯಗೊಂಡಿರುವ ಶಿರೋಮಣಿ ಅಕಾಲಿದಳ (SAD) ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರ ಆರೋಗ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಬಾದಲ್ ಅವರ ಪತ್ನಿ ಹಾಗೂ ಅಕಾಲಿದಳದ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಘಟನೆ ನಡೆದ ಸಮಯದಲ್ಲಿ ಸುಖ್ಬೀರ್ ಬಾದಲ್ ಅವರೊಂದಿಗೆ ಅವರ ಪತ್ನಿ ಹರ್ಸಿಮ್ರತ್ ಕೂಡ ಅಲ್ಲೇ ಇದ್ದರು.
ಇಂದು ನಾಂದೇಡ್ನ ಗುರುದ್ವಾರ ಮಾತಾ ಸಾಹಿಬ್ ಕೌರ್ನಲ್ಲಿ ನಿಹಾಂಗ್ ಉಡುಪಿನಲ್ಲಿದ್ದ ವ್ಯಕ್ತಿಯೊಬ್ಬ ತಲ್ವಾರ್ನಿಂದ ಬಾದಲ್ ಅವರ ಮೇಲೆ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಬಾದಲ್ ಅವರ ಕೈಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು. ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಬಾದಲ್ ಅವರು ಪ್ರಸಾದದ ಹಾಲ್ನತ್ತ ತೆರಳುತ್ತಿದ್ದಾಗ ಈ ದಾಳಿ ಸಂಭವಿಸಿದೆ. ಈ ಪವಿತ್ರ ಸ್ಥಳವು ಸಿಖ್ ಧರ್ಮದ ಐದು ಪ್ರಮುಖ ಪೀಠಗಳಲ್ಲಿ (ತಖ್ತ್) ಒಂದಾದ ‘ತಖ್ತ್ ಶ್ರೀ ಹಜೂರ್ ಸಾಹಿಬ್’ನಿಂದ ಸುಮಾರು 15 ಕಿ.ಮೀ ದೂರದಲ್ಲಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಪಂಜಾಬ್ ಮಾಜಿ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ತಲ್ವಾರ್ ದಾಳಿ; ಆಸ್ಪತ್ರೆಗೆ ದಾಖಲು
ಪ್ರಧಾನಿ ನರೇಂದ್ರ ಮೋದಿ ಅವರು ಸುಖ್ಬೀರ್ ಸಿಂಗ್ ಬಾದಲ್ ಅವರ ಪತ್ನಿ ಹರ್ಸಿಮ್ರತ್ ಕೌರ್ ಬಾದಲ್ ಅವರಿಗೆ ಫೋನ್ ಮಾಡಿ ಮಾತನಾಡಿ, ಬಾದಲ್ ಅವರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನು ಸುಖ್ಬೀರ್ ಸಿಂಗ್ ಭೇಟಿಯಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಪಂಜಾಬ್ ವಿಧಾನಸಭೆ ಚುನಾವಣೆಗೆ ಮುನ್ನ ಅಕಾಲಿದಳ ಮತ್ತು ಬಿಜೆಪಿ ನಡುವೆ ಮತ್ತೆ ಮೈತ್ರಿ ಏರ್ಪಡಬಹುದು ಎಂಬ ಊಹಾಪೋಹಗಳ ನಡುವೆ ಇಬ್ಬರೂ ನಾಯಕರುಭೇಟಿಯಾಗಿದ್ದರು. ಆ ಭೇಟಿಯ ಬೆನ್ನಲ್ಲೇ ಈ ದಾಳಿ ನಡೆದಿದೆ.
ದಾಳಿ ಕುರಿತು ತನಿಖೆಗೆ ಸಿಎಂ ಫಡ್ನವೀಸ್ ಆದೇಶ:
ಇದೇ ವೇಳೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಪಂಜಾಬ್ನ ಮಾಜಿ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಮೇಲಿನ ದಾಳಿಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ದೇವೇಂದ್ರ ಫಡ್ನವೀಸ್ ಅವರು ಬಾದಲ್ ಅವರಿಗೆ ಕರೆ ಮಾಡಿ ಅವರ ಕ್ಷೇಮ ವಿಚಾರಿಸಿದ್ದಾರೆ ಎಂದು ಪಿಟಿಐ ತಿಳಿಸಿದೆ.
ಇದನ್ನೂ ಓದಿ: Video: ಪ್ರಧಾನಿ ಮೋದಿ ನಿಂದಿಸುವವರಿಗೆ ಹೊದಿಕೆ ಇಲ್ಲ, ಮುಸ್ಲಿಮರಿಗೆ ಬೆಡ್ಶೀಟ್ ಕೊಡದ ಬಿಜೆಪಿ ಮಾಜಿ ಸಂಸದ ಸುಖ್ಬೀರ್
ಮುಖ್ಯಮಂತ್ರಿ ಫಡ್ನವೀಸ್ ಅವರು ನಾಂದೇಡ್ ಎಸ್ಪಿಯಿಂದ ಘಟನೆಯ ವಿವರಗಳನ್ನು ಪಡೆದುಕೊಂಡಿದ್ದು, ದಾಳಿಯ ಹಿಂದಿನ ಉದ್ದೇಶವನ್ನು ತನಿಖೆ ಮಾಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಮಾತಾ ಸಾಹಿಬ್ ಗುರುದ್ವಾರದಲ್ಲಿ ಜಸ್ಪಾಲ್ ಸಿಂಗ್ ಎಂಬಾತ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಾದಲ್ ಅವರು ಪ್ರಾರ್ಥನೆ ಸಲ್ಲಿಸಿ ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಗ ಈ ದಾಳಿ ನಡೆದಿದೆ. ಅವರನ್ನು ರಕ್ಷಿಸಲು ಯತ್ನಿಸಿದ ಇನ್ಸ್ಪೆಕ್ಟರ್ ಸಂತೋಷ್ ಕೇಂಗ್ರೆ ಅವರಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಕೋರ ಜಸ್ಪಾಲ್ ಸಿಂಗ್ ನಿಹಾಂಗ್ ಸಿಖ್ ಆಗಿದ್ದು, ಕಳೆದ 2 ವರ್ಷಗಳಿಂದ ಗುರುದ್ವಾರದಲ್ಲಿ ಕೆಲಸ ಮಾಡುತ್ತಿದ್ದ. ಗಾಯಗೊಂಡ ಇಬ್ಬರನ್ನೂ ನಾಂದೇಡ್ನ ಯಶೋಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಲಿಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ