Headlines

ನಾನು ಎಷ್ಟು ಒತ್ತಡ ಅನುಭವಿಸಿದ್ದೆ ಎಂಬುದು ನಂಗೆ ಮಾತ್ರ ಗೊತ್ತು! – Kannada News | T20 world cup 2026: suryakumar yadav post match interview after usa match

ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಈ ಜಯಭೇರಿಯ ಕಾರಣಕರ್ತ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಮ್ಯಾಚ್​ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪವರ್​ಪ್ಲೇನಲ್ಲಿ 4 ವಿಕೆಟ್ ಕಳೆದುಕೊಂಡು ಕಲೆಹಾಕಿದ್ದು ಕೇವಲ 46 ರನ್​ಗಳು ಮಾತ್ರ.

ಇದಾದ ಬಳಿಕ 77 ರನ್ ಆಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ ಟೀಮ್ ಇಂಡಿಯಾವನ್ನು ಏಕಾಂಗಿಯಾಗಿ ಮುನ್ನಡೆಸಿದ್ದು ಸೂರ್ಯಕುಮಾರ್ ಯಾದವ್. ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯ 49 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ ಅಜೇಯ 84 ರನ್ ಬಾರಿಸಿದರು.

ಈ ಅರ್ಧಶತಕದ ನೆರವಿನೊಂದಿಗೆ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 161 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 132 ರನ್​ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 29 ರನ್​ಗಳ ಜಯ ಸಾಧಿಸಿತು.

ಈ ಗೆಲುವಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ತಾನು ಅನುಭವಿಸಿದ ಒತ್ತಡವನ್ನು ವಿವರಿಸಿದ್ದಾರೆ. ಬೃಹತ್ ಮೊತ್ತದ ಗುರಿಯೊಂದಿಗೆ ಇನಿಂಗ್ಸ್ ಆರಂಭಿಸಿ ನಾವು ಕೇವಲ 77 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದವು. ಈ ವೇಳೆ ನಾನು ಎಷ್ಟು ಒತ್ತಡವನ್ನು ಅನುಭವಿಸುತ್ತಿದ್ದೆ ಎಂದು ನನಗೆ ಮಾತ್ರ ಗೊತ್ತಿದೆ.

ಆದರೆ ಇಂತಹ ಒತ್ತಡಗಳ ಸಂದರ್ಭಗಳಲ್ಲೂ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲೆ ಎನ್ನುವ ನಂಬಿಕೆ ನನಗಿತ್ತು. ಏಕೆಂದರೆ ನಾನು ಇಲ್ಲೇ ಆಡಿದವನು. ಮುಂಬೈ ಕ್ರಿಕೆಟ್ ಮೈದಾನ, ಆಝಾದ್ ಮೈದಾನ, ಕ್ರಾಸ್ ಮೈದಾನದಲ್ಲಿ ನಾನು ಕ್ರಿಕೆಟ್ ಕೆರಿಯರ್ ರೂಪಿಸಿದ್ದೇನೆ. ಹೀಗಾಗಿ ಕೊನೆಯವರೆಗೂ ಬ್ಯಾಟಿಂಗ್ ಮಾಡಿದರೆ, ಪಂದ್ಯದಲ್ಲಿ ವ್ಯತ್ಯಾಸವನ್ನುಂಟು ಮಾಡಬಹುದು ಎಂಬುದು ನನಗೆ ತಿಳಿದಿತ್ತು. ಹೀಗಾಗಿ ಕ್ರೀಸ್ ಕಚ್ಚಿ ಆಡಲು ನಿರ್ಧರಿಸಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಇದೇ ವೇಳೆ ಪಿಚ್​ ಬಗ್ಗೆ ಮಾತನಾಡಿದ ಸೂರ್ಯ, ಯಾವಾಗಲೂ ವಾಂಖೆಡೆಯಲ್ಲಿ ಇರುವುದಕ್ಕಿಂತ ಸ್ವಲ್ಪ ಭಿನ್ನವಾದ ಪಿಚ್ ಇದಾಗಿತ್ತು. ಬೆಳಿಗ್ಗೆ ಹೊರಗೆ ಹೆಚ್ಚು ಬಿಸಿಲು ಇರಲಿಲ್ಲ. ಕ್ಯುರೇಟರ್ ಮತ್ತು ಮೈದಾನದ ಸಿಬ್ಬಂದಿ ಅತ್ಯುತ್ತಮ ಪಿಚ್ ಅನ್ನು ಸಿದ್ಧಪಡಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ.

ಆದರೆ ಕೆಲವು ವಿಷಯಗಳು ಅವರ ನಿಯಂತ್ರಣದಲ್ಲಿಲ್ಲ. ಇದರಿಂದ ಪಿಚ್​ನ ಮೇಲ್ಮೈನಲ್ಲಿ ಬದಲಾವಣೆಯಾಗಿರಬಹುದು. ಇದಾಗ್ಯೂ ನಮ್ಮ ತಪ್ಪುಗಳನ್ನು ಒಪ್ಪಲು ಸಾಧ್ಯವಿಲ್ಲ. ನಾವು ಇನ್ನೂ ಸ್ವಲ್ಪ ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಿತ್ತು ಎಂಬುದು ನನ್ನ ಅನಿಸಿಕೆ.

ಇದನ್ನೂ ಓದಿ: ವಿಶ್ವಕಪ್​ ಇತಿಹಾಸದಲ್ಲೇ ಅತ್ಯಂತ ಹೀನಾಯ ದಾಖಲೆ ಬರೆದ ಸೌರಭ್

ಇದೀಗ ಪಂದ್ಯ ಗೆದ್ದಿದ್ದೇವೆ. ಗೆದ್ದ ಬಳಿಕ ನಾವು ಬಹಳಷ್ಟು ವಿಷಯಗಳನ್ನು ಕಲಿಯಬಹುದು. ಅದರಂತೆ ಯುಎಸ್​ಎ ವಿರುದ್ಧ ನಾವು ಸ್ವಲ್ಪ ಉತ್ತಮವಾಗಿ ಅಥವಾ ಸ್ವಲ್ಪ ಚುರುಕಾಗಿ ಬ್ಯಾಟಿಂಗ್ ಮಾಡಬೇಕಿತ್ತು ಎಂಬ ಪಾಠ ಕಲಿತಿದ್ದೇವೆ. ಒಬ್ಬ ಬ್ಯಾಟ್ಸ್‌ಮನ್ ಅಥವಾ ಇಬ್ಬರು ಬ್ಯಾಟ್ಸ್‌ಮನ್‌ಗಳು ಕೊನೆಯವರೆಗೂ ಆಡಲು ಪ್ರಯತ್ನಿಸುವುದಕ್ಕಿಂತ ಆ ಸಣ್ಣ, ಸಣ್ಣ ಪಾಲುದಾರಿಕೆಗಳು ನಮ್ಮನ್ನು 160 ಕ್ಕೆ ಕೊಂಡೊಯ್ಯಬಹುದಿತ್ತು. ಇದುವೇ ಈ ಪಂದ್ಯದಿಂದ ಕಲಿತ ಪಾಠ. ಮುಂದಿನ ಪಂದ್ಯಕ್ಕೆ ಇನ್ನೂ ಕೆಲ ದಿನಗಳ ಸಮಯವಿದೆ. ಹೀಗಾಗಿ ನಮೀಬಿಯ ವಿರುದ್ಧದ ಪಂದ್ಯಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿ ಹಿಂತಿರುಗುತ್ತೇವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

Source link

Leave a Reply

Your email address will not be published. Required fields are marked *