
ಕೊಪ್ಪಳ, ಏಪ್ರಿಲ್ 7: ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ವ್ಯಕ್ತಿಯೊಬ್ಬರು ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಮನ್ನೇರಾಳ ಗ್ರಾಮದ ಶರಣಪ್ಪ ಗೊಲ್ಲರ ಎಂಬುವವರು ಎಣ್ಣೆ ಸವರಿ ಜಾರುತ್ತಿದ್ದ 120 ಅಡಿ ಎತ್ತರದ ಹಾಲುಗಂಭವನ್ನು ಲೀಲಾಜಾಲವಾಗಿ ಏರಿ ನೆರೆದಿದ್ದ ಸಾವಿರಾರು ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ತಂಡೋಪತಂಡವಾಗಿ ಭಾಗವಹಿಸುತ್ತಾರೆ. ಕಂಬದ ಮೇಲೆ ಕೊಬ್ಬರಿ ಉತ್ತತ್ತಿ ಕಟ್ಟಿರಲಾಗುತ್ತದೆ. ಕಂಬದ ಮೇಲಿಂದ ಎಣ್ಣೆ ಬಿಡುತ್ತಿದ್ದರೂ ಲೆಕ್ಕಿಸದೆ, ಶರಣಪ್ಪ ಅವರು ತೋರಿದ ದೈಹಿಕ ಕ್ಷಮತೆ ಮತ್ತು ಭಕ್ತಿಗೆ ಜನ ಶಹಬ್ಬಾಸ್ ಎಂದಿದ್ದಾರೆ.