Headlines

ಮೊಬೈಲ್ ಕೊಡದಿದ್ದಕ್ಕೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆ: ಪೊಲೀಸ್ ಕಮಿಷನರ್ ಹೇಳಿದ್ದೇನು ನೋಡಿ – Kannada News | Hubballi Tragedy: 14 Year Old Boy ends life After Mother Takes Away Mobile Phone; Police Chief Issues Advisory

ಮೊಬೈಲ್ ಕೊಡದಿದ್ದಕ್ಕೆ ಹುಬ್ಬಳ್ಳಿಯಲ್ಲಿ 14 ವರ್ಷದ ಬಾಲಕ ಆತ್ಮಹತ್ಯೆImage Credit source: tv9

ಹುಬ್ಬಳ್ಳಿ, ಏಪ್ರಿಲ್ 24: ಮೊಬೈಲ್ ಗೇಮ್‌ಗೆ (Mobile Game) ದಾಸನಾಗಿದ್ದ ಬಾಲಕನೊಬ್ಬ ತಾಯಿ ಫೋನ್ ಕಿತ್ತುಕೊಂಡಿದ್ದಕ್ಕೆ ಮನನೊಂದು ನೇಣಿಗೆ ಶರಣಾಗಿರುವ ದಾರುಣ ಘಟನೆ ಹುಬ್ಬಳ್ಳಿಯ ಉದಯನಗರದಲ್ಲಿ ನಡೆದಿದೆ. 14 ವರ್ಷದ ಸಮರ್ಥ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಉದಯನಗರದ ನಿವಾಸಿಯಾದ ಸಮರ್ಥ್ ಕಳೆದ ಕೆಲವು ದಿನಗಳಿಂದ ‘ಫ್ರೀಫೈರ್’ (Free Fire) ನಂತಹ ಆನ್‌ಲೈನ್ ಗೇಮ್‌ಗಳಿಗೆ ವಿಪರೀತ ಅಡಿಕ್ಟ್ ಆಗಿದ್ದ. ಗುರುವಾರ ರಾತ್ರಿ ಸತತವಾಗಿ ಗೇಮ್ ಆಡುತ್ತಿದ್ದ ಮಗನಿಗೆ ತಾಯಿ ಬುದ್ಧಿವಾದ ಹೇಳಿದ್ದಾರೆ. ‘ಮೊಬೈಲ್ ಸಾಕು ಮಾಡು, ಓದಿಕೊಳ್ಳುವ ಕಡೆ ಗಮನ ಕೊಡು’ ಎಂದು ಹೇಳಿ ಆತನ ಕೈಲಿದ್ದ ಮೊಬೈಲ್ ಕಿತ್ತುಕೊಂಡಿದ್ದಾರೆ. ಇದರಿಂದ ತೀವ್ರವಾಗಿ ನೊಂದ ಸಮರ್ಥ್, ತಕ್ಷಣ ತನ್ನ ಕೋಣೆಗೆ ಹೋಗಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದಾನೆ.

ಸುಮಾರು 15-20 ನಿಮಿಷಗಳಾದರೂ ಬಾಲಕ ಹೊರಬಾರದಿದ್ದಾಗ ಆತಂಕಗೊಂಡ ತಂದೆ, ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಈ ವೇಳೆ ಮಗ ಸೀರೆಯಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಬಾಗಿಲು ಮುರಿದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೋಷಕರಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಕಿವಿಮಾತು


ಘಟನೆ ಕುರಿತು ಪ್ರತಿಕ್ರಿಯಿಸಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಇದು ಅತ್ಯಂತ ದುರದೃಷ್ಟಕರ ಘಟನೆ. ಮಕ್ಕಳಿಗೆ ಮೊಬೈಲ್ ನೀಡುವ ಮುನ್ನ ಪೋಷಕರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಮಕ್ಕಳು ಮೊಬೈಲ್ ಅಡಿಕ್ಷನ್‌ಗೆ ಒಳಗಾದಾಗ ಪೋಷಕರನ್ನೇ ಬ್ಲ್ಯಾಕ್‌ಮೇಲ್ ಮಾಡುವ ಹಂತಕ್ಕೆ ತಲುಪುತ್ತಾರೆ. ಒಂದು ವೇಳೆ ಮಕ್ಕಳು ಮೊಬೈಲ್‌ಗೆ ಹೆಚ್ಚು ಅಡಿಕ್ಟ್ ಆಗಿದ್ದರೆ, ಏಕಾಏಕಿ ಮೊಬೈಲ್‌ನಿಂದ ದೂರವಿಡಲು ಪ್ರಯತ್ನಿಸಬಾರದು. ಬದಲಾಗಿ, ಅವರ ಶಿಕ್ಷಕರು ಅಥವಾ ಮಕ್ಕಳ ತಜ್ಞರ ಜೊತೆ ಸಮಾಲೋಚಿಸಿ, ನಿಧಾನವಾಗಿ ಈ ವ್ಯಸನದಿಂದ ಹೊರಬರುವಂತೆ ಮಾಡಬೇಕು.ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ

ಮೊಬೈಲ್ ಅಡಿಕ್ಷನ್ ಎಂದಿಗೂ ಒಳ್ಳೆಯದಲ್ಲ. ಮೊಬೈಲ್‌ನಲ್ಲಿ ಗೇಮ್ ಆಡಿ ಜೀವನದಲ್ಲಿ ಯಾರೂ ಯಶಸ್ವಿಯಾದ ಉದಾಹರಣೆಗಳಿಲ್ಲ. ಮೊಬೈಲ್ ಅನ್ನು ರಚನಾತ್ಮಕ ಉದ್ದೇಶಗಳಿಗಾಗಿ ಬಳಸಬಹುದು. ಗ್ರಾಮರ್, ಭಾಷೆ, ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು YouTube ನಲ್ಲಿ ಲಭ್ಯವಿರುವ ಕೋರ್ಸ್‌ಗಳ ಮೂಲಕ ಮುಂದಿನ ವರ್ಷದ ವಿಷಯಗಳನ್ನು ಸಿದ್ಧಪಡಿಸಲು ಮೊಬೈಲ್ ಉಪಯುಕ್ತವಾಗಿದೆ ಎಂದು ಶಶಿಕುಮಾರ್ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *