
ಕಿಯೊಂಜರ್, ಮಾ.7: ಆಹಾರ ಅರಸಿ ಬಂದಿದ್ದ ಕಾಡಾನೆಯೊಂದು ಒಡಿಶಾದ ಕಿಯೊಂಜರ್ ಜಿಲ್ಲೆಯ ಬನಾಜೋಡಿ ಗ್ರಾಮದ 30 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದಿತ್ತು. ಸುಮಾರು ಆರು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳು ತೋರಿದ ಜಾಣ್ಮೆ ಎಲ್ಲರ ಗಮನ ಸೆಳೆದಿದೆ. ಆನೆಯನ್ನು ಹಗ್ಗಗಳಿಂದ ಮೇಲೆತ್ತುವುದು ಅಪಾಯಕಾರಿ ಎಂದು ಮನಗಂಡ ಅಧಿಕಾರಿಗಳು, ಬಾವಿಗೆ ನೀರನ್ನು ಪಂಪ್ ಮಾಡುವ ಮೂಲಕ ಆನೆಯನ್ನು ಮೇಲೆಕ್ಕೆ ತೇಲುವಂತೆ ಮಾಡುವ ‘ಆರ್ಕಿಮಿಡೀಸ್ ತತ್ವವನ್ನು (Archimedes’ Principle) ಬಳಸಿದರು. ಬಾವಿಗೆ ನೀರು ತುಂಬುತ್ತಿದ್ದಂತೆ ಆನೆಯು ನೀರಿನ ಮಟ್ಟದೊಂದಿಗೆ ಮೇಲೆ ಬಂದಿತು. ಇದು ಆನೆಯ ಮೇಲೆ ಹೆಚ್ಚಿನ ಒತ್ತಡ ಅಥವಾ ಗಾಯಗಳಾಗದಂತೆ ತಡೆಯಲು ಸಹಕಾರಿಯಾಯಿತು. ಆನೆಯು ಅರ್ಧದಷ್ಟು ಮೇಲೆ ಬಂದ ನಂತರ, ಜೆಸಿಬಿ ಯಂತ್ರದ ಸಹಾಯದಿಂದ ಬಾವಿಯ ಪಕ್ಕದಲ್ಲಿ ದಾರಿ ನಿರ್ಮಿಸಿ ಆನೆಯನ್ನು ಸುರಕ್ಷಿತವಾಗಿ ಹೊರಬರುವಂತೆ ಮಾಡಲಾಯಿತು. ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ಆನೆಗೆ ಯಾವುದೇ ಪ್ರಾಣಾಪಾಯ ಸಂಭವಿಸದೆ ಅದು ಕಾಡಿನತ್ತ ತೆರಳಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ