Headlines

ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ನಾವಿಕರನ್ನು ನಿಯೋಜಿಸಬೇಡಿ; ಹಡಗು ಕಂಪನಿ ಮಾಲೀಕರಿಗೆ ಭಾರತ ಆದೇಶ – Kannada News | Do not deploy Indian sailors on ships passing through Hormuz India’s big warning to shipowners

ನವದೆಹಲಿ, ಜುಲೈ 16: ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಮತ್ತು ಪರ್ಷಿಯನ್ ಗಲ್ಫ್ ವಲಯದಲ್ಲಿ ಸಂಚರಿಸುವ ಹಡಗುಗಳಲ್ಲಿ ಭಾರತೀಯ ನಾವಿಕರನ್ನು ನಿಯೋಜಿಸದಂತೆ ಭಾರತ ಸರ್ಕಾರವು ಶಿಪ್ಪಿಂಗ್ ಕಂಪನಿಗಳಿಗೆ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಿದೆ. ಕಳೆದ 3 ದಿನಗಳಲ್ಲಿ ಈ ವಲಯದಲ್ಲಿ ನಡೆದ ದಾಳಿಗಳಲ್ಲಿ ಇಬ್ಬರು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡ ಬೆನ್ನಲ್ಲೇ ಈ ದೊಡ್ಡ ನಿರ್ಧಾರ ಹೊರಬಿದ್ದಿದೆ.

ಭಾರತದ ನೌಕಾಯಾನ ನಿಯಂತ್ರಕ ಸಂಸ್ಥೆಯಾದ ಡೈರೆಕ್ಟರೇಟ್ ಜನರಲ್ ಆಫ್ ಮ್ಯಾರಿಟೈಮ್ ಅಡ್ಮಿನಿಸ್ಟ್ರೇಷನ್ (DGMA) ಬುಧವಾರ ತುರ್ತು ಆದೇಶ ಹೊರಡಿಸಿದೆ. “ಮುಂದಿನ ಆದೇಶದವರೆಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಯಾವುದೇ ವಾಣಿಜ್ಯ ಹಡಗುಗಳಲ್ಲಿ ಭಾರತೀಯ ನಾವಿಕರನ್ನು ನಿಯೋಜಿಸುವಂತಿಲ್ಲ” ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೆ ಭಾರತೀಯ ನಾವಿಕ ಬಲಿ; ಭಾರತದಿಂದ ಇರಾನ್​ಗೆ ಸಮನ್ಸ್ ಜಾರಿ

ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ DGMA, ಸಂಘರ್ಷ ಪೀಡಿತ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮೊಂಬಾಸಾ ಬಿ, ಅಲ್ ಬಹ್ಯಾ, ಜಿಎಫ್ಎಸ್ ಗ್ಯಾಲಕ್ಸಿ, ಎಂಟಿ ವೆದ್ಯಾನ್ ಮತ್ತು ಅಲ್ ರೇಖಾಯತ್ ಸೇರಿದಂತೆ ಹಲವು ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಹೆಚ್ಚಾಗಿರುವುದರಿಂದ ಭಾರತೀಯ ನಾವಿಕರ ಸುರಕ್ಷತೆ ಮತ್ತು ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರ:

ಜಾಗತಿಕ ಹಡಗು ಉದ್ಯಮಕ್ಕೆ ನಾವಿಕರನ್ನು ಪೂರೈಸುವಲ್ಲಿ ಭಾರತವು ವಿಶ್ವದಲ್ಲೇ 3ನೇ ಅತಿ ದೊಡ್ಡ ದೇಶವಾಗಿದೆ. ಜಗತ್ತಿನಾದ್ಯಂತ 3 ಲಕ್ಷಕ್ಕೂ ಅಧಿಕ ಭಾರತೀಯ ನಾವಿಕರು ಕೆಲಸ ಮಾಡುತ್ತಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಆರಂಭವಾದಾಗಿನಿಂದ ಗಲ್ಫ್ ವಲಯದಲ್ಲಿ ನಡೆದ ವಿವಿಧ ದಾಳಿಗಳಲ್ಲಿ 13 ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಮೂಲಗಳು ಖಚಿತಪಡಿಸಿವೆ.

ಹಡಗಿನ ಕ್ಯಾಪ್ಟನ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ:

ಹಾರ್ಮುಜ್ ಮತ್ತು ಪರ್ಷಿಯನ್ ಗಲ್ಫ್ ಸುತ್ತಮುತ್ತಲಿನ ಜಲಪ್ರದೇಶದಲ್ಲಿ ಇರುವ ಹಡಗುಗಳ ಕ್ಯಾಪ್ಟನ್ ಅತ್ಯಂತ ಜಾಗರೂಕರಾಗಿರಬೇಕು ಎಂದು ಸೂಚಿಸಲಾಗಿದೆ. ತುರ್ತು ನೆರವಿಗಾಗಿ ನಾವಿಕರು ತಕ್ಷಣವೇ ಡಿಜಿ ಕಮ್ಯುನಿಕೇಷನ್ ಸೆಂಟರ್ (MMDAC) ಅಥವಾ ಭಾರತೀಯ ನೌಕಾಪಡೆಯ ಇನ್ಫಾರ್ಮೇಷನ್ ಫ್ಯೂಷನ್ ಸೆಂಟರ್ ಇಂಡಿಯನ್ ಓಷಿಯನ್ ರೀಜನ್ ಅನ್ನು ಸಂಪರ್ಕಿಸಲು ಕೋರಲಾಗಿದೆ.

ಹಾರ್ಮುಜ್‌ನಲ್ಲಿ ಬಿಕ್ಕಟ್ಟು:

ಬುಧವಾರ ಅಮೆರಿಕ ಸೇನೆಯು ಇರಾನ್‌ನ ಕರಾವಳಿ ರಕ್ಷಣಾ ನೆಲೆಗಳು ಮತ್ತು ಕ್ಷಿಪಣಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ನಡೆಸಿದ್ದು, ಇರಾನ್ ಬಂದರುಗಳ ಮೇಲೆ ನೌಕಾ ದಿಗ್ಬಂಧನವನ್ನು ಹೇರಿದೆ. ಇದಕ್ಕೆ ಪ್ರತಿಯಾಗಿ, ತಾನು ಅಮೆರಿಕದ ವಿರುದ್ಧ ಅಸ್ತಿತ್ವದ ಯುದ್ಧ ಎದುರಿಸುತ್ತಿರುವುದಾಗಿ ಘೋಷಿಸಿರುವ ಇರಾನ್, ಈ ವಲಯದ ಇಂಧನ ರಫ್ತನ್ನು ತಡೆಯುವುದಾಗಿ ಹೆದರಿಸಿದೆ. ಇದರಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರ ಕಷ್ಟಕರವಾಗಿದೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯ ಹಡಗುಗಳ ಮೇಲಿನ ಶೇ. 20ರಷ್ಟು ಶುಲ್ಕ ಹಿಂಪಡೆದ ಟ್ರಂಪ್; ಹೊಸ ಘೋಷಣೆಯೇನು?

ಜಾಗತಿಕ ಹಡಗು ಉದ್ಯಮದಲ್ಲಿ ಭಾರತದ ಬಲ:

ಸರ್ಕಾರಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಜಾಗತಿಕ ಹಡಗು ಉದ್ಯಮಕ್ಕೆ ನಾವಿಕರನ್ನು ಪೂರೈಸುವಲ್ಲಿ ಭಾರತವು ವಿಶ್ವದಲ್ಲೇ ಮೂರನೇ ಅತಿ ದೊಡ್ಡ ದೇಶವಾಗಿದೆ. ಪ್ರಸ್ತುತ ವಿಶ್ವದಾದ್ಯಂತ ವಿವಿಧ ಹಡಗುಗಳಲ್ಲಿ 3 ಲಕ್ಷಕ್ಕೂ ಅಧಿಕ ಭಾರತೀಯ ನಾವಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರ ಸುರಕ್ಷತೆ ಭಾರತಕ್ಕೆ ಅತ್ಯಂತ ಆದ್ಯತೆಯ ವಿಷಯವಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿ ಇತ್ತೀಚೆಗೆ ನಡೆದ ದಾಳಿಗಳಲ್ಲಿ ಇಬ್ಬರು ಭಾರತೀಯ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *