
ಮರಣಿಸಿದವರ ಅಥವಾ ನಾವೇ ಮರಣಿಸಿದ ಹಾಗೆ ಕನಸು ಬಿದ್ದರೆ ಅದು ಶುಭವೇ ಅಥವಾ ಅಶುಭವೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಸ್ವಪ್ನಶಾಸ್ತ್ರವು ಈ ಬಗ್ಗೆ ಬಹಳ ವಿಶೇಷವಾದ ವಿಶ್ಲೇಷಣೆಗಳನ್ನು ನೀಡುತ್ತದೆ. ಕನಸು ಬಿದ್ದ ಸ್ಥಳ (ಮನೆ, ಹೋಟೆಲ್, ದೇವಸ್ಥಾನ, ಕಚೇರಿ) ಕೂಡ ವಿಶ್ಲೇಷಣೆಗೆ ಮುಖ್ಯವಾಗುತ್ತದೆ. ಆದರೆ, ಇಂದಿನ ಮುಖ್ಯ ವಿಚಾರವು ಮರಣದ ಬಗ್ಗೆ. ನಾವು ಸತ್ತ ಹಾಗೆ ಅಥವಾ ನಮ್ಮ ಮನೆಯಲ್ಲಿ ಬಂಧುಗಳೆಲ್ಲಾ ಸೇರಿರುವ ಹಾಗೆ, ನಾವು ದೂರ ಹೋಗಿರುವ ಹಾಗೆ ಕನಸುಗಳು ಗೋಚರಿಸುತ್ತವೆ. ಕೆಲವೊಮ್ಮೆ ಶವಸಂಸ್ಕಾರದಲ್ಲಿ ಭಾಗಿಯಾಗುವಂತೆ ಅಥವಾ ಬೇರೆಯವರು ಮರಣಿಸಿದಂತೆ ಕನಸುಗಳು ಬೀಳುತ್ತವೆ.
ಇಂತಹ ಕನಸುಗಳು ಶುಭವೇ. ಇದು ಶುಭವನ್ನು ತರುತ್ತದೆ ಮತ್ತು ತುಂಬಾ ಒಳ್ಳೆಯದಾಗುತ್ತದೆ. ನಿಮಗೆ ಅದೃಷ್ಟ ಕೂಡಿ ಬರುತ್ತದೆ, ನಿಮ್ಮ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುತ್ತವೆ, ಮತ್ತು ಒಳಿತಾಗುವ ಯೋಗ ಕೂಡಿ ಬರುತ್ತದೆ. ಬೇರೆಯವರು ಸತ್ತ ಕನಸು ಬಂದರೆ ಅವರಿಗೆ ಆಯುಷ್ಯ ವೃದ್ಧಿಯಾಗುತ್ತದೆ. ನಾವೇ ಸತ್ತ ಹಾಗೆ ಕನಸು ಬಂದರೆ, ನಾವು ಕಷ್ಟಗಳಿಂದ ಪಾರಾಗುತ್ತೇವೆ, ಸಂಕಟಗಳು ದೂರವಾಗುತ್ತವೆ, ದೋಷಗಳು ನಿವಾರಣೆಯಾಗುತ್ತವೆ ಮತ್ತು ಅದೃಷ್ಟ ಕೂಡಿ ಬರುತ್ತದೆ ಎಂಬ ಭಾವನೆಗಳು ಮೂಡುತ್ತವೆ. ಯಾರೂ ಸಹ ಇಂತಹ ಕನಸುಗಳಿಂದ ಹೆದರಬೇಕಾಗಿಲ್ಲ ಅಥವಾ ಚಿಂತೆ ಮಾಡಬೇಕಾಗಿಲ್ಲ.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?
ಬ್ರಹ್ಮ ವೈವರ್ತ ಪುರಾಣದಲ್ಲಿಯೇ ಇದರ ಬಗ್ಗೆ ಉಲ್ಲೇಖವಿದೆ. ಬ್ರಹ್ಮ ವೈವರ್ತ ಪುರಾಣದಲ್ಲಿ “ಯಪಶ್ಚತಿ ಮೃತಂ ಸ್ವಪ್ನೇಸ ಭವೇಶಚಿರ ಜೀವಿಚ ಆರೋಗೋ ರೋಗಿಣಂ ದುಃಖಿ ಸುಖಿನಂಚ ಸಿಕಿಭವೇತ” ಎಂಬ ಶ್ಲೋಕವನ್ನು ಹೇಳಲಾಗಿದೆ. ಈ ಶ್ಲೋಕದ ಪ್ರಕಾರ, ಕನಸಿನಲ್ಲಿ ಮರಣವನ್ನು ಕಂಡವರು ದೀರ್ಘಾಯುಷಿಗಳಾಗುತ್ತಾರೆ, ರೋಗಿಗಳು ಆರೋಗ್ಯವಂತರಾಗುತ್ತಾರೆ ಮತ್ತು ದುಃಖಿಗಳು ಸುಖಿಗಳಾಗುತ್ತಾರೆ. ಇಂತಹ ಕನಸುಗಳು ಬಂದಾಗ ಬಹಳಷ್ಟು ಶುಭವಾಗುತ್ತದೆ, ತುಂಬಾ ಒಳ್ಳೆಯದಾಗುತ್ತದೆ. ನಿಮ್ಮ ಕುಟುಂಬದಲ್ಲಿ ನಿಮಗೆ ತಿಳಿದಿರುವ ಯಾರಾದರೂ ಸತ್ತಿರುವಂತೆ ಕನಸು ಬಂದರೆ, ಅವರಿಗೆ ಶುಭವಾಗುತ್ತದೆ. ನಮಗೆ ನಮ್ಮದೇ ಕನಸು ಬಂದಾಗ ನಮ್ಮ ಆಯುಷ್ಯ ವೃದ್ಧಿಯಾಗುತ್ತದೆ, ಸಂಕಟಗಳು ದೂರವಾಗುತ್ತವೆ. ಇದರಿಂದ ನಮಗೆ ಯಾವುದೇ ಕೆಟ್ಟದಾಗುವುದಿಲ್ಲ ಅಥವಾ ಮರಣ ಸಂಭವಿಸುವುದಿಲ್ಲ. ಅಂತಹ ನಕಾರಾತ್ಮಕ ಆಲೋಚನೆಗಳು ಬೇಡ.
ಕನಸಿನ ಭಾವನೆಗೆ ತಕ್ಕ ಹಾಗೆ, ಹನುಮನ ದರ್ಶನ ಮಾಡಿಕೊಳ್ಳಿ ಅಥವಾ ಸಾಧ್ಯವಾದರೆ ಶಿವನ ದರ್ಶನ ಮಾಡಿಕೊಳ್ಳಿ. ಶಿವನ ದೇವಸ್ಥಾನದಲ್ಲಿ ಒಂದು ಅರ್ಚನೆ ಮಾಡಿಸಿಕೊಳ್ಳಿ ಮತ್ತು ವಿಭೂತಿಯನ್ನು ಧಾರಣೆ ಮಾಡಿಕೊಳ್ಳಿ. ಇದರಿಂದ ತುಂಬಾನೇ ಒಳ್ಳೆಯದಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ