
ಬೆಂಗಳೂರು, ಏಪ್ರಿಲ್ 01: ಮಂಗಳವಾರ ಬೆಳಗ್ಗೆ ತೆಲಂಗಾಣ ಮೂಲದ ಟೆಕ್ಕಿ ದಂಪತಿ ಆತ್ಮಹತ್ಯೆ (Suicide) ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಪ್ರಾಥಮಿಕವಾಗಿ ಕೌಟುಂಬಿಕ ಕಲಹದ ಹಿನ್ನೆಲೆ ಗಂಡ-ಹೆಂಡತಿ ಇಬ್ಬರೂ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಟೆಕ್ಕಿ ಸಾವಿಗೆ ನಿಜವಾದ ಕಾರಣ ಈಗ ಬಯಲಾಗಿದೆ. ಕೃತಕ ಬುದ್ಧಿಮತ್ತೆ (AI) ಹೊಡೆತಕ್ಕೆ ಕೆಲಸ ಕಳೆದುಕೊಂಡಿದ್ದ ಭಾನು ಚಂದರ್ ರೆಡ್ಡಿ, ಖಿನ್ನತೆಯಿಂದ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ತೆಲಂಗಾಣ ಮೂಲದ 32 ವರ್ಷದ ಭಾನು ಚಂದರ್ ರೆಡ್ಡಿ ಕುಂಟಾ ಮತ್ತು ಪತ್ನಿ ಬಿಬಿ ಶಾಜಿಯಾ ಸಿರಾಜ್ (31) ಎರಡು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅವರ ಅಂತರ್ಧರ್ಮೀಯ ವಿವಾಹದ ಬಗ್ಗೆ ಶಾಜಿಯಾ ಕುಟುಂಬಕ್ಕೆ ತಿಳಿದೇ ಇರಲಿಲ್ಲ ಎಂದು ತನಿಖೆ ವೇಳೆ ಗೊತ್ತಾಗಿದೆ. ಹೀಗಾಗಿಯೇ ತೆಲಂಗಾಣದಲ್ಲಿ ಸಮಸ್ಯೆ ಆಗಿರಬಹುದು ಅದಕ್ಕಾಗಿಯೇ 8 ತಿಂಗಳ ಹಿಂದೆ ದಂಪತಿ ಬೆಂಗಳೂರಿಗೆ ಬಂದು ನೆಲೆಸಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೆಕ್ಕಿ ಮೃತ ದೇಹದ ಪಕ್ಕ ಸಿಕ್ಕ ಚೀಟಿ
ಮಲ್ಟಿ ನ್ಯಾಶನಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಾಜಿಯಾ, ಮಂಗಳವಾರ ಬೆಳಗ್ಗೆ 7.30ಕ್ಕೆ ತನ್ನ ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳಿದ್ದಳು. ಈ ವೇಳೆ ಪತಿ ಬಾಗಿಲು ತೆರೆಯದ ಕಾರಣ ಬಳಿಕ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಳು. ಒಳಗಿನಿಂದ ಲಾಕ್ ಆಗಿದ್ದ ಬಾಗಿಲು ಒಡೆದು ನೋಡಿದಾಗ ರೆಡ್ಡಿ ಮೃತ ಪತ್ತೆಯಾಗಿತ್ತು. ಮೃತದೇಹದ ಪಕ್ಕ ಒಂದು ಚೀಟಿಯೂ ಪತ್ತೆಯಾಗಿತ್ತು. ಈ ವೇಳೆ ಸುಮಾರು 20 ನಿಮಿಷಗಳ ಕಾಲ ಘಟನಾ ಸ್ಥಳದಲ್ಲೇ ಇದ್ದ ಶಾಜಿಯಾ, ದಿಕ್ಕು ತೋಚದಂತಾಗಿ, ಯಾರಿಗೂ ತಿಳಿಯದಂತೆ 17ನೇ ಮಹಡಿಗೆ ತೆರಳಿ ಅಲ್ಲಿಂದ ಜಿಗಿದು ಪ್ರಾಣ ಬಿಟ್ಟಿದ್ದಾಳೆ ಎನ್ನಲಾಗಿದೆ.
ವರ್ಷಕ್ಕೆ 80 ಲಕ್ಷ ರೂ, ಪ್ಯಾಕೇಜ್ ಇದ್ದವ ಜಾಬ್ ಎಐಗೆ ಬಲಿ!
ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಭಾನು ಚಂದರ್ ರೆಡ್ಡಿ ವರ್ಷಕ್ಕೆ ಸುಮಾರು 80 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಕುಟುಂಬ ಹೇಳುವಂತೆ ಅಮೆರಿಕಾದಲ್ಲೇ ಒಂದು ಸಣ್ಣ ಮನೆ ಖರೀದಿಸಿದ್ದಲ್ಲದೆ, ತನ್ನ ಕುಟುಂಬಕ್ಕಾಗಿ ತೆಲಂಗಾಣದಲ್ಲೂ ಮತ್ತೊಂದು ಮನೆ ನಿರ್ಮಿಸಿದ್ದನು. ಆದರೆ ಕೃತಕ ಬುದ್ಧಿಮತ್ತೆ (AI) ಪರಿಣಾಮದಿಂದ ಉದ್ಯೋಗ ಕಳೆದುಕೊಂಡಿದ್ದು ಆತನಿಗೆ ಮಾನಸಿಕ ಆಘಾತವನ್ನುಂಟುಮಾಡಿತ್ತು.ಇದೇ ಕಾರಣವನ್ನು ಆತ ತನ್ನ ಡೆತ್ನೋಟ್ನಲ್ಲಿಯೂ ಬರೆದಿದ್ದ ಎನ್ನಲಾಗಿದೆ.
ಇದನ್ನೂ ಓದಿ ಬೆಂಗಳೂರಿನಲ್ಲಿ ತೆಲಂಗಾಣದ ಯುವ ದಂಪತಿ ಸಾವು; ಪತಿಯ ಶವ ಕಂಡು 17ನೇ ಮಹಡಿಯಿಂದ ಜಿಗಿದ ಪತ್ನಿ!
ಉದ್ಯೋಗ ಕಳೆದುಕೊಂಡ ನಂತರ ಭಾರತಕ್ಕೆ ಮರಳಿದ ರೆಡ್ಡಿ, ಹೊಸ ಕೆಲಸಕ್ಕಾಗಿ ನಿರಂತರವಾಗಿ ಪ್ರಯತ್ನಿಸುತ್ತಿದ್ದನು. ಆದರೆ ಅವಕಾಶಗಳು ಸಿಗದೇ ಹೋದ ಕಾರಣ ಆತಂಕ ಮತ್ತು ಒತ್ತಡ ಹೆಚ್ಚಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಕುಟುಂಬದವರು ಮತ್ತು ಪತ್ನಿ ಶಾಜಿಯಾ ಅವನಿಗೆ ಬೆಂಬಲವಾಗಿ ನಿಂತಿದ್ದರು ಎಂಬುದೂ ತಿಳಿದುಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.