ಜನ ವಿಶ್ವಾಸ ವಿಧೇಯಕ 2026: ಸಣ್ಣ ತಪ್ಪುಗಳಿಗೆ ಶಿಕ್ಷೆಯಿಲ್ಲ, ದಂಡವಷ್ಟೇ

ಜನ ವಿಶ್ವಾಸ ವಿಧೇಯಕ 2026: ಸಣ್ಣ ತಪ್ಪುಗಳಿಗೆ ಶಿಕ್ಷೆಯಿಲ್ಲ, ದಂಡವಷ್ಟೇ

ಲೋಕಸಭೆಯಲ್ಲಿ 2026ರ ಮಾರ್ಚ್‌ 27ರಂದು ಮಂಡನೆಯಾದ ಮಹತ್ವದ ‘ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026’ (Jan Vishwas Amendment Bill) ಏಪ್ರಿಲ್‌ 1ರಂದು ಅಂಗೀಕಾರಗೊಂಡಿತು. ಮರುದಿನವೇ ರಾಜ್ಯಸಭೆಯಲ್ಲೂ ಇದಕ್ಕೆ ಅನುಮೋದನೆ ದೊರೆಯಿತು. ಸಣ್ಣಪುಟ್ಟ ತಾಂತ್ರಿಕ ತಪ್ಪುಗಳಿಗೆ ಜೈಲು ಶಿಕ್ಷೆಯ ಬದಲು ಕೇವಲ ದಂಡ ವಿಧಿಸುವ ಮೂಲಕ ಉದ್ಯಮಸ್ನೇಹಿ ವಾತಾವರಣ (Ease of Doing Business) ನಿರ್ಮಿಸುವುದು ಈ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ. ಇದು ಏಕರೂಪದ ಆಡಳಿತಾತ್ಮಕ ವ್ಯವಸ್ಥೆಯನ್ನು ಜಾರಿಗೊಳಿಸಲಿದೆ.

24 ಸದಸ್ಯರ ಆಯ್ಕೆ ಸಮಿತಿಯು 49 ಸಭೆಗಳನ್ನು ನಡೆಸಿ, ನಾನಾ ಸಚಿವಾಲಯಗಳು, ತಜ್ಞರು ಹಾಗೂ ಉದ್ಯಮ ವಲಯದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ವಿಧೇಯಕಕ್ಕೆ ಅಂತಿಮ ರೂಪ ನೀಡಲಾಗಿದೆ. ಈ ಸುಧಾರಣಾ ವಿಧೇಯಕವು 80 ಕೇಂದ್ರೀಯ ಕಾನೂನುಗಳ 784 ನಿಬಂಧನೆಗಳನ್ನು ಬದಲಾಯಿಸಿದೆ. 42 ಕೇಂದ್ರೀಯ ಕಾನೂನುಗಳಲ್ಲಿದ್ದ 183 ಕ್ರಿಮಿನಲ್‌ ದಂಡನೆಗಳನ್ನು ರದ್ದುಪಡಿಸಲಾಗಿದೆ. ಒಟ್ಟಾರೆ 717 ನಿಬಂಧನೆಗಳನ್ನು ಕ್ರಿಮಿನಲ್‌ ದಂಡನೆಯಿಂದ ಮುಕ್ತಗೊಳಿಸಲಾಗಿದ್ದು, ಉಳಿದ 67 ನಿಬಂಧನೆಗಳನ್ನು ಜನಜೀವನವನ್ನು ಸುಗಮಗೊಳಿಸುವ ಗುರಿಯೊಂದಿಗೆ ಮಾರ್ಪಡಿಸಲಾಗಿದೆ.

ವಿವಿಧ ವಲಯಗಳಲ್ಲಿನ ಪ್ರಮುಖ ಸುಧಾರಣೆಗಳು

ಔಷಧ ಮತ್ತು ಸೌಂದರ್ಯವರ್ಧಕ ಕಾಯಿದೆ (1940): ರಿಟರ್ನ್‌ ಸಲ್ಲಿಸದಿರುವುದು, ದಾಖಲೆಗಳನ್ನು ಇಟ್ಟುಕೊಳ್ಳದಿರುವುದು ಮುಂತಾದ ಸಣ್ಣಪುಟ್ಟ ಪ್ರಮಾದಗಳನ್ನು ಇನ್ನು ಮುಂದೆ ಕ್ರಿಮಿನಲ್‌ ಅಪರಾಧಗಳೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ಔಷಧ ತಯಾರಕ ಕಂಪನಿಗಳ ವಿರುದ್ಧದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ.

ಇದನ್ನೂ ಓದಿ: ಇರಾನ್​ನ ಅಣು ವಿದ್ಯುತ್ ಸ್ಥಾವರಕ್ಕೆ ಹಾನಿ; ವಿಕಿರಣ ಸೋರಿಕೆಯಿಂದ ಗಲ್ಫ್ ರಾಷ್ಟ್ರಗಳಲ್ಲಿ ಸರ್ವನಾಶ?

ಮೋಟಾರು ವಾಹನಗಳ ಕಾಯಿದೆ (1988): ಸಣ್ಣ ಉಲ್ಲಂಘನೆಗಳು ಮತ್ತು ಗಂಭೀರ ಅಪರಾಧಗಳನ್ನು ಸ್ಪಷ್ಟವಾಗಿ ಪ್ರತ್ಯೇಕಿಸಲಾಗಿದೆ. ಸಣ್ಣಪುಟ್ಟ ನಿಯಮ ಉಲ್ಲಂಘನೆಗಳಿಗೆ ಜೈಲು ಶಿಕ್ಷೆ ಬದಲು ಹಣಕಾಸಿನ ದಂಡ ವಿಧಿಸಲಾಗುತ್ತದೆ. ಆದರೆ, ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕರ ಕಲ್ಯಾಣಕ್ಕೆ ಧಕ್ಕೆಯಾಗಬಲ್ಲ ಅಪರಾಧಗಳಿಗೆ ಕ್ರಿಮಿನಲ್‌ ದಂಡನೆ ಮುಂದುವರಿಯಲಿದೆ. ಇದು ರಾಜ್ಯವ್ಯಾಪಿ ನೋಂದಣಿ (Registration) ಪ್ರಕ್ರಿಯೆಯನ್ನೂ ಸುಗಮಗೊಳಿಸಿದೆ.

ಕಾನೂನು ಮಾಪನ ಕಾಯಿದೆ: ಪ್ಯಾಕೇಜಿಂಗ್‌ ಅಥವಾ ಲೇಬಲಿಂಗ್‌ನಲ್ಲಿನ ಸಣ್ಣ ತಪ್ಪುಗಳನ್ನು ಕ್ರಿಮಿನಲ್‌ ಅಪರಾಧಗಳಿಂದ ಮುಕ್ತಗೊಳಿಸಲಾಗಿದೆ. ಈ ಹಿಂದೆ ಇಂತಹ ತಪ್ಪುಗಳಿಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಇರುತ್ತಿತ್ತು.

ಮೂಲಸೌಕರ್ಯ ಮತ್ತು ಇತರೆ ಕಾಯ್ದೆಗಳು: ದಿಲ್ಲಿ ಅಭಿವೃದ್ಧಿ ಕಾಯಿದೆ (1957), ದಿಲ್ಲಿ ಮುನಿಸಿಪಲ್‌ ಕೌನ್ಸಿಲ್‌ ಕಾಯಿದೆ (1994) ಅಡಿಯಲ್ಲಿನ ಸಣ್ಣಪುಟ್ಟ ನಾಗರಿಕ ಉಲ್ಲಂಘನೆಗಳಿಗೆ ಜೈಲು ಶಿಕ್ಷೆಯನ್ನು ರದ್ದುಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಯಿದೆ (1956)ಯನ್ನು ಸುಧಾರಿಸಲಾಗಿದ್ದು, ಲಾಜಿಸ್ಟಿಕ್ಸ್‌ ವಲಯದಲ್ಲಿ ದಂಡಗಳನ್ನು ಸರಳಗೊಳಿಸಲಾಗಿದೆ.

ಉದ್ಯಮಶೀಲತೆಗೆ ಉತ್ತೇಜನ ಮತ್ತು ನ್ಯಾಯಾಲಯಗಳಿಗೆ ರಿಲೀಫ್

ಜನ ವಿಶ್ವಾಸ ವಿಧೇಯಕವು ‘ಮೇಕ್‌ ಇನ್‌ ಇಂಡಿಯಾ’ ಮತ್ತು ‘ಸ್ಟಾರ್ಟಪ್‌ ಇಂಡಿಯಾ’ ಅಭಿಯಾನಗಳಿಗೆ ದೊಡ್ಡ ಮಟ್ಟದ ಬೆಂಬಲ ನೀಡಲಿದೆ. ಭಾರತದಲ್ಲಿರುವ 2.12 ಲಕ್ಷ ಡಿಪಿಐಐಟಿ ಮಾನ್ಯತೆ ಪಡೆದ ಸ್ಟಾರ್ಟಪ್‌ಗಳಿಗೆ ಮುಂದಿನ ಹಂತದ ಬೆಳವಣಿಗೆಗೆ ಇದು ವರದಾನವಾಗಲಿದೆ. ಸುದೀರ್ಘ ಕಾನೂನು ಹೋರಾಟಗಳನ್ನು ಎದುರಿಸುವ ಬದಲು, ಸಣ್ಣಪುಟ್ಟ ಪ್ರಮಾದಗಳನ್ನು ತಾವೇ ಸರಿಪಡಿಸಿಕೊಳ್ಳಲು ಉದ್ಯಮಿಗಳಿಗೆ ಅವಕಾಶ ಸಿಗಲಿದೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಸತ್ತರಾ? ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸುದ್ದಿ; ನಿಜವಾ, ವದಂತಿಯಾ?

ಈ ಹಿಂದೆ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿದ್ದ ಸಂಕೀರ್ಣ ಲೈಸೆನ್ಸ್‌-ಕೋಟಾ ವ್ಯವಸ್ಥೆ ಹಾಗೂ 2012ರ ಪೂರ್ವಾನ್ವಯ ತೆರಿಗೆ (Retrospective tax) ತಿದ್ದುಪಡಿಯಿಂದಾಗಿ ಜಾಗತಿಕ ಹೂಡಿಕೆದಾರರಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆಯಾಗಿತ್ತು. ಆದರೆ, ಕಳೆದೊಂದು ದಶಕದಲ್ಲಿ ಮೋದಿ ಸರ್ಕಾರವು ಕಾನೂನುಗಳನ್ನು ಸರಳಗೊಳಿಸುವ ಮೂಲಕ ಹೂಡಿಕೆದಾರರ ವಿಶ್ವಾಸವನ್ನು ಮರಳಿ ಗಳಿಸಿದೆ. ಇದರ ಪರಿಣಾಮವಾಗಿ ಭಾರತವು ವಿಶ್ವಬ್ಯಾಂಕ್‌ನ “ಈಸ್‌ ಆಫ್‌ ಡೂಯಿಂಗ್‌ ಬಿಸಿನೆಸ್‌” ರ‍್ಯಾಂಕಿಂಗ್‌ನಲ್ಲಿ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದ್ದು, 2025-26ರಲ್ಲಿ $790.86 ಶತಕೋಟಿ ಡಾಲರ್‌ ರಫ್ತು ವಹಿವಾಟು ನಡೆಸಿದೆ.

ಈ ವಿಧೇಯಕವು 700ಕ್ಕೂ ಹೆಚ್ಚು ಸಣ್ಣಪುಟ್ಟ ಕ್ರಿಮಿನಲ್‌ ಅಪರಾಧಗಳನ್ನು ರದ್ದುಪಡಿಸಿರುವುದರಿಂದ, ನ್ಯಾಯಾಲಯಗಳ ಮೇಲಿನ ಒತ್ತಡ ಶೇ. 25-30ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ನ್ಯಾಯಾಲಯಗಳಲ್ಲಿ 4.8 ಕೋಟಿ ಪ್ರಕರಣಗಳು ಬಾಕಿ ಇದ್ದು, ಇನ್ನು ಮುಂದೆ ಸಣ್ಣ ತಪ್ಪುಗಳಿಗೆ ಕೋರ್ಟ್ ಬದಲು ಸಂಬಂಧಪಟ್ಟ ಅಧಿಕಾರಿಗಳೇ ತೀರ್ಪು ನೀಡಲಿದ್ದಾರೆ.

ಒಟ್ಟಾರೆಯಾಗಿ, ಜನ ವಿಶ್ವಾಸ (ತಿದ್ದುಪಡಿ) ವಿಧೇಯಕ 2026ರ ಮೂಲಕ ಸರ್ಕಾರವು “ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ” (Minimum Government, Maximum Governance) ಎಂಬ ಆಶಯವನ್ನು ಸಾಕಾರಗೊಳಿಸಿದೆ. ದಂಡ ಆಧಾರಿತ ವ್ಯವಸ್ಥೆಯಿಂದ ವಿಶ್ವಾಸ ಆಧಾರಿತ ಆಡಳಿತ ಮಾದರಿಗೆ ಬದಲಾಗುವ ಮೂಲಕ ಇದು ಭಾರತದ ಉದ್ದಿಮೆಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದಲ್ಲದೆ, ನಾಗರಿಕ ಸ್ನೇಹಿ ವ್ಯವಸ್ಥೆಯನ್ನು ರೂಪಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *