IPL 2026: ಐಪಿಎಲ್ನ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್ಗಳಲ್ಲಿ 205 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಿದ ಆರ್ಸಿಬಿ 18.5 ಓವರ್ಗಳಲ್ಲಿ 206 ರನ್ಗಳಿಸಿ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಆರ್ಸಿಬಿ ತಂಡವು ಇಷ್ಟೊಂದು ಸುಲಭವಾಗಿ ಚೇಸ್ ಮಾಡಲು ದೇವದತ್ ಪಡಿಕ್ಕಲ್ ಕಾರಣ ಎಂದು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.
ದೇವದತ್ ಪಡಿಕ್ಕಲ್ ಚೆಂಡನ್ನು ಎಲ್ಲೂ ಸ್ಲಾಗ್ ಮಾಡದೇ ಕೇವಲ ಕ್ರಿಕೆಟಿಂಗ್ ಶಾಟ್ಗಳ ಮೂಲಕವೇ ರನ್ ಗಳಿಸುತ್ತಾರೆ. ಅವರು ಬೌಲರ್ಗಳಿಗೆ ಯಾವುದೇ ಅವಕಾಶ ನೀಡದೆ ಅಷ್ಟು ವೇಗವಾಗಿ ರನ್ ಗಳಿಸುವುದು ಅಪರೂಪದ ಸಂಗತಿ.
ಕಗಿಸೊ ರಬಾಡ ಅವರ ಮೊದಲ ಎಸೆತವನ್ನೇ ಬೌಂಡರಿಗಟ್ಟಿದ ಪಡಿಕ್ಕಲ್ ಅವರ ಆತ್ಮವಿಶ್ವಾಸವು ತಂಡದ ಮೇಲಿದ್ದ ಒತ್ತಡವನ್ನು ಕಡಿಮೆ ಮಾಡಿತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ದೇವದತ್ ಪಡಿಕ್ಕಲ್ ಅತ್ಯುತ್ತಮವಾಗಿ ಬ್ಯಾಟ್ ಬೀಸಿದ ಪರಿಣಾಮ ಆರ್ಸಿಬಿ ತಂಡವು ಯಾವುದೇ ಒತ್ತಡವಿಲ್ಲದೇ 206 ರನ್ಗಳಿಸಲು ಸಾಧ್ಯವಾಯಿತು. ಹೀಗಾಗಿ ಆರ್ಸಿಬಿ ತಂಡದ ಚೇಸಿಂಗ್ನ ಶ್ರೇಯಸ್ಸು ದೇವದತ್ ಪಡಿಕ್ಕಲ್ಗೆ ಸಲ್ಲಬೇಕು ಎಂದು ವಿರಾಟ್ ಕೊಹ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೌಲರ್ಗಳಿಗೂ ಬಹುಪರಾಕ್:
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ ಟೈಟಾನ್ಸ್ ಒಂದು ಹಂತದಲ್ಲಿ 230-235 ರನ್ ಗಳಿಸುವ ಸೂಚನೆ ನೀಡಿತ್ತು. ಆದರೆ ಆರ್ಸಿಬಿ ಬೌಲರ್ಗಳು ಕೊನೆಯ ಓವರ್ಗಳಲ್ಲಿ ಅದ್ಭುತವಾಗಿ ಪುಟಿದೇಳುವ ಮೂಲಕ ಅವರನ್ನು 205 ರನ್ಗಳಿಗೆ ನಿಯಂತ್ರಿಸಿದರು.
ನಮ್ಮ ಬೌಲರ್ಗಳು 20-25 ರನ್ಗಳನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದು ಗೆಲುವಿಗೆ ಪ್ರಮುಖ ಕಾರಣವಾಯಿತು ಎಂದು ಕೊಹ್ಲಿ ಬೌಲರ್ಗಳ ಶ್ರಮವನ್ನು ಸಹ ಶ್ಲಾಘಿಸಿದ್ದಾರೆ.
ಕೊಹ್ಲಿ ಮತ್ತು ಪಡಿಕ್ಕಲ್ ಜುಗಲ್ಬಂಧಿ:
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 81 ರನ್ (8 ಬೌಂಡರಿ, 4 ಸಿಕ್ಸರ್) ಸಿಡಿಸಿ ‘ಪಂದ್ಯ ಪುರುಷ’ ಪ್ರಶಸ್ತಿ ಭಾಜನರಾದರು. ಆದರೆ, ಕೊಹ್ಲಿ ಅವರ ಪ್ರಕಾರ ಈ ಗೆಲುವಿನ ನಿಜವಾದ ಶಕ್ತಿ ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್. ಪಡಿಕ್ಕಲ್ ಕೇವಲ 27 ಎಸೆತಗಳಲ್ಲಿ 55 ರನ್ ಚಚ್ಚುವ ಮೂಲಕ ತಂಡಕ್ಕೆ ಅಗತ್ಯವಿದ್ದ ವೇಗವನ್ನು ನೀಡಿದರು. ಈ ಜೋಡಿ ಕೇವಲ 59 ಎಸೆತಗಳಲ್ಲಿ 115 ರನ್ಗಳ ಅಮೋಘ ಜೊತೆಯಾಟವಾಡಿ ಪಂದ್ಯವನ್ನು ಎದುರಾಳಿಗಳ ಕೈಯಿಂದ ಕಿತ್ತುಕೊಂಡಿತು.
ಇದನ್ನೂ ಓದಿ: 1,376 ಕಿ.ಮೀ ದೂರದ ತವರು ಮೈದಾನದಲ್ಲಿ 2 ಪಂದ್ಯಗಳನ್ನಾಡಲಿದೆ RCB
ಪರಿಣಾಮ ಆರ್ಸಿಬಿ ತಂಡವು 18.5 ಓವರ್ಗಳಲ್ಲಿ 206 ರನ್ಗಳಿಸಿ 5 ವಿಕೆಟ್ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ.