ಹೃದಯ ಸಮುದ್ರ ಕಲಕಿದ್ದ ಸಂಗೀತ ಮಾಂತ್ರಿಕ ಎಸ್​​ಪಿ ವೆಂಕಟೇಶ್ ಇನ್ನಿಲ್ಲ – Kannada News | Famous music director SP Venkatesh passed away in Chennai

‘ಅಶ್ವಮೇಧ’ ಸಿನಿಮಾದ (Cinema) ‘ಹೃದಯ ಸಮುದ್ರ ಕಲಕಿ’ ಸೇರಿದಂತೆ ಹಲವು ಅತ್ಯುತ್ತಮ ಹಾಡುಗಳನ್ನು ಕನ್ನಡಕ್ಕೆ ನೀಡಿದ್ದ ದಕ್ಷಿಣದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಎಸ್​​ಪಿ ವೆಂಕಟೇಶ್ ಅವರು ಇಂದು (ಫೆಬ್ರವರಿ 03) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ವೆಂಕಟೇಶ್ ಅವರು ಚೆನ್ನೈನ ತಮ್ಮ ಸ್ವಗೃಹದಲ್ಲಿ ಕೊನೆ ಉಸಿರೆಳೆದಿದ್ದಾರೆ ಅವರಿಗೆ 71 ವರ್ಷ ವಯಸ್ಸಾಗಿತ್ತು. ವೆಂಕಟೇಶ್ ನಿಧನಕ್ಕೆ ತಮಿಳು, ಮಲಯಾಳಂನ ಹಲವಾರು ಸಿನಿಮಾ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಗಿಟಾರಿಸ್ಟ್ ಆಗಿ ಚಿತ್ರರಂಗದಲ್ಲಿ ವೃತ್ತಿ ಆರಂಭಿಸಿದ ಎಸ್​​​ಪಿ ವೆಂಕಟೇಶ್ ಅವರು ನೂರಾರು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಕನ್ನಡ, ಮಲಯಾಳಂ, ತಮಿಳು, ತೆಲುಗು, ಹಿಂದಿ ಮತ್ತು ಬೆಂಗಾಲಿ ಸಿನಿಮಾಗಳಿಗೂ ಸಹ ಸಂಗೀತ ನೀಡಿದ್ದಾರೆ. ಅದರಲ್ಲೂ ಮಲಯಾಳಂ ಮತ್ತು ತಮಿಳಿನ ಹಲವಾರು ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿರುವ ಶ್ರೇಯ ಎಸ್​​ಪಿ ವೆಂಕಟೇಶ್ ಅವರದ್ದಾಗಿದೆ.

ಕನ್ನಡದಲ್ಲಿ ಸಹ ಹಲವಾರು ಸಿನಿಮಾಗಳಿಗೆ ವೆಂಕಟೇಶ್ ಅವರು ಸಂಗೀತ ನೀಡಿದ್ದಾರೆ. ‘ಪ್ರೇಮ ಯುದ್ಧ’ ಸಿನಿಮಾದಿಂದ ಆರಂಭಿಸಿದ, ‘ಅಶ್ವಮೇಧ’, ‘ಶರವೇಗದ ಸರದಾರ’, ‘ಸುಂದರಕಾಂಡ’, ‘ಪಂಚಮವೇದ’, ‘ಮೇಘ ಮಂದಾರ’ ಇನ್ನೂ ಹಲವಾರು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಎಸ್​​ಪಿ ವೆಂಕಟ್ ನೀಡಿರುವ ‘ಹೃದಯ ಸಮುದ್ರ ಕಲಕಿ’ ಹಾಡನ್ನು ಕೇಳದ ಕನ್ನಡಿಗನೇ ಇಲ್ಲ ಎನ್ನಬಹುದೇನು.

ಇದನ್ನೂ ಓದಿ:ತೀವ್ರವಾಗಿ ಕುಸಿದ ‘ಬಾರ್ಡರ್ 2’ ಸಿನಿಮಾ ಕಲೆಕ್ಷನ್; ಮುಂದೇನು ಪರಿಸ್ಥಿತಿ?

ಹಿಂದಿಯಲ್ಲಿ ಸಲ್ಮಾನ್ ಖಾನ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಕ್ಯೂಂಕಿ’ಗೆ ಸಂಗೀತ ನೀಡಿರುವುದು ವೆಂಕಟೇಶ್. ಮಾತ್ರವಲ್ಲದೆ, ಅನಿಲ್ ಕಪೂರ್-ಟಬು ನಟನೆಯ ‘ಥೇವರ್ ಮಗನ್’ ಸಿನಿಮಾ ರೀಮೇಕ್ ‘ವಿರಾಸತ್’ಗೂ ವೆಂಕಟೇಶ್ ಅವರದ್ದೇ ಸಂಗೀತ. ಹಿಂದಿಯ ಕಲ್ಟ್ ಕಾಮಿಡಿ ಸಿನಿಮಾ ಆಗಿರುವ ‘ಹಂಗಾಮ’ಗೂ ವೆಂಕಟೇಶ್ ಅವರದ್ದೇ ಸಂಗೀತ. ಮಲಯಾಳಂನಲ್ಲಂತೂ ಹಲವಾರು ಸಿನಿಮಾಗಳಿಗೆ ವೆಂಕಟೇಶ್ ಸಂಗೀತ ನೀಡಿದ್ದಾರೆ.

ವೆಂಕಟೇಶ್ ನಿಧನಕ್ಕೆ ಮಲಯಾಳಂ ನಟ ಸುರೇಶ್ ಗೋಪಿ, ನಿರ್ದೇಶಕ ಉನ್ನಿಕೃಷ್ಣ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ತಮಿಳು ಚಿತ್ರರಂಗದ ಕೆಲವು ಖ್ಯಾತ ಗಾಯಕರು, ಸಂಗೀತಕರ್ಮಿಗಳು ಸಹ ಎಸ್​​ಪಿ ವೆಂಕಟೇಶ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ವೆಂಕಟೇಶ್ ಅವರ ಅಂತಿಮ ಕಾರ್ಯಗಳು ನಾಳೆ (ಫೆಬ್ರವರಿ 04) ಚೆನ್ನೈನಲ್ಲಿ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *