
ಕೋಮಲ್ ಕುಮಾರ್ (Komal Kumar), ಮೇಘನಾ ರಾಜ್, ಅನುಷಾ ರೈ ಅವರು ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಇತ್ತೀಚೆಗೆ ಪೂರ್ಣಗೊಂಡಿದೆ. ಈ ಸಿನಿಮಾಗೆ ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ವಿಕಾಸ್ ಶೆಟ್ಟಿ ಅವರು ಬಂಡವಾಳ ಹೂಡಿದ್ದಾರೆ. 2 ಹಂತಗಳಲ್ಲಿ 75 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಚಿತ್ರೀಕರಣ ಮುಗಿಸಿಕೊಂಡಿರುವ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ (Sangeetha Bar and Restaurant) ಚಿತ್ರತಂಡ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಆಗಿದೆ.
ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಚಿತ್ರದ ಬಹುತೇಕ ಶೂಟಿಂಗ್ ನಡೆಸಲಾಗಿದೆ. ಕುಂದಾಪುರದ ಅಂಪಾರಿನ ವಾಲ್ತೂರು ಗ್ರಾಮದಲ್ಲಿ ಏಳು ವಿಭಿನ್ನ ವಿನ್ಯಾಸದ ಬೃಹತ್ ಸೆಟ್ಗಳನ್ನು ನಿರ್ಮಿಸಲಾಗಿತ್ತು. ಅದರಲ್ಲಿ ಬಹುಭಾಗದ ಚಿತ್ರೀಕರಣವನ್ನು ಮಾಡಲಾಗಿದೆ. ಸುಮಾರು ಎರಡು ಎಕರೆ ಜಾಗದಲ್ಲಿ 7 ವೈವಿಧ್ಯಮಯ ಸೆಟ್ಗಳನ್ನು ಹಾಕಲಾಗಿತ್ತು.
ಈ ಸಿನಿಮಾಗೆ ಎರಡು ಟೈಟಲ್ ಇದೆ ಎಂದು ಚಿತ್ರತಂಡ ಹೇಳಿದೆ. ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಎಂಬುದು ಒಂದು ಶೀರ್ಷಿಕೆ. ‘ದೇವರ ತಾಣ’ ಎಂಬುದು ಇನ್ನೊಂದು ಟೈಟಲ್. ಚಿತ್ರದ ಮೊದಲಾರ್ಧ ಬಾರ್ನಲ್ಲಿ ಶುರುವಾಗಿ, ದ್ವಿತೀಯಾರ್ಧ ದೇವರ ತಾಣದಲ್ಲಿ ಶುರುವಾಗುತ್ತದೆ. ಆದರೆ ಸೆನ್ಸಾರ್ ನಿಯಮದ ಪ್ರಕಾರ ಒಂದು ಸಿನಿಮಾಕ್ಕೆ ಒಂದೇ ಟೈಟಲ್ ಇರಬೇಕು. ಹಾಗಾಗಿ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’ ಶೀರ್ಷಿಕೆಯಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಅವರು ಹೇಳಿದ್ದಾರೆ.
ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಕೋಮಲ್ ಕುಮಾರ್ ಅವರು ಡಬಲ್ ರೋಲ್ ಮಾಡಿದ್ದಾರೆ. ಒಂದು ಪಾತ್ರದಲ್ಲಿ ಆಸ್ಥಾನವೊಂದರ ವರ್ಣಚಿತ್ರ ಕಲಾವಿದನಾಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಸಿನಿಮಾ ನಿರ್ದೇಶಕನ ಪಾತ್ರವನ್ನು ಕೋಮಲ್ ಮಾಡಿದ್ದಾರೆ. ಮೇಘನಾ ರಾಜ್ ರಾಣಿಯಾಗಿ ಮತ್ತು ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಕೋಮಲ್ ಹೊಸ ಸಿನಿಮಾ ‘ತೆನಾಲಿ DA LLB’; ಮೊದಲ ಬಾರಿ ಲಾಯರ್ ಪಾತ್ರ
ಪ್ರಮೋದ್ ಶೆಟ್ಟಿ, ವಜ್ರಧೀರ್ ಜೈನ್, ಪ್ರಕಾಶ್ ತುಮ್ಮಿನಾಡ್, ಉತ್ಸವ್, ರಾಘು ರಾಮನಕೊಪ್ಪ, ಕಾರ್ತಿಕ್ ರಾವ್, ಸಿರಿಜಾ, ವರ್ಧನ್, ರಾಧಿಕ ರಾವ್ ದಿವ್ಯಶ್ರೀ, ಕರಣ್, ಅಕ್ಷತಾ, ಅರಸು, ಮಹೇಶ್, ಚಿತ್ರಕಲಾ, ನಾಗರಾಜ್ , ಉಮೇಶ್ ಕಿನ್ನಾಳ್, ರಾಧಾಕೃಷ್ಣ, ಮನೀಶ್ ಶೆಟ್ಟಿ, ಮಹಾಬಲೇಶ್ವರ ಭಟ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಿರ್ದೇಶಕ ಸಂದೇಶ್ ಶೆಟ್ಟಿ ಆಜ್ರಿ ಸಹ ಒಂದು ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.