ಬೆಂಗಳೂರು, ಮಾರ್ಚ್ 3: ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರು 15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಳವಳ್ಳಿ ಮೂಲದ ಸಿದ್ದು ಅಲಿಯಾಸ್ ನಾಗರಾಜ್ ಎಂಬಾತನೇ ಬಂಧಿತ ಆರೋಪಿ. ಈತನಿಂದ ಬರೋಬ್ಬರಿ 1.40 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 19.5 ಲಕ್ಷ ರೂಪಾಯಿ ನಗದು ಮತ್ತು 711 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ನಾಗರಾಜ್ ಸುಮಾರು ಏಳೆಂಟು ವರ್ಷಗಳಿಂದ ಕಳ್ಳತನವನ್ನೇ ಮಾಡಿಕೊಂಡಿದ್ದ. ಈತನ ವಿರುದ್ಧ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಮಾದಪ್ಪನ ಬೆಟ್ಟಕ್ಕೆ ದೇವರ ದರ್ಶನ ಪಡೆಯಲು ಹೋಗಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಒಟ್ಟಾರೆ 15 ಕಳ್ಳತನ ಪ್ರಕರಣಗಳಲ್ಲಿ ಈತ ಶಾಮೀಲಾಗಿದ್ದ ಎಂದು ತಿಳಿದುಬಂದಿದೆ.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು