ವಾಷಿಂಗ್ಟನ್, ಜೂನ್ 27: ಜಾಗತಿಕ ಮಾರುಕಟ್ಟೆ ಮತ್ತು ಪೂರೈಕೆ ಸರಪಳಿಗೆ ಭಾರಿ ಅಡ್ಡಿ ಉಂಟು ಮಾಡಿದ್ದ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್(Iran) ದೇಶಗಳು ಇತ್ತೀಚೆಗಷ್ಟೇ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದವು. ಆದರೆ ಈ ಶಾಂತಿ ಒಪ್ಪಂದದ ಶಾಯಿ ಒಣಗುವ ಮುನ್ನವೇ ಮಧ್ಯಪ್ರಾಚ್ಯದ ಹಾರ್ಮುಜ್ ಜಲಸಂಧಿಯಲ್ಲಿ ಉಭಯ ದೇಶಗಳ ನಡುವೆ ಮತ್ತೆ ಭೀಕರ ಮಿಲಿಟರಿ ಸಂಘರ್ಷ ಭುಗಿಲೆದ್ದಿದ್ದು ಜಾಗತಿಕ ಆತಂಕಕ್ಕೆ ಕಾರಣವಾಗಿದೆ.
ಓಮನ್ ಕರಾವಳಿ ಬಳಿ ಹಡಗಿನ ಮೇಲೆ ಇರಾನ್ ದಾಳಿ
ಜೂನ್ 25 ರಂದು ಓಮನ್ ಕರಾವಳಿಯ ಬಳಿ ಇರುವ ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ‘ಎಂ/ವಿ ಎವರ್ ಲವ್ಲಿ’ ಎಂಬ ವಾಣಿಜ್ಯ ಹಡಗಿನ ಮೇಲೆ ಇರಾನ್ ಪಡೆಗಳು ಹಠಾತ್ ದಾಳಿ ನಡೆಸಿದ್ದವು. ಇರಾನ್ನ ಈ ಕ್ರಮವನ್ನು ಅನಗತ್ಯ ಆಕ್ರಮಣ ಮತ್ತು ಸಂಚಾರ ಸ್ವಾತಂತ್ರ್ಯದ ಉಲ್ಲಂಘನೆ ಎಂದು ಕರೆದ ಅಮೆರಿಕದ ಮಿಲಿಟರಿ ಕಮಾಂಡ್ (CENTCOM), ತಕ್ಷಣವೇ ಇರಾನ್ಗೆ ತಿರುಗೇಟು ನೀಡಲು ಅಖಾಡಕ್ಕಿಳಿಯಿತು.
ಇರಾನ್ ರಾಡಾರ್, ಕ್ಷಿಪಣಿ ನೆಲೆಗಳ ಮೇಲೆ ಅಮೆರಿಕದ ಭೀಕರ ಬಾಂಬ್ ದಾಳಿ
ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಹಡಗಿನ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕದ ವಾಯುಸೇನೆ ಮತ್ತು ನೌಕಾಸೇನೆ ಇರಾನ್ನ ಸೈನಿಕ ನೆಲೆಗಳನ್ನು ಗುರಿಯಾಗಿಸಿಕೊಂಡು ಭೀಕರ ದಾಳಿ ನಡೆಸಿವೆ. ಇರಾನ್ ಕರಾವಳಿಯಲ್ಲಿರುವ ಕ್ಷಿಪಣಿ ಉಡಾವಣಾ ಕೇಂದ್ರಗಳು, ಡ್ರೋನ್ ತಾಣಗಳು ಮತ್ತು ಕರಾವಳಿ ರಾಡಾರ್ ಕೇಂದ್ರಗಳನ್ನು ಅಮೆರಿಕ ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಒಪ್ಪಂದದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾಡಲು ಯುಎಸ್ ಮಿಲಿಟರಿ ಸದಾ ಜಾಗರೂಕವಾಗಿರುತ್ತದೆ ಎಂದು ಅಮೆರಿಕದ ಸೇನೆ ಎಚ್ಚರಿಸಿದೆ.
ಮತ್ತಷ್ಟು ಓದಿ: ಅಮೆರಿಕ-ಇರಾನ್ ಮಹತ್ವದ ಮಾತುಕತೆ ಮುಕ್ತಾಯ: ಪರಮಾಣು ಬಿಕ್ಕಟ್ಟು, ಆರ್ಥಿಕ ನಿರ್ಬಂಧಗಳ ಇತ್ಯರ್ಥಕ್ಕೆ ಜಂಟಿ ಕಾರ್ಯಪಡೆ ರಚನೆ
ಕೊಲ್ಲಿಯಲ್ಲಿರುವ ಅಮೆರಿಕ ನೆಲೆಗಳ ಮೇಲೆ ಇರಾನ್ ಪ್ರತಿದಾಳಿ
ಅಮೆರಿಕ ತನ್ನ ನೆಲದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಕೆರಳಿದ ಇರಾನ್, ಗಲ್ಫ್ (ಕೊಲ್ಲಿ) ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ಶಕ್ತಿಶಾಲಿ ಪ್ರತಿದಾಳಿ ನಡೆಸಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಅಮೆರಿಕದ ಆಕ್ರಮಣಶೀಲತೆ ಹೀಗೆಯೇ ಮುಂದುವರೆದರೆ, ನಮ್ಮ ಮುಂದಿನ ಪ್ರತಿಕ್ರಿಯೆ ಇದಕ್ಕಿಂತಲೂ ಭೀಕರವಾಗಿರಲಿದೆ ಎಂದು ನೇರ ಎಚ್ಚರಿಕೆ ನೀಡಿದೆ.
ಶಾಂತಿ ಒಪ್ಪಂದ ‘ಮೂರ್ಖತನದ ಉಲ್ಲಂಘನೆ’ ಎಂದ ಡೊನಾಲ್ಡ್ ಟ್ರಂಪ್
ಜಾಗತಿಕ ಕಚ್ಚಾ ತೈಲದ (Crude Oil) ಸುಮಾರು ಐದನೇ ಒಂದು ಭಾಗ (20%) ಹಾದುಹೋಗುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲು ಇರಾನ್ಗೆ ಬಿಡುವುದಿಲ್ಲ ಎಂದು ವಾಷಿಂಗ್ಟನ್ ಸ್ಪಷ್ಟಪಡಿಸಿದೆ. ಇರಾನ್ನ ಈ ವರ್ತನೆಯನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಳ್ಳುವುದು ಉಭಯ ದೇಶಗಳ ನಡುವಿನ ಶಾಂತಿ ಒಪ್ಪಂದದ ಮೂರ್ಖತನದ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಇರಾನ್ಗೆ ತಕ್ಕ ಶಾಸ್ತಿ ಮಾಡುವುದಾಗಿ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಎಚ್ಚರಿಕೆ
ಆದರೆ ಇದಕ್ಕೆ ಜಗ್ಗದ ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತಾ ಆಯೋಗದ ಮುಖ್ಯಸ್ಥ ಇಬ್ರಾಹಿಂ ಅಜೀಜಿ, ಹಾರ್ಮುಜ್ ಜಲಸಂಧಿ ನಮ್ಮ ನಿಯಂತ್ರಣದಲ್ಲೇ ಇರಲಿದೆ. ಇದು ಕದನ ವಿರಾಮದ ಉಲ್ಲಂಘನೆಯಲ್ಲ, ಬದಲಿಗೆ ಕದನ ವಿರಾಮವನ್ನು ನಮ್ಮ ಶರತ್ತುಗಳ ಮೇಲೆ ಕಾಪಾಡಿಕೊಳ್ಳುವ ಪ್ರಯತ್ನ ಎಂದು ತಿರುಗೇಟು ನೀಡಿದ್ದಾರೆ. ಈ ಘಟನೆಯಿಂದಾಗಿ ಇಡೀ ಕೊಲ್ಲಿ ವಲಯದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ