
ಹುಬ್ಬಳ್ಳಿ, ಮಾರ್ಚ್ 19: ಕೆಲಸ ಮಾಡಿ ಮಲಗಿದ್ದ ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ ಪ್ರಕರಣ ಸಂಬಂಧ ಚಿಕಿತ್ಸೆ ಫಲಿಸದೆ ಓರ್ವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ರಾಮನಗರ ಮೂಲದ ಕಾರ್ಮಿಕ ಅಮ್ಜದ್ ಪಾಷಾ(26) ಮೃತ ದುರ್ದೈವಿಯಾಗಿದ್ದು, ಕಳೆದ 3 ದಿನಗಳಿಂದ ಕಿಮ್ಸ್ನಲ್ಲಿ ಅಮ್ಜದ್ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಉಳಿದ ಮೂವರಾದ ಜಾಫರ್, ಜಬಿ, ಹೈದರ್ಗೆ ಚಿಕಿತ್ಸೆ ಮುಂದುವರಿದ್ದು, ಮಾ.17ರಂದು ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ನಿರ್ಮಾಣ ಹಂತದ ಕಟ್ಟಡದಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಮಲಗಿದ್ದಲ್ಲೇ ಕಾರ್ಮಿಕರು ಅಸ್ವಸ್ಥರಾಗಿದ್ದರು. ಘಟನೆ ಬೆಳಕಿಗೆ ಬಂದ ತಕ್ಷಣವೇ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜಮಾಲಸಾಬ್ ಪಾಳ್ಯಾ ನಿವಾಸಿಗಳಾದ ಅಮ್ಜದ್ ಪಾಶಾ, ಹೈದರ್, ಜಬಿ, ಜಾಫರ್ ಎಂಬ ನಾಲ್ವರು ಕಾರ್ಮಿಕರು ದೊಡ್ಡ ದೊಡ್ಡ ಅಂಗಡಿಗಳ LED ವಾಲ್ ಸೇರಿದಂತೆ ಇನ್ನಿತರ ಕೆಲಸ ಮಾಡುತ್ತಿದ್ದರು. ಹುಬ್ಬಳ್ಳಿ ನಗರದ ದೇಶಪಾಂಡೆ ನಗರದಲ್ಲಿ ಡ್ರೈಪ್ರೂಟ್ಸ್ ಅಂಗಡಿಯೊಂದು ಆರಂಭವಾಗುತ್ತಿದ್ದು, ಆ ಆಂಗಡಿಯ ಇಂಟಿರಿಯರ್ ವರ್ಕ್ ಮತ್ತು LED ಕೆಲಸ ಮಾಡಲು ಲಾರಿ ಚಾಲಕ ಅಲಿಂ ಸೇರಿ ಐವರು ಹತ್ತು ದಿನದ ಹಿಂದೆ ಬಂದಿದ್ದರು. ಮಾರ್ಚ್ 16ರಂದು ರೋಜಾ ಇದ್ದ ನಾಲ್ವರು ರಾತ್ರಿ ಊಟ ಮಾಡಿ, ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗಿದ್ದರು. ಅಂಗಡಿಯ ಶೆಟರ್ ಹಾಕಿಕೊಂಡು ಒಳಗಡೆ ನಾಲ್ವರು ಕಾರ್ಮಿಕರು ಮಲಗಿದ್ದರೆ, ಲಾರಿ ಚಾಲಕ ಅಲೀಂ ಹೊರಗಡೆ ಇದ್ದ ತನ್ನ ಲಾರಿಯಲ್ಲಿ ಮಲಗಿದ್ದ. ಆದ್ರೆ ಮಾರ್ಚ್ 17ರಂದು ಮುಂಜಾನೆ ಒಂಭತ್ತು ಗಂಟೆಯಾದರೂ ಇವರು ಎದ್ದು ಹೊರಗೆ ಬಾರದ ಇದ್ದಾಗ ಲಾರಿ ಚಾಲಕ ಅಲೀಂ, ಶೆಟರ್ ಓಪನ್ ಮಾಡಿ ನಿರ್ಮಾಣ ಹಂತದ ಅಂಗಡಿಯೊಳಗೆ ಹೋಗಿದ್ದಾನೆ. ಆಗ ನಾಲ್ವರು ಪ್ರಜ್ಞೆ ಇಲ್ಲದೇ ಬಿದ್ದಿಕಂಡಿದೆ. ಬಾಯಲ್ಲಿ ಬುರುಗು ಬರುತ್ತಿದ್ದ ಹಿನ್ನೆಲೆ ಕೂಡಲೇ ಸ್ಥಳೀಯರಿಗೆ ಮತ್ತು ಅಂಗಡಿ ಮಾಲೀಕರಿಗೆ ಆತ ಮಾಹಿತಿ ನೀಡಿದ್ದಾನೆ. ಸ್ಥಳೀಯರು ಆಂಬುಲೆನ್ಸ್ ಕರೆಯಿಸಿ ನಾಲ್ವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಿದ್ದರು. ಆದ್ರೆ ಮೂರು ದಿನಗಳ ಸಾವು ಬದುಕಿನ ಹೋರಾಟ ನಡೆಸಿದ ಅಮ್ಜದ್ ಪಾಷಾ ಇಂದು ಹುಬ್ಬಳ್ಳಿ ಕಿಮ್ಸ್ನಲ್ಲಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಕಿಮ್ಸ್ ಸಿಬ್ಬಂದಿ ನಿರ್ಲಕ್ಷ್ಯ ಆರೋಪ; ಸಕಾಲಕ್ಕೆ ಚಿಕಿತ್ಸೆ ಸಿಗದೆ ಗಂಭೀರ ಗಾಯಗೊಂಡಿದ್ದ ಯುವಕ ಸಾವು
ಇನ್ನು ನಿರ್ಮಾಣ ಹಂತದ ಕಟ್ಟಡವಾಗಿದ್ದರಿಂದ ಒಳಗಡೆ ಇಂಟೀರಿಯರ್ ವರ್ಕ್ ಮಾಡಲು ಅನೇಕ ಕೆಮಿಕಲ್ಗಳನ್ನು ಇಡಲಾಗಿದ್ದು, ಅವುಗಳ ವಾಸನೆ ಕೂಡಾ ಹೆಚ್ಚಾಗಿತ್ತು.ಕಟ್ಟಡದಲ್ಲಿ ಇತ್ತ ನಾಲ್ವರು ಕಾರ್ಮಿಕರು ಮಲಗಿದ್ದರೆ, ಗ್ಲಾಸ್ ವರ್ಕ್ ಮಾಡುವ ಬೇರೆ ಕಾರ್ಮಿಕರು ಜನರೇಟರ್ ಆನ್ ಮಾಡಿಕೊಂಡು ರಾತ್ರಿ ಕೆಲಸ ಮಾಡ್ತಿದ್ದರಂತೆ. ಕೆಲಸ ಮುಗಿದ ಬಳಿಕ ಜನರೇಟರ್ ಬಂದ್ ಮಾಡದೇ ಅವರು ತೆರೆಳಿದ್ದ ಪರಿಣಾಮ ಕಟ್ಟಡದ ಒಳಗೆ ಕಾರ್ಬನ್ ಡೈ ಆ್ಯಕ್ಸೈಡ್ ಹೆಚ್ಚಾಗಿದೆ. ಹೊರಗಿನಿಂದಲೂ ಗಾಳಿ ಬಾರದೇ ಇದ್ದಿದ್ದರಿಂದ ಆಮ್ಲಜನಕ ಸಮಸ್ಯೆಯಾಗಿ ಕಾರ್ಮಿಕರಿಗೆ ಉಸಿರುಗಟ್ಟಿದೆ ಎನ್ನಲಾಗಿದೆ. ಉಳಿದ ಮೂವರು ಕೂಡ ಸಾವು ಬದುಕಿನ ಹೋರಾಟ ನಡೆಸುತ್ತಿದ್ದು, ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಹುಬ್ಬಳ್ಳಿ ಸಬ್ ಅರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.