Headlines

ಹಾಸ್ಟೆಲ್ ಮಾಲೀಕರಿಗೆ ಮಗ ಕಳುಹಿಸಿದ ಪೇಪರ್​ನಿಂದ ಬೆಳಕಿಗೆ ಬಂದಿತ್ತು ನೀಟ್ ಪೇಪರ್ ಸೋರಿಕೆ ಪ್ರಕರಣ – Kannada News | NEET Exam Paper Leak 2026, know how a guess paper helped this case to be uncovered

ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳುImage Credit source: PTI

ನವದೆಹಲಿ, ಮೇ 12: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ (Neet paper leak case) ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಸರ್ಕಾರವು ಮರುಪರೀಕ್ಷೆಗೆ ಆದೇಶಿಸಿದೆ. ಕಷ್ಟಪಟ್ಟು ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಮತ್ತೊಮ್ಮೆ ಬರೆಯುವ ತಲೆನೋವು ಪಡೆದಿದ್ದಾರೆ. ಇದೇ ವೇಳೆ, ಗಂಭೀರವೆನಿಸಿರುವ ಈ ಪ್ರಕರಣ ಹೇಗೆ ಬೆಳಕಿಗೆ ಬಂತು ಎನ್ನುವ ವಿಚಾರ ಬಹಳ ಕುತೂಹಲ ಮೂಡಿಸಿದೆ. ಹಾಸ್ಟೆಲ್ ಮಾಲೀಕರಿಗೆ ಆತನ ಮಗ ಕಳುಹಿಸಿದ ಪೇಪರ್​ವೊಂದು ಈ ಪ್ರಕರಣ ಬೆಳಕಿಗೆ ಬರಲು ಕಾರಣವಾಗಿದೆ.

ರಾಜಸ್ಥಾನದ ಸೀಕರ್‌ನಲ್ಲಿ (Sikar) ಹಾಸ್ಟೆಲ್ ನಡೆಸುತ್ತಿರುವ ವ್ಯಕ್ತಿಯೊಬ್ಬರ ಮಗ ಕೇರಳದಲ್ಲಿ ಎಂಬಿಬಿಎಸ್ ಓದುತ್ತಿರುತ್ತಾನೆ. ಮೇ 3ರಂದು ನಡೆಯಬೇಕಿದ್ದ ನೀಟ್ ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು, ಅಂದರೆ ಮೇ 2ರ ರಾತ್ರಿ 11 ಗಂಟೆಗೆ, ಈ ವಿದ್ಯಾರ್ಥಿಯು ತನ್ನ ತಂದೆಗೆ ವಾಟ್ಸಾಪ್ ಮೂಲಕ “ಗೆಸ್ ಪೇಪರ್” (ಅಂದಾಜು ಪ್ರಶ್ನೆ ಪತ್ರಿಕೆ) ಒಂದನ್ನು ಕಳುಹಿಸಿರುತ್ತಾನೆ. ತನ್ನ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗಬಹುದು ಎಂಬುದು ಅವನ ಉದ್ದೇಶವಾಗಿತ್ತು.

ಮರುದಿನ ಪರೀಕ್ಷೆ ಮುಗಿದ ನಂತರ, ಹಾಸ್ಟೆಲ್ ಮಾಲೀಕರು ತಮಗೆ ಪರಿಚಿತರಿದ್ದ ರಸಾಯನಶಾಸ್ತ್ರ ಶಿಕ್ಷಕರೊಬ್ಬರಿಗೆ ಈ ಪೇಪರ್ ತೋರಿಸಿದರು. ಪರಿಶೀಲಿಸಿದಾಗ, ಅಸಲಿ ಪ್ರಶ್ನೆ ಪತ್ರಿಕೆಯಲ್ಲಿದ್ದ 204 ಪ್ರಶ್ನೆಗಳ ಪೈಕಿ 135 ಪ್ರಶ್ನೆಗಳು ಈ “ಗೆಸ್ ಪೇಪರ್”ನಲ್ಲಿ ಇದ್ದಂತೆಯೇ ಇರುವುದು ಕಂಡುಬಂದಿತು.

ಇದನ್ನೂ ಓದಿ: ಭವಾನಿಪುರ ಕ್ಷೇತ್ರ ಉಳಿಸಿಕೊಂಡು ನಂದಿಗ್ರಾಮದ ಶಾಸಕ ಸ್ಥಾನಕ್ಕೆ ಬಂಗಾಳದ ಸಿಎಂ ಸುವೇಂದು ಅಧಿಕಾರಿ ರಾಜೀನಾಮೆ

ಈ ವಿಷಯವನ್ನು ತಿಳಿದ ಹಾಸ್ಟೆಲ್ ಮಾಲೀಕರು ಮತ್ತು ಶಿಕ್ಷಕರು ಕೂಡಲೇ ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದರು. ಆದರೆ, ಸಿಕರ್ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದರು. ಪರೀಕ್ಷೆ ಮುಗಿದ ನಂತರ ದೂರು ನೀಡುತ್ತಿರುವುದರಿಂದ ನಿಮ್ಮ ಉದ್ದೇಶವೇ ಸರಿಯಿಲ್ಲ ಎಂದು ಪೊಲೀಸರು ಅವರನ್ನು ವಾಪಸ್ ಕಳುಹಿಸಿದ್ದರು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಇಮೇಲೆ ಕಳುಹಿಸಿದಾಗ ಸಿಕ್ಕಿತು ಟ್ವಿಸ್ಟ್

ಪೊಲೀಸರಿಂದ ಸ್ಪಂದನೆ ಸಿಗದಿದ್ದಾಗ, ಅವರು ನೇರವಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ಇಮೇಲ್ ಮಾಡಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ NTA, ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡಕ್ಕೆ (SOG) ತನಿಖೆ ನಡೆಸಲು ಸೂಚಿಸಿತು.

ತನಿಖೆಯ ವೇಳೆ ಈ ಜಾಲವು ಹರಿಯಾಣ, ಬಿಹಾರ ಮತ್ತು ಮಹಾರಾಷ್ಟ್ರದವರೆಗೂ ಹರಡಿರುವುದು ಪತ್ತೆಯಾಯಿತು. ನಾಸಿಕ್‌ನ ಶುಭಂ ಖೈರ್ನಾರ್ ಎಂಬ ವಿದ್ಯಾರ್ಥಿಯಿಂದ ಈ ಪತ್ರಿಕೆ ಸೋರಿಕೆಯಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿ ಯುಗ ಆರಂಭ; ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ

ಈ ಗಂಭೀರ ಲೋಪದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು NEET UG 2026 ಪರೀಕ್ಷೆಯನ್ನು ರದ್ದುಗೊಳಿಸಿದೆ. ಈಗ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ಸಿಬಿಐ (CBI) ವಹಿಸಿಕೊಂಡಿದೆ. ಪರೀಕ್ಷೆಯನ್ನು ಶೀಘ್ರದಲ್ಲೇ ಮರುನಡೆಸಲಾಗುವುದು ಎಂದು ಎನ್‌ಟಿಎ ತಿಳಿಸಿದೆ. ಪರೀಕ್ಷೆ ಮತ್ತೆ ನಡೆಸುವ ನಿರ್ಧಾರದ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಮರುಪರೀಕ್ಷೆಗಳನ್ನು ಸ್ವಾಗತಿಸಿದ್ದಾರೆ. ಇನ್ನೂ ಕೆಲವರು, ಮರುಪರೀಕ್ಷೆಯಿಂದ ಮಾನಸಿಕ ಒತ್ತಡ ಹೆಚ್ಚಾಗುತ್ತದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *