
ಬೆಂಗಳೂರು, ಮಾರ್ಚ್ 19: ಯುಗಾದಿ, ರಂಜಾನ್ ಹಬ್ಬ ಮತ್ತು ಸುದೀರ್ಘ ವಾರಾಂತ್ಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರಿನತ್ತ ತೆರಳುವ ಪ್ರಯಾಣಿಕರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ ಭಾರಿ ಜನಸಂದಣಿ ಕಂಡುಬಂದಿದೆ. ಬಸ್ಸುಗಳು ಕೂಡ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವುದು ಕಂಡುಬಂದಿದೆ. ಸೀಟು ಸಿಗದೆ ಪರದಾಡುತ್ತಿರುವ ಜನರು, ಲಗೇಜ್ ಸಮೇತವಾಗಿ ರಾತ್ರಿಯಿಡೀ ನಿಲ್ದಾಣದಲ್ಲೇ ಜಾಗರಣೆ ಮಾಡುವಂತಾಯಿತು.
ಜನರು ಊರಿಗೆ ಹೋಗಲು ಮೆಜೆಸ್ಟಿಕ್ನತ್ತ ಧಾವಿಸಿದ್ದರಿಂದ ಕಾರ್ಪೊರೇಷನ್ ರಸ್ತೆ, ಮೈಸೂರು ಬ್ಯಾಂಕ್ ರಸ್ತೆ ಮತ್ತು ಕೆ.ಆರ್. ಮಾರ್ಕೆಟ್ ರಸ್ತೆ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ಹೆಚ್ಚುವರಿ ವಾಹನಗಳು ರಸ್ತೆಗಿಳಿದಿದ್ದರ ನಡುವೆ ಸಂಜೆ ಸುರಿದ ಮಳೆಯೂ ಟ್ರಾಫಿಕ್ ಸಮಸ್ಯೆ ಹೆಚ್ಚಿಸಿತು.