ಇಂದು (ಏಪ್ರಿಲ್ 24) ಡಾ ರಾಜ್ಕುಮಾರ್ (Dr Rajkumar) ಅವರ ಜಯಂತಿ. ಸಾವಿರಾರು ಮಂದಿ ಅಭಿಮಾನಿಗಳು ಡಾ ರಾಜ್ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಅಭಿಮಾನಿಗಳು, ಅಣ್ಣಾವ್ರ ನೆನಪಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ ಶಿಬಿರಗಳನ್ನು ಆಯೋಜನೆ ಮಾಡಿದ್ದಾರೆ. ಅಣ್ಣಾವ್ರ ನೆನಪಿನಲ್ಲಿ ಗೀತ-ಗಾಯನ ಕಾರ್ಯಕ್ರಮವೂ ಇಂದು ನಡೆದಿದೆ. ರಾಜ್ಯದ ಹಲವು ಮೂಲೆಗಳಲ್ಲಿ ಅಣ್ಣಾವ್ರ ಜಯಂತಿಯನ್ನು ಆಚರಿಸಲಾಗುತ್ತಿದೆ. ಕರ್ನಾಟಕಕ್ಕಾಗಿ, ಕನ್ನಡಕ್ಕಾಗಿ ಮಹತ್ವದ ಯೋಗದಾನ ನೀಡಿದ ಅಪ್ರತಿಮ ಕಲಾವಿದರನ್ನು ಸ್ಮರಿಸಲಾಗುತ್ತಿದೆ. ಆದರೆ ಇದರ ಮಧ್ಯೆ, ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸ ಅವರು ಅಣ್ಣಾವ್ರ ಸಮಾಧಿ ಸ್ಥಳದ ಬಗ್ಗೆ ಕೊಂಕು ತೆಗೆದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ಚೇತನ್ ಅಹಿಂಸ, ಅಣ್ಣಾವ್ರ ಸಮಾಧಿ ಸ್ಥಳಕ್ಕೆ ಜಾಗ ಕೊಟ್ಟಿರುವ ಸರ್ಕಾರದ ಕ್ರಮವನ್ನು ಟೀಕೆ ಮಾಡಿದ್ದಾರೆ. ‘ನಾವು ರಾಜಕುಮಾರ್ ಅವರನ್ನು ಒಬ್ಬ ಮಹಾನ್ ಕಲಾವಿದರಾಗಿ ಗೌರವಿಸುತ್ತೇವೆ. ಆದರೆ, ಬೆಂಗಳೂರು ನಗರ ಮಧ್ಯದಲ್ಲಿ 2006ರಲ್ಲಿ ಒಬ್ಬ ನಟನ “ಸಮಾಧಿ ಕಾಂಪ್ಲೆಕ್ಸ್”ಗಾಗಿ 2.5 ಎಕರೆ ಭೂಮಿಯನ್ನು ನೀಡುವುದು ತಿಳುವಳಿಕೆಯ ನಿರ್ಧಾರವಾಗಿತ್ತೇ ಎಂಬುದನ್ನು ಪ್ರಶ್ನಿಸಬೇಕಾಗಿದೆ. 21ನೇ ಶತಮಾನದ ಭಾರತದಲ್ಲಿ ಪ್ರಮುಖ ಹೋರಾಟವೇ ಭೂಮಿ. ಸರ್ಕಾರವು ಅದನ್ನು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಾಗೂ ಸಾರ್ವಜನಿಕ ಉಪಯೋಗಕ್ಕೆ ತಕ್ಕಂತೆ ಹಂಚಬೇಕು. ಮತಗಳ ಲಾಭದ ಅವಕಾಶವಾದಿ ಉದ್ದೇಶದಿಂದ ಅಲ್ಲ’ ಎಂದಿದ್ದಾರೆ.
ಆದರೆ ಚೇತನ್ ಅಹಿಂಸ ಅವರ ಈ ಕೊಂಕು ಮಾತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ‘ಯಾವುದೋ ಅಮಲಿನಲ್ಲಿ ಈ ವ್ಯಕ್ತಿ ಪೋಸ್ಟ್ ಹಂಚಿಕೊಂಡಿದ್ದಾರೆ’ ಎಂದು ಒಬ್ಬರು ಟೀಕೆ ಮಾಡಿದರೆ. ಇನ್ನು ಕೆಲವರು ರಾಜ್ಕುಮಾರ್ ಅವರು ಕನ್ನಡ ಭಾಷೆಗೆ, ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಚೇತನ್ ಅಹಿಂಸಗೆ ನೆನಪು ಮಾಡುವ ಪ್ರಯತ್ನ ಮಾಡಿದ್ದಾರೆ. ಇನ್ನು ಕೆಲವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಇನ್ನಿತರರ ಸಮಾಧಿ ಸ್ಥಳಗಳ ಉಲ್ಲೇಖವನ್ನು ಮಾಡಿದ್ದಾರೆ.
ರಾಜ್ಕುಮಾರ್ ಅವರ ಸಮಾಧಿ ಕಂಠೀರವ ಸ್ಟುಡಿಯೋನಲ್ಲಿದೆ. ಇದೇ ಸ್ಥಳದಲ್ಲಿ ಅಂಬರೀಶ್, ಪುನೀತ್ ರಾಜ್ಕುಮಾರ್ ಅವರ ಸಮಾಧಿಗಳೂ ಇವೆ. ಕಂಠೀರವ ಸ್ಟುಡಿಯೋ ಸಹ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಕುಮಾರ್ ಸಮಾಧಿ ಸ್ಥಳ ಅಥವಾ ಇನ್ನಿತರೆ ಸಮಾಧಿ ಸ್ಥಳಗಳನ್ನು ಯಾವುದೇ ವಾಣಿಜ್ಯ ಲಾಭಕ್ಕೆ ಯಾರೂ ಸಹ ಬಳಸಿಕೊಂಡಿಲ್ಲ. ಈ ಬಗ್ಗೆ ಈ ವರೆಗೆ ಯಾರೂ ಪ್ರಶ್ನೆಯನ್ನೂ ಸಹ ಮಾಡಿರಲಿಲ್ಲ. ಆದರೆ ಇದೀಗ ಚೇತನ್ ಅಹಿಂಸ ಅವರು ವಿನಾಕಾರಣ ಕೊಂಕು ತೆಗೆದಿದ್ದಾರೆ. ಇದಕ್ಕೆ ಅಣ್ಣಾವ್ರ ಅಭಿಮಾನಿಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿದ್ದು, ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ