Headlines

2024ರ ನೀಟ್ -ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; ಸಂಜೀವ್ ಮುಖಿಯಾಗೆ ಸಿಬಿಐನಿಂದ ಕ್ಲೀನ್​ಚಿಟ್ – Kannada News | No evidence CBI Gives Clean Chit To Sanjeev Mukhiya In NEET UG 2024 Paper Theft and Leak Case

ನವದೆಹಲಿ, ಜುಲೈ 23: ನೀಟ್-ಯುಜಿ (NEET-UG) 2024ರ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾ ಅವರ ಪಾತ್ರಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (CBI) ಸ್ಪಷ್ಟನೆ ನೀಡಿದೆ. ಸುದೀರ್ಘ ಹಾಗೂ ಸಮಗ್ರ ತನಿಖೆಯ ನಂತರ ಈ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಸಿಬಿಐ ಖಚಿತಪಡಿಸಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಸಂಜೀವ್ ಮುಖಿಯಾಗೆ ಕ್ಲೀನ್​ಚಿಟ್ ನೀಡಲಾಗಿದೆ.

2024ರ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಂಜೀವ್ ಮುಖಿಯಾ ಅವರ ಹೆಸರನ್ನು ಚಾರ್ಜ್​ಶೀಟ್​​ನಿಂದ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಿಬಿಐ, ಈ ವದಂತಿಗಳು ಸತ್ಯಕ್ಕೆ ದೂರವಾದವು ಎಂದು ತಿಳಿಸಿದೆ. ಅಲ್ಲದೆ, ಪೇಪರ್ ಲೀಕ್ ಪ್ರಕರಣದಲ್ಲಿದ್ದ ಸಂಪೂರ್ಣ ಜಾಲವನ್ನು ಈಗಾಗಲೇ ಗುರುತಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಯಾವುದೇ ಸಾಕ್ಷ್ಯಾಧಾರವಿಲ್ಲ:

ದೇಶಾದ್ಯಂತ ನಡೆಸಿದ ತನಿಖೆಯಲ್ಲಿ ನೀಟ್-ಯುಜಿ 2024ರ ಪೇಪರ್ ಲೀಕ್ ಅಥವಾ ವಿತರಣೆಯಲ್ಲಿ ಸಂಜೀವ್ ಮುಖಿಯಾ ಭಾಗಿಯಾಗಿರುವುದನ್ನು ಸಾಬೀತುಪಡಿಸಲು ಯಾವುದೇ ಆಧಾರಗಳು ದೊರೆತಿಲ್ಲ. ಪ್ರಶ್ನೆಪತ್ರಿಕೆ ಕಳವು, ವಿತರಣೆ ಮತ್ತು ಅದರ ಲಾಭ ಪಡೆದ ಪ್ರತಿಯೊಬ್ಬರನ್ನೂ ಒಳಗೊಂಡಂತೆ ಒಟ್ಟು 45 ವ್ಯಕ್ತಿಗಳ ವಿರುದ್ಧ ಪಾಟ್ನಾದ ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಹಲವು ದೋಷಾರೋಪಣೆ ಪಟ್ಟಿಗಳನ್ನು ಸಲ್ಲಿಸಿದೆ.

ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿದ್ಯಾರ್ಥಿಗಳ ಹಿತಕ್ಕಿಂತ ರಾಜಕೀಯವೇ ಮುಖ್ಯ, ನೀಟ್ ವಿವಾದಕ್ಕೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿರುಗೇಟು

ಎಫ್​ಐಆರ್​​ನಲ್ಲಿ ಸಂಜೀವ್ ಹೆಸರು:

ಬಿಹಾರದ ಪೊಲೀಸರು ದಾಖಲಿಸಿದ ಆರಂಭಿಕ ಎಫ್‌ಐಆರ್‌ನಲ್ಲಿ ಸಂಜೀವ್ ಮುಖಿಯಾ ಹೆಸರು ಇತ್ತಾದರೂ, ಅವರು ತಲೆಮರೆಸಿಕೊಂಡಿದ್ದರು. ನಂತರ ಇತರ ಪರೀಕ್ಷಾ ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಹಾರ ಪೊಲೀಸರು ಅವರನ್ನು ಬಂಧಿಸಿದ್ದರು. ಬಳಿಕ ನೀಟ್-ಯುಜಿ ಪ್ರಕರಣದ ವಿಚಾರಣೆಗಾಗಿ ಸಿಬಿಐ ಅವರನ್ನು ವಶಕ್ಕೆ ಪಡೆದುಕೊಂಡಿತ್ತು.

ಆದರೆ, ಈ ನಿರ್ದಿಷ್ಟ ಪ್ರಕರಣದಲ್ಲಿ ಯಾವುದೇ ಸಾಕ್ಷ್ಯಗಳು ಸಿಗದ ಕಾರಣ, ಸಿಬಿಐ ತನ್ನ ದೋಷಾರೋಪಣೆ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಿಲ್ಲ. ಇದರ ಪರಿಣಾಮವಾಗಿ ಅವರು ನೀಟ್ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಆದರೆ, ಬಿಹಾರ ಪೊಲೀಸರು ತನಿಖೆ ನಡೆಸುತ್ತಿರುವ ಇತರ ಪ್ರಕರಣಗಳಲ್ಲಿ ಆರೋಪಿಯಾಗಿರುವುದರಿಂದ ಅವರು ನ್ಯಾಯಾಂಗ ಬಂಧನದಲ್ಲೇ ಉಳಿದಿದ್ದಾರೆ.

ಇದನ್ನೂ ಓದಿ: ನೀಟ್ ಪೇಪರ್ ಸೋರಿಕೆ: ಮೌನ ಮುರಿದ ಪ್ರಧಾನಿ, ಫಾಸ್ಟ್​ ಟ್ರ್ಯಾಕ್ ಕೋರ್ಟ್​ ಮಾಡಿ ಅಪರಾಧಿಗಳಿಗೆ ಶಿಕ್ಷೆ ಕೊಡ್ತೀವಿ ಎಂದ ಮೋದಿ

ಏನಿದು ಪ್ರಕರಣ?:

ನೀಟ್-ಯುಜಿ 2024ರ ಪರೀಕ್ಷೆ ಮುಗಿದ ತಕ್ಷಣ ಬಿಹಾರ ಪೊಲೀಸರ ಆರ್ಥಿಕ ಅಪರಾಧಗಳ ಘಟಕ (EOU) ಪಾಟ್ನಾದಲ್ಲಿ ಪೇಪರ್ ಲೀಕ್ ಜಾಲವನ್ನು ಬಯಲಿಗೆಳೆಯಿತು. ಈ ಹಿಂದೆ ಹಲವು ರಾಜ್ಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಪೇಪರ್ ಲೀಕ್‌ನಲ್ಲಿ ಆರೋಪಿಯಾಗಿದ್ದ ಸಂಜೀವ್ ಮುಖಿಯಾ ಅವರನ್ನು ಪ್ರಾಥಮಿಕ ಶಂಕಿತ ಆರೋಪಿಯನ್ನಾಗಿ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿತ್ತು. ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಕೇಂದ್ರ ಶಿಕ್ಷಣ ಸಚಿವಾಲಯವು ಜೂನ್ 2024ರ ಕೊನೆಯಲ್ಲಿ ಇದರ ತನಿಖೆಯನ್ನು ಸಿಬಿಐಗೆ ವಹಿಸಿತು. ಕೇಂದ್ರ ಶಿಕ್ಷಣ ಸಚಿವಾಲಯದ ಸೂಚನೆಯಂತೆ ಸಿಬಿಐ ಈ ಪ್ರಕರಣದ ಸಂಪೂರ್ಣ ತನಿಖೆಯನ್ನು ವಹಿಸಿಕೊಂಡು ಬಿಹಾರ, ಜಾರ್ಖಂಡ್, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆಸಿತು.

ಸಿಬಿಐ ತನ್ನ ವಿಧಿವಿಜ್ಞಾನ ಮತ್ತು ತಾಂತ್ರಿಕ ತನಿಖೆಯ ಮೂಲಕ ಪೇಪರ್ ಲೀಕ್‌ನ ಮೂಲವನ್ನು ಪತ್ತೆಹಚ್ಚಿತು. ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಎನ್‌ಟಿಎ (NTA) ಗೊತ್ತುಪಡಿಸಿದ ಶಾಲೆಯ ಟ್ರಂಕ್‌ನಿಂದ ಪ್ರಶ್ನೆಪತ್ರಿಕೆಗಳನ್ನು ಕಳವು ಮಾಡಲಾಗಿತ್ತು. ಇದರ ಪ್ರಮುಖ ರೂವಾರಿ ಪಂಕಜ್ ಕುಮಾರ್ (ಅಲಿಯಾಸ್ ಆದಿತ್ಯ) ಮತ್ತು ಆತನ ಸಹಚರರು ಪ್ರಶ್ನೆಪತ್ರಿಕೆ ಕದ್ದು, ಎಂಬಿಬಿಎಸ್ (MBBS) ವಿದ್ಯಾರ್ಥಿಗಳ ಮೂಲಕ ಉತ್ತರಗಳನ್ನು ಸಿದ್ಧಪಡಿಸಿದ್ದರು. ನಂತರ ಪಾಟ್ನಾದ ರೆಸಾರ್ಟ್‌ ಒಂದರಲ್ಲಿ ನೀಟ್ ಅಭ್ಯರ್ಥಿಗಳಿಗೆ ಈ ಉತ್ತರಗಳನ್ನು ವಿತರಿಸಲಾಗಿತ್ತು.

ಸಿಬಿಐ ಹೇಳಿದ್ದೇನು?:

“ಆ ಘಟನೆ ನಡೆದಾಗ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾ ಇತರ ಕೆಲವು ಪರೀಕ್ಷಾ ಪೇಪರ್ ಕಳವು ಹಾಗೂ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ, ಈ ಕಳವಿನಲ್ಲೂ ಅವರು ಭಾಗಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಅದರಂತೆ ಬಿಹಾರ ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ (FIR) ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿತ್ತು” ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

“ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ತನ್ನ ತನಿಖೆಯ ಅವಧಿಯಲ್ಲಿ, 2024ರ ನೀಟ್-ಯುಜಿ ಪ್ರಶ್ನೆಪತ್ರಿಕೆ ಕಳವು ಅಥವಾ ವಿತರಣೆಯಲ್ಲಿ ಸಂಜೀವ್ ಕುಮಾರ್ ಅಲಿಯಾಸ್ ಸಂಜೀವ್ ಮುಖಿಯಾ ಭಾಗವಹಿಸಿರುವುದನ್ನು ಸಾಬೀತುಪಡಿಸಲು ಸಿಬಿಐಗೆ ಯಾವುದೇ ಸಾಕ್ಷ್ಯಾಧಾರಗಳು ಸಿಗಲಿಲ್ಲ” ಎಂದು ಸಿಬಿಐ ಸ್ಪಷ್ಟಪಡಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *