
ಬಾಗಲಕೋಟೆ, ಮಾ.8: ಪ್ರೀತಿಸಿ ಮತಾಂತರಗೊಂಡು ಮದುವೆಯಾದ ಪತಿ ತನಗೆ ಚಿತ್ರಹಿಂಸೆ ನೀಡಿ, ಹಣ ಹಾಗೂ ಬಂಗಾರವನ್ನೆಲ್ಲಾ ದೋಚಿ ಬೀದಿಗೆ ಬಿಟ್ಟಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಕಚೇರಿ ಎದುರು ಕಣ್ಣೀರು ಹಾಕಿದ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ನಿವಾಸಿಯಾದ ಶ್ರೀದೇವಿ (ಈಗಿನ ಹೆಸರು ಹಬೀಬಾ) ಮೂಲತಃ ಕುರುಬ ಸಮುದಾಯದವರು. 14 ವರ್ಷಗಳ ಹಿಂದೆ ಇವರಿಗೆ ಸ್ವಜಾತಿಯ ವ್ಯಕ್ತಿಯೊಂದಿಗೆ ಮದುವೆಯಾಗಿ ಮಕ್ಕಳಿದ್ದರು. ಆದರೆ, ಮುಧೋಳದಲ್ಲಿ ಕೆಲಸಕ್ಕೆ ಬಂದಾಗ ಮುಸ್ಲಿಂ ಸಮುದಾಯದ ಸವಿಫ್ ಪತ್ತೆ ಎಂಬಾತನ ಪರಿಚಯವಾಗಿತ್ತು. ಸವಿಫ್ಗೆ ಈಗಾಗಲೇ ಇಬ್ಬರು ಪತ್ನಿಯರಿದ್ದರೂ, ಶ್ರೀದೇವಿಯವರನ್ನು ಪ್ರೀತಿಸುವುದಾಗಿ ನಂಬಿಸಿ ಮತಾಂತರ ಮಾಡಿದ್ದ ಎನ್ನಲಾಗಿದೆ.
ಸವಿಫ್ ತನ್ನನ್ನು ಬೆದರಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿದ್ದಾನೆ. ಶ್ರೀದೇವಿ ಎಂಬ ಹೆಸರನ್ನು ‘ಹಬೀಬಾ’ ಎಂದು ಬದಲಿಸಿ, ಫೆಬ್ರವರಿ 7, 2023 ರಂದು ಮುಸ್ಲಿಂ ಪದ್ಧತಿಯಂತೆ ನಿಖಾ ಮಾಡಿಕೊಂಡಿದ್ದ ಎಂದು ಮಹಿಳೆ ತಿಳಿಸಿದ್ದಾರೆ. ಮದುವೆಯಾದ ಕೆಲವು ದಿನಗಳ ನಂತರ ಸವಿಫ್ ತನ್ನ ಅಸಲಿ ರೂಪ ತೋರಿಸಿದ್ದಾನೆ. ತನ್ನ ಬಳಿಯಿದ್ದ 4 ಲಕ್ಷ ರೂಪಾಯಿ ನಗದು ಮತ್ತು 4 ತೊಲೆ ಚಿನ್ನದ ಆಭರಣಗಳನ್ನು ಒಯ್ದು, ಈಗ ಮೊದಲ ಪತ್ನಿ ಜೊತೆ ಸೇರಿಕೊಂಡಿದ್ದಾನೆ. ನನಗೆ ಹೊಡೆದು ಬಡಿದು ಬೀದಿಗೆ ತಳ್ಳಿದ್ದಾನೆ ಎಂದು ಶ್ರೀದೇವಿ ಗೋಳಾಡಿದ್ದಾರೆ.
ಇದನ್ನೂ ಓದಿ: ಹೆಣ್ಮಕ್ಕಳಿಗೆ ಸರ್ಕಾರದಿಂದ ಬಂಪರ್ ಪ್ಯಾಕೇಜ್: ಜನನದಿಂದ ಪದವಿಯವರೆಗೆ ಸಿಗಲಿದೆ 25 ಸಾವಿರ ರೂ.
“ನನಗೆ ಈಗ ಮೊದಲ ಗಂಡನೂ ಇಲ್ಲ, ಎರಡನೇ ಪತಿಯೂ ಕೈಕೊಟ್ಟಿದ್ದಾನೆ. ಮಕ್ಕಳನ್ನು ಕಟ್ಟಿಕೊಂಡು ಎಲ್ಲಿಗೆ ಹೋಗಲಿ?” ಎಂದು ಮಹಿಳೆ ಪ್ರಶ್ನಿಸಿದ್ದಾರೆ. ಮುಧೋಳ ಠಾಣೆಯಲ್ಲಿ ದೂರು ನೀಡಲು ಹೋದರೆ ಸ್ಪಂದಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಮಹಿಳೆಯ ಗೋಳು ಆಲಿಸಿದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್, “ಮಹಿಳೆಗೆ ಪತಿಯಿಂದ ಕಿರುಕುಳವಾಗಿರುವ ಬಗ್ಗೆ ದೂರು ಬಂದಿದೆ. ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಮಹಿಳಾ ಠಾಣೆಯ ಮೂಲಕವೂ ಈ ಕೇಸನ್ನು ಪರಿಶೀಲಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ